ಡಿ.ವಿ.ಎಸ್,ನಳಿನ್ ಕುಮಾರ್ ಭಾವಚಿತ್ರದ ಬ್ಯಾನರ್‌ಗೆ ಚಪ್ಪಲಿ ಹಾರ ಪ್ರಕರಣ-ಬಂಧಿತ ಆರೋಪಿಗಳಿಗೆ ಪೊಲೀಸ್ ದೌರ್ಜನ್ಯ ಆರೋಪ-ತನಿಖೆಗೆ ರಾಜ್ಯ ಮಾನವ ಹಕ್ಕು ಆಯೋಗ ಆದೇಶ

0

ತನಿಖೆ ನಡೆಸಿ ಏಪ್ರಿಲ್ 4ರೊಳಗೆ ವರದಿ ಸಲ್ಲಿಸಲು ಪಶ್ಚಿಮ ವಲಯ ಐಜಿಪಿಗೆ ಸೂಚನೆ
ದೂರುದಾರರ ಆರೋಪ ನಿಜವೇ ಆಗಿದ್ದಲ್ಲಿ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ

ಪುತ್ತೂರು:ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಇಲ್ಲಿನ ಬಸ್ ನಿಲ್ದಾಣದ ಬಳಿ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರ ಫೊಟೋಗಳಿದ್ದ ಬ್ಯಾನರ್‌ಗೆ ಶ್ರದ್ಧಾಂಜಲಿ ಬರಹದೊಂದಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವ ಆರೋಪದ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮಕೈಗೊಂಡು ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಪಶ್ಚಿಮ ವಲಯ ಐಜಿಪಿಯವರಿಗೆ ಆದೇಶಿಸಿದೆ.
ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕದ ಬೆಳವಣಿಗೆಯಲ್ಲಿ,ಭಾರತೀಯ ಜನತಾ ಪಾರ್ಟಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರದೊಂದಿಗೆ,‘ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಬರೆದು ಪುತ್ತೂರು ಸರ್ಕಾರಿ ಬಸ್ ನಿಲ್ದಾಣದ ಬಳಿ ಬ್ಯಾನರ್ ಅಳವಡಿಸಿ ಅದಕ್ಕೆ ಚಪ್ಪಲಿ ಹಾರ ಹಾಕಲಾಗಿತ್ತು.ಈ ಕುರಿತು ನಗರಸಭೆಯ ಆಯುಕ್ತ ಮಧು ಎಸ್.ಮನೋಹರ್ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹಿಂದೂ ಸಂಘಟನೆಯ 9 ಕಾರ್ಯಕರ್ತರನ್ನು ಆರೋಪಿಗಳೆಂದು ಬಂಧಿಸಿ ಅವರ ಮೇಲೆ ತೀವ್ರ ರೀತಿಯ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದರು ಎಂದು ಆರೋಪ ವ್ಯಕ್ತವಾಗಿತ್ತು.ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಪಡೆದುಕೊಂಡು ಎಲ್ಲೆಡೆ ಭಾರೀ ಚರ್ಚೆಗೆ ಕಾರಣವಾಗಿತ್ತು.ಪೊಲೀಸ್ ದೌರ್ಜನ್ಯಕ್ಕೆ ವ್ಯಾಪಕ ಖಂಡನೆಯೂ ವ್ಯಕ್ತವಾಗಿತ್ತು.


ನರಿಮೊಗರು ನಿವಾಸಿಗಳಾದ ವಿಶ್ವನಾಥ್ ಮತ್ತು ಮಾಧವ ಎಂಬವರನ್ನು ಆರಂಭದಲ್ಲಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.ಅವರು ನೀಡಿದ್ದ ಮಾಹಿತಿಯಾಧರಿಸಿ ಕಾರ್ಯಾಚರಣೆ ಮುಂದುವರಿಸಿ ನರಿಮೊಗ್ರು ನಿವಾಸಿಗಳಾದ ವೇಣುಗೋಪಾಲ್ ಅವರ ಪುತ್ರ ಅಭಿ ಯಾನೆ ಅವಿನಾಶ್, ಲಕ್ಷ್ಮಣ್ ಅವರ ಪುತ್ರ ಶಿವರಾಮ್, ಬಾಬು ಅವರ ಪುತ್ರ ಚೈತ್ರೇಶ್, ಪೂವಪ್ಪ ಎಂಬವರ ಪುತ್ರರಾದ ಈಶ್ವರ್, ನಿಶಾಂತ್, ಗುರುವಪ್ಪ ಎಂಬವರ ಪುತ್ರ ದೀಕ್ಷಿತ್ ಮತ್ತು ಗುರುಪ್ರಸಾದ್ ಎಂಬವರನ್ನು ಬಂಧಿಸಿದ್ದರು.ಈ ಕುರಿತು ಮಾಹಿತಿ ತಿಳಿದು ಹಿಂದೂ ಸಂಘಟನೆ ಮುಖಂಡ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರು ತಡರಾತ್ರಿಯೇ ಡಿವೈಎಸ್ಪಿ ಕಚೇರಿಗೆ ತೆರಳಿ ವಿಚಾರಿಸಿದ್ದರು.ಬಳಿಕ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಆರೋಪಿಗಳನ್ನು ಠಾಣೆಯಲ್ಲಿಯೇ ಬಿಡುಗಡೆಗೊಳಿಸಿದ್ದರು.


