ರಾಜ್ಯ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದ ಪೂರ್ವಭಾವಿ ಸಭೆ

0

ಗ್ಯಾರಂಟಿ ಯೋಜನೆ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಶಕ್ತಿ ತುಂಬಲಿದೆ – ಸೊರಕೆ
ಸಮಾವೇಶಕ್ಕೆ ಪುತ್ತೂರುನಿಂದ 50 ಸಾವಿರ ಕಾರ್ಯಕರ್ತರು – ಅಶೋಕ್ ಕುಮಾರ್ ರೈ
ಮತದಾರರು ಮತ್ತೆ ಕಾಂಗ್ರೆಸ್ ಬೆಂಬಲಿಸಲಿದ್ದಾರೆ – ಶಶಿಧರ್ ಹೆಗ್ಡೆ

ಪುತ್ತೂರು: ಒಂದು ಕಾಲದಲ್ಲಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ಗೆದ್ದಿತ್ತು.ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸತ್ತಿಲ್ಲ, ಜಿಲ್ಲೆಯಲ್ಲಿ ಪಕ್ಷಕ್ಕೆ ಸಾಕಷ್ಟು ಸಂಖ್ಯೆಯ ಕಾರ್ಯಕರ್ತರೂ ಇದ್ದಾರೆ.ಕಳೆದ ಚುನಾವಣೆಯಲ್ಲಿ ನಾವು ಸೋತಿರಬಹುದು ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗತ ವೈಭವ ಮರುಕಳಿಸಲಿದೆ.ರಾಜ್ಯದ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಶಕ್ತಿ ತುಂಬಲಿದ್ದು ನಾವು ಮತ್ತೆ ಜಿಲ್ಲೆಯಲ್ಲಿ ಪಕ್ಷದ ಗತ ವೈಭವವನ್ನು ಮರಳಿ ಪಡೆಯಲಿzವೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಮಂಗಳೂರುನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶದ ಪೂರ್ವಭಾವಿಯಾಗಿ ಪುತ್ತೂರು ಉದಯಗಿರಿ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ಯಾವ ರಾಜ್ಯದಲ್ಲೂ ಇಲ್ಲದ ಗ್ಯಾರಂಟಿ ಯೋಜನೆಯನ್ನು ನಾವು ಜನತೆಗೆ ನೀಡಿzವೆ, ಇದು ಪ್ರತೀ ಕುಟುಂಬಕ್ಕೂ ತಲುಪಿದೆ, ಕೋಟ್ಯಂತರ ಕುಟುಂಬಗಳಿಗೆ ಇದರಿಂದ ಶಕ್ತಿ ತುಂಬಿದೆ, ಶಕ್ತಿ ಯೋಜನೆಯಿಂದ 1.50 ಕೋಟಿ ಮಹಿಳೆಯರು ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ,ಉಚಿತ ವಿದ್ಯುತ್, ಗೃಹಲಕ್ಷ್ಕಿ, ಪಡಿತರ ಹಣ ಪ್ರತೀ ಮಹಿಳೆಯ ಖಾತೆಗೆ ಜಮೆಯಾಗುತ್ತಿದ್ದು ಕೋಟ್ಯಂತರ ಮಹಿಳೆಯರನ್ನು ಇಂದು ರಾಜ್ಯದ ಕಾಂಗ್ರೆಸ್ ಸರಕಾರ ಯಜಮಾನಿಯನ್ನಾಗಿ ಮಾಡಿದೆ.ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಖಂಡಿತವಾಗಿಯೂ ಕಾಂಗ್ರೆಸ್ ಕೈ ಗಟ್ಟಿ ಮಾಡಲಿದ್ದಾರೆ ಎಂಬ ಪೂರ್ಣ ವಿಶ್ವಾಸ ನಮಗಿದೆ ಎಂದು ಹೇಳಿದರು.

ಶಾಸಕ ಅಶೋಕ್ ರೈ ಕಾಂಗ್ರೆಸ್ ಪಕ್ಷದ ಶಕ್ತಿ: ಪುತ್ತೂರು ಶಾಸಕರಾದ ಅಶೋಕ್ ರೈಯವರು ಕಾಂಗ್ರೆಸ್ ಪಕ್ಷದ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.ಅಲ್ಪಾವಧಿಯಲ್ಲಿ ಪುತ್ತೂರಿಗೆ ಬೃಹತ್ ಯೋಜನೆಯನ್ನು ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ.ಇವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಕಾಂಗ್ರೆಸ್ ಶಕ್ತಿಯಾಗಿ ನೆಲೆ ನಿಲ್ಲಲಿದೆ.ಕಾರ್ಯಕರ್ತರ ಹಾಗೂ ಸಾರ್ವಜನಿಕರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವ ಶಾಸಕರು ಸರಕಾರದ ಯೋಜನೆಗಳನ್ನು ಪ್ರತೀ ಕುಟುಂಬಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದ ಸಮಾವೇಶದ ಮೊದಲ ಸಭೆಯನ್ನು ಪುತ್ತೂರಿನಲ್ಲಿ ಆಯೋಜನೆ ಮಾಡಿದ್ದೇವೆ ಎಂದು ಸೊರಕೆ ಹೇಳಿದರು.

