ವೈಭವದ ನೇಮೋತ್ಸವದೊಂದಿಗೆ ಸಂಪನ್ನಗೊಂಡ ಎಲಿಯ ಜಾತ್ರೆ-5 ಸಾವಿರಕ್ಕೂ ಅಧಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ

0

ಪುತ್ತೂರು: ಸರ್ವೆ ಗ್ರಾಮ ವ್ಯಾಪ್ತಿಗೆ ಸೇರಿದ ಎಲಿಯ…ಹೆಸರೇ ಸೂಚಿಸುವಂತೆ ಇದೊಂದು ಸ್ವಚ್ಛ ಪ್ರಕೃತಿದತ್ತವಾದ ಪರಿಸರವಿರುವ ಪ್ರದೇಶ. ಸುತ್ತಲೂ ಹಸಿರುಹೊದ್ದು ಮಲಗಿರುವ ಭೂದೇವಿಯ ಮಡಿಲಲ್ಲಿ ತಲೆಎತ್ತಿ ನಿಂತಿರುವ ದೇವಾಲಯವೇ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ. ಹಾಲು ಪಾಯಸದಂತಹ ಪ್ರೀತಿಯ ಹರಕೆಯಿಂದಲೇ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಬಂದಿರುವ ಶ್ರೀ ವಿಷ್ಣುಮೂರ್ತಿ ದೇವರ ಜಾತ್ರೋತ್ಸವವನ್ನು ನೋಡುವುದೇ ಸೊಗಸು. ಒಂದು ದಿನ ಜಾತ್ರೆ ನಡೆದರೆ ಮರುದಿವಸ ದೇವಳದ ದೈವಗಳಿಗೆ ನೇಮೋತ್ಸವ ನಡೆಯುತ್ತದೆ. ಸಂಪೂರ್ಣ ಪ್ರಕೃತಿಯ ಮಡಿಲಲ್ಲಿರುವ ಈ ದೇವಸ್ಥಾನಕ್ಕೆ ಬರುತ್ತಿದ್ದಂತೆ ನಮ್ಮ ಮೈಮನಸ್ಸು ರೋಮಾಂಚನಗೊಳ್ಳುತ್ತದೆ. ಇಲ್ಲಿ ನಡೆಯುವ ಜಾತ್ರೆಯನ್ನು ನೋಡುವುದು ಕೂಡ ಅಷ್ಟೇ ಖುಷಿ ಕೊಡುತ್ತದೆ. ಈ ವರ್ಷ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಹಾಗೇ ದೇವಳದ ಪ್ರಧಾನ ಅರ್ಚಕ ನಾಗೇಶ ಕಣ್ಣಾರಾಯ ಎಲಿಯರವರ ಸಹಕಾರದೊಂದಿಗೆ ಶ್ರೀ ದೇವರ ದ್ವಿತೀಯ ಪ್ರತಿಷ್ಠಾ ವರ್ಧಂತಿ ಮತ್ತು ಎಲಿಯ ಜಾತ್ರೆ ಫೆ.6 ರಂದು ಬಹಳ ವಿಜೃಂಭಣೆಯಿಂದ ಜರಗಿತು. ಮರುದಿವಸ ಫೆ.7 ರಂದು ದೇವಳದ ದೈವಗಳಿಗೆ ಅದ್ಧೂರಿ ನೇಮೋತ್ಸವ ನಡೆಯಿತು. ಜಾತ್ರೆ ಹಾಗೂ ನೇಮೋತ್ಸವಕ್ಕೆ ಊರಪರವೂರ ಸಾವಿರಾರು ಭಕ್ತರು ಆಗಮಿಸಿ ಶ್ರೀ ದೈವ ದೇವರ ಗಂಧಪ್ರಸಾದ, ಅನ್ನಪ್ರಸಾದ ಸ್ವೀಕರಿಸಿ ಧನ್ಯರಾದರು.


