ಅಂದ್ರಟ್ಟದಲ್ಲಿ ಬೆದ್ರಾಳ ಹೊಳೆಗೆ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ – ಶಾಂತಿಗೋಡು-ಚಿಕ್ಕಮುಡ್ನೂರು ಗ್ರಾಮಗಳೆರಡರ ಸಂಪರ್ಕ

0

ಅನುದಾನ ಸುಲಭ, ಪಕ್ಕದ ರಸ್ತೆ ಬಿಟ್ಟುಕೊಟ್ಟವರನ್ನು ಪ್ರಶಂಸಿಸಬೇಕು – ಅಶೋಕ್ ಕುಮಾರ್ ರೈ

ಪುತ್ತೂರು: ಜನರ ಸಹಕಾರದಿಂದ ರಸ್ತೆಗಳು ಅಭಿವೃದ್ದಿಯಾಗಲು ಸಾಧ್ಯ. ರಸ್ತೆಗಳಿಗೆ ಅನುದಾನ ಇಡುವುದು ಸುಲಭ, ಆದರೆ ಪಕ್ಕದ ರಸ್ತೆ ಬಿಟ್ಟುಕೊಟ್ಟರೆ ಮಾತ್ರ ಜೋಡಿಸುವ ಕೆಲಸ ಆಗುತ್ತದೆ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ರಸ್ತೆ ಬಿಟ್ಟುಕೊಟ್ಟವರನ್ನು ಪ್ರಶಂಸಿಸಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಬನ್ನೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಅಂದ್ರಟ್ಟದಲ್ಲಿ ಜಿಡೆಕಲ್ಲು ರಾಗಿದಕುಮೇರು ಮತ್ತು ಶಾಂತಿಗೋಡು ಗ್ರಾಮದ ಪುರುಷರಕಟ್ಟೆ ಸಂಪರ್ಕಿಸುವ ರಸ್ತೆಗೆ ರೂ. 1.80 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಜ.9ರಂದು ಅವರು ಹೊಳೆಯ ಪಕ್ಕದಲ್ಲೇ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಈ ಭಾಗದ ಜನರಿಗೆ ಮಳೆಗಾಲದಲ್ಲಿ ನಿರಂತರ ಹೋಗಲು ಸೇತುವೆ ನಿರ್ಮಾಣ ಆಗುತ್ತದೆ. ಇದರ ಜೊತೆಗೆ ರಸ್ತೆಗೆ ಜಾಗ ಬಿಟ್ಟುಕೊಟ್ಟವರನ್ನು ಅಭಿನಂದಿಸಬೇಕೆಂದ ಅವರು ಇವತ್ತು ಅನುದಾನಗಳು ಹರಿದು ಬರುತ್ತಿದೆ. 1.80 ಕೋಟಿ ರೂ. ವೆಚ್ಚದಲ್ಲಿ ಈ ಭಾಗದಲ್ಲಿ ಸೇತುವೆ ನಿರ್ಮಾಣ ಆಗುತ್ತದೆ. ಸುಮಾರು 7.5 ಮೀಟರ್ ಅಗಲ ಮತ್ತು ಸೇತುವೆ ಎರಡು ಕಡೆಯಲ್ಲಿ 50 ಮೀಟರ್‌ನಷ್ಟು ಡಾಮರೀಕರಣ ಆಗಲಿದೆ. ಅದಷ್ಟು ಬೇಗ ಕಾಮಗಾರಿ ಮುಗಿದು ಜನರ ಬಳಕೆಗೆ ಪ್ರಯೋಜವಾಗಲಿ ಎಂದ ಅವರು ಚಿಕ್ಕಮುಡ್ನೂರು ಗ್ರಾಮಕ್ಕೆ ಈ ವರ್ಷ ಬಹಳ ಅನುದಾನ ಬಂದಿದೆ. ಯಾಕೆಂದರೆ ಕೆ.ಎಮ್.ಎಫ್ ಕೂಡಾ ಈ ಗ್ರಾಮಕ್ಕೆ ಬರುತ್ತದೆ. 170 ಕೋಟಿ ರೂಪಾಯಿ ಅನುದಾನದಲ್ಲಿ ಕೆಎಂಎಫ್ ಬಾಟ್ಲಿಂಗ್ ಪ್ಲಾಂಡ್ ಆರಂಭಗೊಳ್ಳುತ್ತದೆ. ಈಗಾಗಲೇ 15 ಎಕ್ರೆ ಜಾಗ ಖಾದಿರಿಸಲಾಗಿದೆ. ಮುಂದಿನ ದಿನ ಇನ್ನಷ್ಟು ಅನುದಾನ ನೀಡಲಾಗುತ್ತದೆ. ಒಟ್ಟಿನಲ್ಲಿ ಪುತ್ತೂರು ಟೂರಿಸಮ್ ಸೆಂಟರ್ ಆಗಬೇಕು. ಉದ್ದಿಮೆ ಬರಬೇಕು. ವಿದ್ಯಾಭ್ಯಾಸ ಇಲ್ಲದವರಿಂದ ಹಿಡಿದು ಡಬಲ್‌ಪದವಿ ಪಡೆದವರಿಗೂ ಕೆಲಸ ಸಿಗಬೇಕು ಎಂದರು.

