ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ- ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ನಡುಮನೆ, ಉಪಾಧ್ಯಕ್ಷರಾಗಿ ಕೇಶವ ಗೌಡ ಬರೆಮೇಲು ಅವಿರೋಧ ಆಯ್ಕೆ

0

ಪುತ್ತೂರು: ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಗ್ರಾಮ ಪಂಚಾಯತ್ ಸದಸ್ಯ ಜಗನ್ನಾಥ ಶೆಟ್ಟಿ ನಡುಮನೆ ಹಾಗೂ ಉಪಾಧ್ಯಕ್ಷರಾಗಿ ಕೇಶವ ಗೌಡ ಬರೆಮೇಲುರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ:
ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗಾಗಿ ಡಿ.30ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 7 ಹಾಗೂ ಬಿಜೆಪಿ ಬೆಂಬಲಿತ 5 ಅಭ್ಯರ್ಥಿಗಳು ಜಯಗಳಿಸಿದ್ದರು. ಜ.8ರಂದು ನಡೆದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಜಗನ್ನಾಥ ಶೆಟ್ಟಿ ನಡುಮನೆ ಅಧ್ಯಕ್ಷ ಸ್ಥಾನಕ್ಕೆ ಮತ್ತು ಕೇಶವ ಗೌಡ ಬರೆಮೇಲುರವರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ನಡುಮನೆ ಹಾಗೂ ಉಪಾಧ್ಯಕ್ಷರಾಗಿ ಕೇಶವ ಗೌಡ ಬರೆಮೇಲು ಅವಿರೋಧವಾಗಿ ಆಯ್ಕೆಗೊಂಡರು. ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಂದ ಅಭಿನಂದನೆ:
ಅಧ್ಯಕ್ಷರಾಗಿ ಆಯ್ಕೆಗೊಂಡ ಜಗನ್ನಾಥ ಶೆಟ್ಟಿ ನಡುಮನೆ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಕೇಶವ ಗೌಡ ಬರೆಮೇಲುರವರಿಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಚುನಾವಣಾ ಉಸ್ತುವಾರಿಯಾಗಿದ್ದ ನಿರಂಜನ್ ರೈ ಮಠಂತಬೆಟ್ಟು ಮಾತನಾಡಿ, 50 ವರ್ಷದ ಹಿಂದೆ ಹಿರಿಯರು ಪ್ರಾರಂಭಿಸಿದ ಕೋಡಿಂಬಾಡಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಇವತ್ತು ಒಳ್ಳೆಯ ಆಡಳಿತ ಮಂಡಳಿ ಆಯ್ಕೆಯಾಗಿದೆ. ಶಾಸಕರ ಆಶಯದಂತೆ ಇಲ್ಲಿ ಎಲ್ಲರೂ ಒಟ್ಟಿಗೆ ಒಂದೇ ತಾಯಿಯ ಮಕ್ಕಳಂತೆ ಪಕ್ಷಬೇಧ ಮರೆತು ಕೆಲಸ ಮಾಡಬೇಕು. ಇವತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ ನಿರ್ದೇಶಕರು ಕೂಡ ಪಾಲ್ಗೊಂಡು ಅಭಿನಂದನೆ ಸಲ್ಲಿಸಿದ್ದಾರೆ. ಈ ಮೂಲಕ ಚುನಾವಣೆ ಬಳಿಕ ನಾವೆಲ್ಲರೂ ಒಂದೇ ಎಂದು ತೋರಿಸಿಕೊಟ್ಟಿದ್ದಾರೆ. ಇದು ತುಂಬಾ ಸಂತೋಷವಾದ ವಿಚಾರ ಎಂದರು. ಎಲ್ಲರೂ ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಬೇಕು. ದೇವರು ಇಂತಹ ಯೋಗ ಭಾಗ್ಯವನ್ನು ಕರುಣಿಸಲಿ. ಹೇಗೆ ಹಾಲು ಬಿಳಿಯಾಗಿರುತ್ತದೆಯೋ ಹಾಗೆಯೇ ಮನಸ್ಸು ಕೂಡ ಬಿಳಿಯಾಗಿರಲಿ ಎಂದು ಹೇಳಿ ಅವರು ಶುಭಹಾರೈಸಿದರು. ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎ.ಮುರಳೀಧರ ರೈ ಮಠಂತಬೆಟ್ಟು ಮಾತನಾಡಿ, ಉತ್ತಮ ಸಂಘದಲ್ಲಿ ಉತ್ತಮ ಕೆಲಸ ಮಾಡುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹಾರೈಸಿದರು. ಸಂಘದ ಮಾಜಿ ಕಾರ್ಯದರ್ಶಿ ಸುಭಾಷ್ ನಾಯಕ್ ನೆಕ್ಕರಾಜೆ ಮಾತನಾಡಿ 50 ವರ್ಷದ ಹಿನ್ನೆಲೆಯುಳ್ಳ ಸಂಘ ಯಾವುದೇ ಲೋಪದೋಷ ಇಲ್ಲದ ಸಂಘವಾಗಿ ಬೆಳೆದಿದೆ. ಪುತ್ತೂರು ತಾಲೂಕಿನಲ್ಲಿ ಪ್ರಥಮವಾಗಿ ಚುನಾಯಿತಗೊಂಡ ಸಹಕಾರ ಸಂಘವಾಗಿದೆ. ಎಲ್ಲರೂ ಒಂದೇ ಮನೋಭಾವನೆಯಿಂದ ಕೆಲಸ ಮಾಡಿ ಎಂದು ಹೇಳಿ ಶುಭಹಾರೈಸಿದರು.