ಗ್ಯಾರಂಟಿ ಅನುಷ್ಠಾನವಾಗುವುದಿಲ್ಲ ಎಂದವರ ಮನೆಗೂ ಕರೆಂಟ್ ಫ್ರೀ:
ಸರಕಾರ ಗ್ಯಾರಂಟಿ ಯೋಜನೆಯನ್ನು ಜನತೆಯ ಮುಂದೆ ಇಟ್ಟಾಗ ಅದು ಬೋಗಸ್ ಎಂದು ಬಿಜೆಪಿಯ ಕೆಲವರು ಹೇಳುತ್ತಿದ್ದರು.ಅವರೇ ಇಂದು ಅರ್ಜಿ ಹಾಕಿ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.ಕಾಂಗ್ರೆಸ್ ಯೋಜನೆ ಅದು ಎಲ್ಲರಿಗೂ ದೊರೆಯುತ್ತದೆ ಮತ್ತು ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ ಎಂಬುದನ್ನು ಬಿಜೆಪಿಯವರೇ ಒಪ್ಪಿಕೊಂಡಿದ್ದಾರೆ. ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಕರಾವಳಿಯಲ್ಲಿ ಕೋಮುವಿಷ ಬೀಜವನ್ನು ಬಿತ್ತಿ ಅಧಿಕಾರ ಪಡೆದ ಬಿಜೆಪಿ ಜಿಲ್ಲೆಗೆ ಏನು ಕೊಡುಗೆ ನೀಡಿದೆ ಎಂದು ಪ್ರಶ್ನಿಸಿದ ಸೊರಕೆ,ಕಳೆದ ಐದು ವರ್ಷ ಆಡಳಿತ ನಡೆಸಿದ ಬಿಜೆಪಿ ಸರಕಾರ ರಾಜ್ಯದ ಜನತೆಗೆ ಯಾವುದೇ ಒಂದು ಒಳ್ಳೆಯ ಯೋಜನೆಯನ್ನು ನೀಡಿಲ್ಲ ಮತ್ತು ಉತ್ತಮ ಆಡಳಿತವನ್ನೂ ನೀಡಿಲ್ಲಯುವ ಸಮೂಹಕ್ಕೆ ಉದ್ಯೋಗ ಕೊಡುವಲ್ಲಿ ಬಿಜೆಪಿ ವಿಫಲವಾಗಿದೆ, ದೇಶದಲ್ಲಿ ನಿರುದ್ಯೋಗ ಅಧಿಕವಾಗಿದೆ, ಬೆಲೆ ಏರಿಕೆಯಿಂದ ಜನತೆ ಬವಣೆ ಅನುಭವಿಸುತ್ತಿದ್ದಾರೆ.ಆದರೂ ಬಿಜೆಪಿ ಧರ್ಮ ರಾಜಕಾರಣ ಮಾಡುತ್ತಿದ್ದು ಜನರ ಏಳಿಗೆ ಬಿಜೆಪಿಗೆ ಬೇಕಾಗಿಲ್ಲ, ಜನತೆಗೆ ಸುಳ್ಳು ಹೇಳಿ,ಮೋಸ ಮಾಡಿ ಅಧಿಕಾರ ಪಡೆಯುವುದೇ ಬಿಜೆಪಿ ಆಶಯವಾಗಿದ್ದು ಜನತೆ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಮಾವೇಶಕ್ಕೆ ಪುತ್ತೂರಿನಿಂದ 50 ಸಾವಿರ ಕಾರ್ಯಕರ್ತರು-ಅಶೋಕ್ ರೈ:
ಮಂಗಳೂರಿನಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶಕ್ಕೆ ಪುತ್ತೂರಿನಿಂದ 50 ಸಾವಿರ ಮಂದಿ ಕಾರ್ಯಕರ್ತರು ತೆರಳಲಿದ್ದಾರೆ.ಪ್ರತೀ ವಲಯ ಮತ್ತು ಬೂತ್‌ನಿಂದ ತಲಾ ಎರಡು ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗುವುದು. ಕಾರ್ಯಕರ್ತರು ತೆರಳಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು.ಪುತ್ತೂರಿನಿಂದ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ತೆರಳುವ ಮೂಲಕ ನಮ್ಮ ಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಭಾಷಣದಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ:
ಕೇವಲ ಭಾಷಣ ಮಾಡಿದರೆ ಪಕ್ಷ ಕಟ್ಟಲು ಸಾಧ್ಯವಿಲ್ಲ, ಪ್ರತೀಯೊಬ್ಬ ಕಾರ್ಯಕರ್ತರು ಜನರ ಸೇವೆಯನ್ನು ಮಾಡಬೇಕು.ಕಷ್ಟದಲ್ಲಿರುವವರ ಕಣ್ಣೀರೊರೆಸುವ ಕೆಲಸವನ್ನು ಮಾಡಬೇಕು.ಕಷ್ಟದಲ್ಲಿರುವವರ,ತೊಂದರೆಯಲ್ಲಿರುವವರನ್ನು ಸಂಪರ್ಕಿಸಿ ಅವರ ಮೊಬೈಲ್ ನಂಬರನ್ನು ನನ್ನ ಕಚೇರಿಗೆ ಕೊಟ್ಟರೆ ಸಾಕು ಆ ಬಳಿಕ ಅವರಿಗೆ ಬೇಕಾದ ನೆರವನ್ನು ನಮ್ಮ ಕಚೇರಿಯಿಂದಲೇ ಮಾಡಲಾಗುತ್ತದೆ.ಸರಕಾರದ ಗ್ಯಾರಂಟಿ ಯೋಜನೆಗಳು ಎಲ್ಲಾ ಮನೆಗಳಿಗೆ ತಲುಪಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ, ಸಿಗದೇ ಇರುವವರ ಪಟ್ಟಿ ಮಾಡಿ ಅವರ ಮೊಬೈಲ್ ನಂಬರನ್ನು ಕಚೇರಿಯ ಸಿಬಂದಿಗಳಿಗೆ ನೀಡುವ ಕೆಲಸವನ್ನು ಪ್ರತೀಯೊಬ್ಬ ಕಾರ್ಯಕರ್ತರೂ ಮಾಡಬೇಕು ಎಂದು ಹೇಳಿದರು.ಸರಕಾರದ ಗ್ಯಾರಂಟಿ ಯೋಜನೆಗಳು ಸಾವಿರಾರು ಕುಟುಂಬಗಳಿಗೆ ವರದಾನವಾಗಿದ್ದು ಅದನ್ನು ಮತವಾಗಿ ಪರಿವರ್ತಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರಬೇಕು, ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರಿದ್ದಾಗ ಮಾತ್ರ ನಿಮ್ಮ ಕೆಲಸಗಳು ಆಗುತ್ತದೆ, ನಾನು ಶಾಸಕನಾದರೆ ನೀವೆಲ್ಲರೂ ಶಾಸಕನಾದಂತೆ ಎಂದು ಹೇಳಿದ ಅಶೋಕ್ ಕುಮಾರ್ ರೈ, ಧೈರ್ಯವಾಗಿ ಪಕ್ಷ ಕಟ್ಟುವ ಕೆಲಸವನ್ನು ಮಾಡಿ ನಿಮ್ಮ ಜೊತೆ ನಾನಿದ್ದೇನೆ ಎಂದು ತಿಳಿಸಿದರು.