ನರಿಮೊಗರು ಗ್ರಾ.ಪಂ ಮಾಜಿ ಸದಸ್ಯೆ ಮೋಹಿನಿ ಸುಂದರ ನಾಯ್ಕ, ತಾ.ಪಂ ಮಾಜಿ ಸದಸ್ಯ ಪರಮೇಶ್ವರ, ಕೊಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಕಾಂಗ್ರೆಸ್ ಮುಖಂಡ ಶಿವನಾಥ್ ರೈ ಮೇಗಿನಗುತ್ತು, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಕನಿಷ್ಕಚಂದ್ರ, ಕಾಂಗ್ರೆಸ್ ವಲಯಾಧ್ಯಕ್ಷ ಲ್ಯಾನ್ಸಿ, ಹರೀಶ ಪಕ್ಕಳ, ಹನೀಫ್ ಪುಣ್ಚತ್ತಾರ್, ಜುನೈದ್ ದಾಸರಮೂಲೆ, ಅವಿನಾಶ್, ನಿತೇಶ್, ಅರುಣ, ಕಾರ್ತಿಕ್, ನಝೀರ್ ಮರಕ್ಕೂರ್, ಮಹಾಲಿಂಗ ನಾಯ್ಕ, ಚಂದ್ರಕಲಾ, ರಸ್ತೆಗೆ ಜಮೀನು ಬಿಟ್ಟುಕೊಟ್ಟ ಸುಂದರ ನಾಯ್ಕ, ಗೋಪಾಲ, ಆನಂದ, ಕಾರ್ತಿಕ್ ಶೆಟ್ಟಿ, ಕಿಟ್ಟಣ್ಣ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

75 ಕೋಟಿ ರೂ. ಅನುದಾನ ಬಿಡುಗಡೆಗೆ ಪ್ರಸ್ತಾವನೆ:
ಸರಕಾರದದಿಂದ ನಿರಂತರ ಅನುದಾನ ಹರಿದು ಬರುತ್ತಿದೆ. ಈಗಾಗಲೇ ರೂ. 75 ಕೋಟಿಯ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮುಂದಿನ ತಿಂಗಳಲ್ಲಿ ರೂ.75 ಕೋಟಿ ಅನುದಾನ ಬಂದರೆ ಮುಂದೆ ಬಹುತೇಕ ರಸ್ತೆಗಳೆಲ್ಲ ಕಾಂಕ್ರೀಟಿಕರಣ ಆಗಲಿದೆ. ಇದರ ಜೊತೆಗೆ ಸರಕಾರದ ನಾಲ್ಕೈದು ಗ್ಯಾರೆಂಟಿ ಯೋಜನೆ ಜನರಿಗೆ ಬಹಳ ಪ್ರಯೋಜನ ಆಗುತ್ತಿದೆ.
-ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು

ಬಹುಕಾಲದ ಬೇಡಿಕೆ ಈಡೇರಿಕೆಯ ಹಂತಕ್ಕೆ:
ಅಂದ್ರಟ್ಟದಲ್ಲಿ ನನ್ನ ಅನುಭವಕ್ಕೆ ಬಂದಂತೆ ಸುಮಾರು ನೂರು ವರ್ಷದ ಹಳೆಯ ಹಲಗೆ ಅಣೆಕಟ್ಟು ಶಿಥಿಲಾವ್ಯವಸ್ಥೆಯಲ್ಲಿದ್ದು, ಆಗಿನ ಕಾಲದಲ್ಲೇ ಡಿ.ವಿ.ಸದಾನಂದ ಗೌಡರು ಶಾಸಕರಾಗಿದ್ದ ಸಮಯದಲ್ಲೇ ನಾವು ಸೇತುವೆಗೆ ಬೇಡಿಕೆ ಇಟ್ಟಿದ್ದೆವು. ಅದರೆ ಯಾವುದೇ ಪ್ರಯೋಜವಾಗಿಲ್ಲ. ಆ ಬಳಿಕ ರಸ್ತೆಗೆ ಜಾಗ ಬಿಟ್ಟುಕೊಟ್ಟ ಬಳಿಕ ಪಂಚಾಯತ್ ಅನುದಾನದಲ್ಲಿ ರಸ್ತೆ ಆಯಿತು. ಈಗ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರು ನಮಗೆ ಸೇತುವೆ ನಿರ್ಮಾಣ ಮಾಡಿಸುವಲ್ಲಿ ಬಹಳ ದೊಡ್ಡ ಉಪಕಾರ ಮಾಡುವ ಮೂಲಕ ಭರವಸೆ ನೀಡಿದ್ದಾರೆ.
ಆನಂದ ಗೌಡ, ರಸ್ತೆ ಫಲಾನುಭವಿ

LEAVE A REPLY

Please enter your comment!
Please enter your name here