ನಿರ್ದೇಶಕರಾದ ಅಶೋಕ್ ಗೌಡ ಮೇಗಿನಹಿತ್ತಿಲು, ಕೆ. ಚಂದ್ರಶೇಖರ ರೈ ಕೆದಿಕಂಡೆಗುತ್ತು, ವಿಜಯಲಕ್ಷ್ಮಿ ಆರ್. ನಾಯಕ್ ನಿಡ್ಯ, ಎಲ್ಯಣ್ಣ ಗೌಡ ಮೇಲಿನಹಿತ್ತಿಲು, ರತ್ನವರ್ಮ ಆಳ್ವ ಮಿತ್ತಳಿಕೆ, ರೇಣುಕಾ ಮುರಳೀಧರ ರೈ ಎಂ., ರಾಧಿಕಾ ಆರ್. ಸಾಮಂತ್ ನೆಕ್ಕರಾಜೆ, ಬಾಬು ಆಚಾರ್ಯ ಕೊಂಬಕೋಡಿ, ಕಾಂಗ್ರೆಸ್ ವಲಯ ಅಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲು, ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಮುಖಂಡರಾದ ಉಲ್ಲಾಸ್ ಕೋಟ್ಯಾನ್, ಶಿವಪ್ರಸಾದ್ ರೈ ಎಂ., ಯೋಗೀಶ್ ಸಾಮಾನಿ ಸಂಪಿಗೆದಡಿ, ಪ್ರಭಾಕರ ಸಾಮಾನಿ, ವಿಕ್ರಂ ಶೆಟ್ಟಿ ಅಂತರ, ಯತೀಶ್ ಶೆಟ್ಟಿ ಬರೆಮೇಲು, ಸಂಘದ ಸಿಬಂದಿಗಳಾದ ನಾರಾಯಣ ಹಾಗೂ ಕವಿತಾ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ರಮೇಶ್ ಸ್ವಾಗತಿಸಿ ನಿರ್ದೇಶಕ ಸಂತೋಷ್ ಕುಮಾರ್ ರೈ ಕೆದಿಕಂಡೆಗುತ್ತು ವಂದಿಸಿದರು.

50 ವರ್ಷ ಇತಿಹಾಸದ ಸಂಘವನ್ನು “ಎ” ಗ್ರೇಡ್‌ಗೆ ತರುತ್ತೇವೆ-ಜಗನ್ನಾಥ ಶೆಟ್ಟಿ
ಅಧ್ಯಕ್ಷರಾಗಿ ಆಯ್ಕೆಗೊಂಡ ಜಗನ್ನಾಥ ಶೆಟ್ಟಿ ನಡುಮನೆ ಅಭಿನಂದನೆ ಸ್ವೀಕರಿಸಿ ಮಾತನಾಡಿ, 50 ವರ್ಷ ಇತಿಹಾಸವಿರುವ ಸಹಕಾರ ಸಂಘವನ್ನು “ಎ” ಗ್ರೇಡ್‌ಗೆ ತರುವುದು ನಮ್ಮ ಉದ್ದೇಶ. ರೈತರಿಗೆ ದೂರು ಪೆಟ್ಟಿಗೆ ಅಳವಡಿಸುತ್ತೇವೆ. ರೈತರಿಗೆ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುತ್ತೇವೆ. ಶಾಸಕರ ಆಶಯದಂತೆ ಸಂಸ್ಥೆ ಬೆಳಗಬೇಕು ಎನ್ನುವ ದೃಷ್ಟಿಕೋನದಿಂದ ನಾವೆಲ್ಲರೂ ಒಂದೇ ಮನಸ್ಸಿನಿಂದ ಕೆಲಸ ಮಾಡುತ್ತೇವೆ. ಸಂಘದ ಬೆಳವಣಿಗೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು. ಆಯ್ಕೆಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು ಸರ್ವರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here