ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ರಾಮಾಯಣ ನಿಧಿ-ಸೀತೆ ವಿಶೇಷ ಉಪನ್ಯಾಸ ಕಾರ್ಯಕ್ರಮ

0

ಸೀತೆಯ ಆದರ್ಶ ಮೌಲ್ಯಗಳು ಇಂದಿಗೂ ಪ್ರಸ್ತುತ: ವಿಜಯಲಕ್ಷ್ಮೀ ಕಟೀಲ್

ಪುತ್ತೂರು: ರಾಮನನ್ನು ಅನುಸರಿಸಿ ಬದುಕಿದವಳು ಸೀತೆ. ಅವಳ ತಾಳ್ಮೆ, ಧೈರ್ಯ,ಸ್ವಾವಲಂಬಿ ಜೀವನ ಪರಿಸ್ಥಿತಿಯನ್ನು ಎದುರಿಸಿ ಬದುಕಿದ ರೀತಿ ಇಂದು ಎಲ್ಲರಿಗೂ ಮಾದರಿ. ಸೀತೆಯ ಜೀವನ ಮೌಲ್ಯ ನಮ್ಮ ಕಣ್ಣ ಮುಂದಿದೆ. ಇಂದಿಗೂ ನಾಳೆಗೂ ಎಂದೆಂದಿಗೂ ಸೀತೆ ನಮಗೆಲ್ಲರಿಗೂ ಆದರ್ಶ ಎಂದು ಮಂಚಿ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಮತ್ತು ಬರಹಗಾರ್ತಿ ವಿಜಯಲಕ್ಷ್ಮೀ ಕಟೀಲ್ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಕೇಶವ ಸಂಕಲ್ಪ ಸಭಾಭವನದಲ್ಲಿ ಆಯೋಜಿಸಿದ ರಾಮಾಯಣ ನಿಧಿ-ಸೀತೆ ಎಂಬ ವಿಷಯದ ಕುರಿತ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೀತೆ ಒಬ್ಬಳು ಧರ್ಮ ಪರಿಪಾಲಕಿ. ಅವಳು ಎಲ್ಲ ಹೆಣ್ಣು ಮಕ್ಕಳ ಪ್ರತಿರೂಪ. ಕಷ್ಟಗಳನ್ನು ಎದುರಿಸುವ ಛಲ ಮತ್ತು ಧೈರ್ಯ ಹೆಣ್ಣು ಈಗೀನ ಮಕ್ಕಳಿಗೆ ಬರಬೇಕು. ಕಾಡಿನಲ್ಲಿ ತನ್ನ ಮಕ್ಕಳನ್ನು ಚೆನ್ನಾಗಿ ಬೆಳೆಸಿ, ತಾನು ಬದುಕಿ ಸ್ವಾವಲಂಬಿ ಜೀವನವನ್ನು ತೋರಿಸಿಕೊಟ್ಟವಳು ಸೀತೆ ಎಂದರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ ಅಯೋಧ್ಯ ರಾಮ ಮಂದಿರ ನಿರ್ಮಾಣದ ಹಿಂದೆ ಹಲವಾರು ರಾಮಭಕ್ತರ ಹೋರಾಟದ ಶ್ರಮವಿದೆ. ಯಾವುದೇ ಸಾಮಾಜಿಕ ಮಾಧ್ಯಮಗಳಿಲ್ಲದ ಕಾಲದಲ್ಲಿ ಮಸೀದಿಯನ್ನು ಕೆಡವಲು ಐವತ್ತು ಸಾವಿರ ಕರ ಸೇವಕರ ಗುಂಪು ದೇಶದ ವಿವಿಧ ಕಡೆಯಿಂದ ಬಂದಿತ್ತು. ಕೊನೆಗೆ ಹದಿನೈದು ಸಾವಿರ ಜನರು ಅಯೋಧ್ಯೆ ತಲುಪಿದರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾಗವಹಿಸಿದ ಕರ ಸೇವಕರಲ್ಲಿ ತಾವು ಒಬ್ಬರಾಗಿದ್ದು ಅಂದಿನ ಅನುಭವಗಳನ್ನು ಹಂಚಿಕೊಂಡರು. ರಾಮ ಮೌಲ್ಯದ ಕಾರಣಕ್ಕೆ ಭಾರತ ವಿಶ್ವಗುರುವಾಗಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ವತ್ಸಲಾ ರಾಜ್ಞಿ ಮಾತನಾಡಿ ನಾವು ಹೇಗೆ ಜೀವಿಸಬೇಕು ಎಂಬುದನ್ನು ರಾಮಾಯಣ ತಿಳಿಸಿಕೊಡುತ್ತದೆ. ರಾಮನ ಭಕ್ತಿ ಅವನ ಜೀವನವೆಲ್ಲವೂ ಒಂದು ಆದರ್ಶ. ನಾವೆಲ್ಲರು ನಮ್ಮ ಗ್ರಂಥ ರಾಮಾಯಣ, ವೇದ ಉಪನಿಷತ್ ಇವುಗಳ ಬಗೆಗಿನ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.ಕಾಲೇಜಿನ ವಿದ್ಯಾರ್ಥಿನಿ ದೀಪ್ತಿ ಪ್ರಭು ಪ್ರೇರಣ ಗೀತೆಯನ್ನು ಹಾಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಉಪಸ್ಥಿತರಿದ್ದರು.ಉಪನ್ಯಾಸಕಿ ದಿವ್ಯ ಜಿ ಸ್ವಾಗತಿಸಿ, ಡಾ.ಶ್ರುತಿ ವಂದಿಸಿದರು. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಧಾತ್ರಿ ಆರ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here