ಸೊರಕೆ ಶಾಸಕರಾಗಿದ್ದಾಗ 28 ಸಾವಿರ ಅಕ್ರಮ ಸಕ್ರಮ ಫೈಲ್ ಮಂಜೂರು ಮಾಡಿದ್ದರು: ವಿನಯಕುಮಾರ್ ಸೊರಕೆ ಶಾಸಕರಾಗಿದ್ದಾಗ ಪುತ್ತೂರಿನಲ್ಲಿ 28 ಸಾವಿರ ಅಕ್ರಮ ಸಕ್ರಮ ಕಡತಗಳನ್ನು ಮಂಜೂರು ಮಾಡಿದ್ದರು. ನನ್ನ ಕಚೇರಿಗೆ ಬರುವ ಕೆಲವರು ಈಗಲೂ ಅದನ್ನೇ ಹೇಳುತ್ತಿದ್ದಾರೆ. ನನ್ನ ಅವಧಿಯಲ್ಲಿ ಅಕ್ರಮ ಸಕ್ರಮ, 94 ಸಿ, 94 ಸಿಸಿಗೆ ಬಂದಿರುವ ಒಂದೇ ಒಂದು ಅರ್ಜಿಯನ್ನು ಬಾಕಿ ಇಡುವುದಿಲ್ಲ ಅದೆಲ್ಲವನ್ನೂ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡುತ್ತೇನೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಬಡವರಿಗೆ ಮೋಸ ಮಾಡಬೇಡಿ ಶಾಪ ತಟ್ಟಬಹುದು: ಹಿಂದೆ ಇಲ್ಲಿ ಅಧಿಕಾರದಲ್ಲಿದ್ದವರು ಬಡವರಿಗೆ ಮೋಸ ಮಾಡಿದ್ದಾರೆ, ಆ ಕೆಲಸ ಮಾಡುತ್ತೇನೆ ಈ ಕೆಲಸ ಮಾಡುತ್ತೇನೆ ಎಂದು ಹೇಳಿ ಜನರಲ್ಲಿ ಆಸೆ ಹುಟ್ಟಿಸಿ ಅವರಿಂದ 40ಶೇ.ಪಡೆದು ಅವರ ಕೆಲಸವನ್ನು ಮಾಡದೆ ವಂಚನೆ ಮಾಡಿದ್ದಾರೆ ಎಂಬ ಮಾಹಿತಿ ಇದೆ.ಆ ರೀತಿ ಮಾಡಿದರೆ ಜನರ ಶಾಪ ಖಂಡಿತ ತಟ್ಟಬಹುದು.ಜನರ ಶಾಪ ತಟ್ಟಿಯೇ ಜನರಿಂದ ದೂರವಾಗಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಮತದಾರರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ-ಶಶಿಧರ್ ಹೆಗ್ಡೆ:
ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಾತನಾಡಿ ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಮಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತನ್ನ ಹಳೆಯ ವೈಭವವನ್ನು ಮರಳಿ ಪಡೆಯಲಿದೆ.ರಾಜ್ಯದಲ್ಲಿ ಕಾಂಗ್ರೆಸ್‌ನ ಉತ್ತಮ ಸರಕಾರವಿದೆ, ಜನತೆಯ ಆಶೋತ್ತರಗಳನ್ನು ಒಂದೊಂದಾಗಿ ಈಡೇರಿಸುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ್ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಮಾಜಿ ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಪುತ್ತೂರು ಕಾಂಗ್ರೆಸ್ ಉಸ್ತುವಾರಿ ಜಯಪ್ರಕಾಶ್ ರೈ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದಾಲಿ,ಮಾಜಿ ಜಿ.ಪಂ.ಉಪಾಧ್ಯಕ್ಷ ಎಂ.ಎಸ್.ಮೊಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಂ ಕೆ.ಬಿ.ಸ್ವಾಗತಿಸಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು.