ಆರೋಪಿತ ಯುವಕರನ್ನು ಪೊಲೀಸರು ಬಂಧಿಸಿ ಡಿವೈಎಸ್ಪಿ ಕಚೇರಿಗೆ ಕರೆದೊಯ್ದು ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.ಡಿವೈಎಸ್ಪಿ ಡಾ|ವೀರಯ್ಯ ಹಿರೇಮಠ ಅವರ ನೇತೃತ್ವದಲ್ಲಿಯೇ ಪೊಲೀಸರು ಹಲ್ಲೆ ಮಾಡಿದ್ದರು ಎಂದು, ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಯುವಕರು ಆರೋಪಿಸಿದ್ದರು.ಪೊಲೀಸ್ ದೌರ್ಜನ್ಯ ಪ್ರಕರಣದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತಲ್ಲದೆ ಸಾರ್ವಜನಿಕವಾಗಿಯೂ ಆಕ್ರೋಶ ವ್ಯಕ್ತವಾಗಿ ತಪ್ಪಿತಸ್ಥ ಪೊಲೀಸರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿತ್ತು.ಪೊಲೀಸರಿಂದ ಹಲ್ಲೆಗೊಳಗಾಗಿದ್ದ ಯುವಕ ಅವಿನಾಶ್ ಎಂಬವರ ತಂದೆ ವೇಣುನಾಥ ನರಿಮೊಗರು ಎಂಬವರು ನೀಡಿದ್ದ ದೂರಿನ ಮೇರೆಗೆ ಡಿವೈಎಸ್ಪಿ ಪುತ್ತೂರು, ಪಿಎಸ್‌ಐ ಪುತ್ತೂರು ಗ್ರಾಮಾಂತರ ಮತ್ತು ಗ್ರಾಮಾಂತರ ಕಾನ್‌ಸ್ಟೇಬಲ್ ಹರ್ಷಿತ್‌ರವರ ವಿರುದ್ಧ ಸೆಕ್ಷನ್ 323,324,506ಡಿ/ತಿ 34ಐಪಿಸಿಯಡಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಘಟನೆಗೆ ಸಂಬಂಧಿಸಿ ಸಂಪ್ಯದ ಆಗಿನ ಎಸ್.ಐ.ಶ್ರೀನಾಥ್ ರೆಡ್ಡಿ ಮತ್ತು ಕಾನ್‌ಸ್ಟೇಬಲ್ ಹರ್ಷಿತ್ ಅವರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿತ್ತು.ಡಿವೈಎಸ್ಪಿ ವಿರುದ್ಧವೂ ಕ್ರಮಕೈಗೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿತ್ತು.ಘಟನೆ ಕುರಿತು ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳುವುದಾಗಿ ಆಗಿನ ಎಡಿಜಿಪಿ ಅಲೋಕ್ ಕುಮಾರ್ ಅವರು ಭರವಸೆ ನೀಡಿದ್ದರು.ಬಳಿಕದ ಬೆಳವಣಿಗೆಯಲ್ಲಿ ಡಿವೈಎಸ್ಪಿ ವೀರಯ್ಯ ಹಿರೇಮಠ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು.ಪೊಲೀಸ್ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಅವರು ಬಳಿಕ ನ್ಯಾಯಾಲಯಕ್ಕೆ ಶರಣಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.


