ಶಿಲಾನ್ಯಾಸವಾಗಿ ಕಾಮಗಾರಿ ಪ್ರಗತಿಯಲ್ಲಿರುವಾಗ ಮತ್ತೊಮ್ಮೆ ಶಿಲಾನ್ಯಾಸ ಅಗತ್ಯವೇ-ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್ ಪ್ರಶ್ನೆ

0

ಪುತ್ತೂರು: ಅಮೃತ ನಗರೋತ್ಥಾನ 2ನೇ ಹಂತದ ರೂ.4.67 ಕೋಟಿ ಮತ್ತು ನಗರೋತ್ಥಾನ ಪ್ರೋತ್ಸಾಹ ಧನ ರೂ. 3 ಕೋಟಿ ಅನುದಾನದಡಿ ಕೈಗೊಳ್ಳುವ ಬೆದ್ರಾಳದ ಸೇತುವೆ ಸಹಿತ ವಿವಿಧ ಕಾಮಗಾರಿಗಳಿಗೆ ಹಿಂದಿನ ಶಾಸಕರಾದ ಸಂಜೀವ ಮಠಂದೂರು ಅವರು 2023ರ ಮಾ.8ರಂದು ಶಿಲಾನ್ಯಾಸ ಮಾಡಿದ್ದರು. ಈ ಕಾಮಗಾರಿಯೂ ಪ್ರಗತಿಯಲ್ಲಿದೆ. ಆದರೆ ಇದೀಗ ಮತ್ತೊಮ್ಮೆ ಈಗಿನ ಶಾಸಕರು ಬೆದ್ರಾಳದಲ್ಲೇ ಆದ ಕಾಮಗಾರಿಗೆ ಶಿಲಾನ್ಯಾಸ ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದು ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್ ತಿಳಿಸಿದ್ದಾರೆ.


ನಗರೋತ್ಥಾನದಲ್ಲಿ ಮೊದಲನೇ ಹಂತದಲ್ಲಿ ರೂ. 30 ಕೋಟಿ ಅನುದಾನ ಬಿಡುಗಡೆಯಾಗಿತ್ತು ಬಳಿಕ ಆಗಿನ ಶಾಸಕ ಸಂಜೀವ ಮಠಂದೂರು ಅವರ ಮುಂದಾಳತ್ವದಲ್ಲಿ ಮತ್ತೆ ರೂ. 3 ಕೋಟಿ ಅನುದಾನ ಬಿಡುಗಡೆಯಾಗಿತ್ತು. ರೂ. 30 ಕೋಟಿಯ ಯೋಜನೆಯಲ್ಲಿ ಪ್ರತಿ ವಾರ್ಡ್‌ನಲ್ಲಿ ರೂ.25ಲಕ್ಷದ ಕಾಮಗಾರಿಯೂ ನಡೆಯುತ್ತಿದೆ. ಈ ನಡುವೆ ನಗರಸಭೆಯ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಅಂದಾಜು ರೂ. 3ಕೋಟಿಯ 3 ಪ್ಯಾಕೇಜ್ ಹಾಸನದ 1ನೇ ದರ್ಜೆ ಗುತ್ತಿಗೆದಾರ ರಘುನಾಥ್ ವೈ ಆರ್ ಅವರಿಗೆ ಟೆಂಡರ್ ಆಗಿ ಕಾರ್ಯಾದೇಶ ನೀಡಲಾಗಿತ್ತು. ಅವರು 2024ನೇ ಸೆ. 19ರ ಒಳಗೆ ಗುತ್ತಿಗೆ ಕರಾರಿನಂತೆ ಮೂರು ಕಾಮಗಾರಿಗಳನ್ನು ಪೂರ್ಣಗೊಳಿಸಿ ನಗರಸಭೆಗೆ ಹಸ್ತಾಂತರಿಸಬೇಕೆಂದು ಆದೇಶ ಪತ್ರದಲ್ಲೂ ಇದೆ. ಕಾಮಗಾರಿಯೂ ನಡೆಯುತ್ತಾ ಇದೆ. ಮಾಜಿ ಶಾಸಕರು ಶಿಲಾನ್ಯಾಸ ಮಾಡಿದ ಕಾರ್ಯಕ್ರಮದ ವರದಿಗಳು ಪತ್ರಿಕೆಯಲ್ಲಿ ಬಂದಿದೆ. ಆದರೆ ಈಗಿನ ಶಾಸಕರು ಮಾಜಿ ಶಾಸಕರು ಮಾಡಿದ ಶಿಲಾನ್ಯಾಸಗಳಿಗೆ ಮತ್ತೊಮ್ಮೆ ಶಿಲಾನ್ಯಾಸ ಮಾಡುವ ಮೂಲಕ ಸಾರ್ವಜನಿಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕೆ.ಜೀವಂಧನರ್ ಜೈನ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here