ನಯಾಪೈಸೆ ಲಂಚ ಕೊಡಬೇಡಿ
ಯಾರಿಗೂ ನಯಾಪೈಸೆ ಲಂಚ ಕೊಡಬೇಡಿ. ಮಾಜಿ ಶಾಸಕರ ಅವಧಿಯಲ್ಲಿ ಎಕ್ರೆಗೆ 2 ಲಕ್ಷ ಕೊಟ್ಟಿದ್ದಾರೆ ಎಂಬ ಮಾಹಿತಿ ಇದ್ದು ನನ್ನ ಅವಧಿಯಲ್ಲಿ ಯಾರಿಗೂ ಒಂದು ರುಪಾಯಿ ಕೊಡಬೇಡಿ.ನಿಮ್ಮ ಸ್ವಾಧೀನದಲ್ಲಿರುವ ಜಾಗವನ್ನು ನಿಮಗೇ ಮಾಡಿಕೊಡುತ್ತೇನೆ.ಬಿಜೆಪಿಯವರೂ ಬಂದು ತಮ್ಮ ಕೆಲಸವನ್ನು ಮಾಡಿಸಿಕೊಳ್ಳಿ,ನಾನು ರಾಜಕೀಯ ಮಾಡುವುದಿಲ್ಲ, ಮುಂದಿನ ದಿನಗಳಲ್ಲಿ ಬಿಜೆಪಿಯವರೂ ನಮ್ಮ ಜೊತೆ ಸೇರಿಕೊಳ್ಳಲಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಮಂಗಳೂರು ಸಮಾವೇಶ ಮುಂದೂಡಿಕೆ-ಡಿಕೆಶಿ:
ಜ.21ರಂದು ಮಂಗಳೂರಿನಲ್ಲಿ ನಡೆಸಲುದ್ದೇಶಿಸಿದ್ದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಮುಂದೂಡಲಾಗಿದೆ.ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದು,ಸಮಾವೇಶದ ತಯಾರಿ ಕಾರ್ಯಗಳನ್ನು ಮುಂದುವರೆಸುವಂತೆ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here