ಆರೋಪಿಗಳಿಗೆ ಪೊಲೀಸ್ ದೌರ್ಜನ್ಯ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ:
ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಆರೋಪಿಗಳಿಗೆ ವಿಚಾರಣೆ ಸಂದರ್ಭ ದೌರ್ಜನ್ಯ ಎಸಗಲಾಗಿದೆ ಎಂದು ಪೊಲೀಸರ ವಿರುದ್ಧ ಮತ್ತು ಬಿಜೆಪಿ ನಾಯಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶದ ಸಂದೇಶ ವೈರಲ್ ಆಗಿತ್ತು.ಪೊಲೀಸರು ನಡೆಸಿರುವ ದೌರ್ಜನ್ಯದಿಂದ ಯುವಕರ ಮೈಮೇಲೆ ಆಗಿರುವ ರಕ್ತಸಿಕ್ತ ಗಾಯಗಳು ಹಾಗೂ ತಡರಾತ್ರಿ ಪುತ್ತೂರು ಡಿವೈಎಸ್‌ಪಿ ಕಚೇರಿಯಿಂದ ಬಿಡುಗಡೆಗೊಂಡು ಹೊರಬರುತ್ತಿರುವ ಆರೋಪಿಗಳು ನಡೆದಾಡಲೂ ಕಷ್ಟ ಪಡುವ ರೀತಿಯಲ್ಲಿ ಹೆಜ್ಜೆ ಹಾಕುತ್ತಿರುವುದು ಎನ್ನಲಾದ ವಿಡಿಯೋ ತುಣುಕು ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಆರೋಪಿತ ಯುವಕರ ಬೆನ್ನು, ಸೊಂಟದ ಹಿಂಭಾಗದಲ್ಲಿ ಪೊಲೀಸರ ಥಳಿತದಿಂದಾಗಿದ್ದೆನ್ನಲಾದ ಗಾಯಗಳು ವೈರಲ್ ಆಗಿರುವ ಫೊಟೋದಲ್ಲಿ ಎದ್ದು ಕಾಣುತ್ತಿತ್ತು.ಒಟ್ಟಾರೆ ಈ ಘಟನೆ ಇಡೀ ರಾಜ್ಯದಲ್ಲಿಯೇ ಸುದ್ದಿಯಾಗಿ ಭಾರೀ ಚರ್ಚೆಗೆ ಕಾರಣವಾಗಿತ್ತು.


ಮಾನವ ಹಕ್ಕು ಆಯೋಗಕ್ಕೆ ದೂರು:
ಪೊಲೀಸ್ ದೌರ್ಜನ್ಯ ಘಟನೆಗೆ ಸಂಬಂಧಿಸಿದಂತೆ ವಕೀಲ ಗಿರೀಶ್ ಭಾರದ್ವಾಜ್ ಅವರು ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು.ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕಾನೂನು ಕ್ರಮಕೈಗೊಂಡು ನೊಂದ ಯುವಕರಿಗೆ ನ್ಯಾಯ ಒದಗಿಸಿಕೊಡುವಂತೆ ಅವರು ದೂರಿನಲ್ಲಿ ಆಗ್ರಹಿಸಿದ್ದರು.ಈ ದೂರಿನ ಹಿನ್ನೆಲೆಯಲ್ಲಿ, ಪೊಲೀಸ್ ದೌರ್ಜನ್ಯ ಪ್ರಕರಣದ ಆರೋಪದ ದೂರಿನ ಕುರಿತು ತನಿಖೆ ನಡೆಸಿ ಇದೇ ಏಪ್ರಿಲ್ ೪ರೊಳಗೆ ವರದಿಯನ್ನು ಆಯೋಗಕ್ಕೆ ಕಳುಹಿಸುವಂತೆ ಆರಕ್ಷಕ ಮಹಾನಿರೀಕ್ಷಕರು, ಪಶ್ಚಿಮ ವಲಯ ಮಂಗಳೂರು ಇವರಿಗೆ ಆಯೋಗ ಆದೇಶ ನೀಡಿದೆ.ದೂರುದಾರ ಅವಿನಾಶ್ ನೀಡಿರುವ ದೂರು ಅರ್ಜಿಯಲ್ಲಿ ಆಪಾದಿಸಿರುವ ವಿಚಾರ ನಿಜವೇ ಆಗಿದ್ದಲ್ಲಿ ಅದು ಸದರಿ ನೊಂದ ವ್ಯಕ್ತಿಗಳ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ಅವರ ಪಶ್ಚಿಮ ವಲಯ ಐಜಿಪಿಯವರಿಗೆ ಬರೆದ ಪತ್ರದಲ್ಲಿ ನಮೂದಿಸಲಾಗಿದೆ.

LEAVE A REPLY

Please enter your comment!
Please enter your name here