ದೇವಳದ ದೈವಗಳಿಗೆ ವೈಭವದ ನೇಮೋತ್ಸವ
ದೇವಳದಲ್ಲಿ ಮುಖ್ಯವಾಗಿ ಪಿಲಿಭೂತ, ರಕ್ತೇಶ್ವರಿ, ಶಿರಾಡಿ, ಪಂಜುರ್ಲಿ ಹಾಗೇ ಕಾವಲು ದೈವ ಗುಳಿಗ ಇವುಗಳಿಗೆ ವಿಜೃಂಭಣೆಯ ನೇಮೋತ್ಸವ ಜರಗಿತು. ಫೆ.7 ರಂದು ಸಂಜೆ ಪಿಲಿಭೂತ, ರಕ್ತೇಶ್ವರಿ, ಶಿರಾಡಿ, ಪಂಜುರ್ಲಿ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಪಿಲಿಭೂತಕ್ಕೆ ಎಣ್ಣೆಬೂಳ್ಯ ಕೊಡುವ ಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಅಡ್ಕರೆಗುಂಡಿಯ ಕಾವಲು ದೈವ ಗುಳಿಗ ಬನಕ್ಕೆ ಭಂಡಾರ ತರಲು ದೇವಳದಿಂದ ಹೊರಡುವ ಕಾರ್ಯಕ್ರಮ ನಡೆಯಿತು. ಪಿಲಿಭೂತದ ನೇಮ ಹಾಗೂ ಬೂಳ್ಯಪ್ರಸಾದ ವಿತರಣೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ರಾತ್ರಿಯಿಂದ ಬೆಳಗ್ಗಿನ ತನಕ ರಕ್ತೇಶ್ವರಿ, ಶಿರಾಡಿ, ಪಂಜುರ್ಲಿ ಹಾಗೂ ಗುಳಿಗ ದೈವಗಳ ನರ್ತನ ಸೇವೆ ನಡೆದು ಬೂಳ್ಯ ಪ್ರಸಾದ ವಿತರಣೆ ನಡೆಯಿತು. ಬೆಳಗ್ಗಿನ ಜಾವ ಗುಳಿಗ ದೈವವು ಅಡ್ಕರೆಗುಂಡಿಯಲ್ಲಿರುವ ಬನಕ್ಕೆ ಹೊರಡುವ ಕಾರ್ಯಕ್ರಮ ನಡೆಯಿತು.


5 ಸಾವಿರಕ್ಕೂ ಅಧಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ
ಮೂರು ದಿನಗಳ ಕಾಲ ದೇವಳದಲ್ಲಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು ಇದಲ್ಲದೆ ಬೆಳಗ್ಗೆ ಮತ್ತು ಸಂಜೆ ಉಪಹಾರದ ವ್ಯವಸ್ಥೆಯೂ ಇತ್ತು. ಫೆ.5 ರಂದು ಹೊರೆಕಾಣಿಕೆ ಸಮರ್ಪಣೆ ದಿನವೂ ಅನ್ನಸಂತರ್ಪಣೆ ನಡೆಯಿತು. ಹೊರೆಕಾಣಿಕೆ ದಿನದಿಂದ ಜಾತ್ರೆ ಹಾಗೂ ನೇಮೋತ್ಸವ ದಿನದವರೇಗೆ ಭಕ್ತಾಧಿಗಳಿಗೆ ನಿರಂತರ ಅನ್ನಪ್ರಸಾದ ವಿತರಣೆ ನಡೆಯಿತು. ಸರ್ವೆ,ಮುಂಡೂರು, ಕೆದಂಬಾಡಿ, ಕೆಯ್ಯೂರು ಗ್ರಾಮ ಸೇರಿದಂತೆ ಊರಪರವೂರ ಸಾವಿರಾರು ಭಕ್ತರು ಆಗಮಿಸಿದ್ದರು. 5 ಸಾವಿರಕ್ಕೂ ಅಧಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.


ಅಚ್ಚುಕಟ್ಟಾದ ವ್ಯವಸ್ಥೆ
ಎಲಿಯ ಜಾತ್ರೆಯು ಸಂಪೂರ್ಣ ಪ್ರಕೃತಿಯ ಮಡಿಲಲ್ಲಿ ನಡೆಯುವ ಜಾತ್ರೆಯಾಗಿದ್ದು ನೋಡಲು ಬಹಳ ಸೊಗಸಾಗಿರುತ್ತದೆ. ಜಾತ್ರೆಗೆ ಬರುವ ಭಕ್ತಾಧಿಗಳ ವಾಹನಗಳನ್ನು ಪಾರ್ಕ್ ಮಾಡುವಲ್ಲಿಂದ ಹಿಡಿದು ಎಲ್ಲಾ ವಿಷಯಗಳಲ್ಲೂ ಬಹಳ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಜಾತ್ರಾ ಸಮಿತಿಯವರು ಮಾಡಿದ್ದರು. ಊಟದ ವ್ಯವಸ್ಥೆಯೂ ಬಹಳ ವ್ಯವಸ್ಥಿತವಾಗಿತ್ತು ಭಕ್ತಾಧಿಗಳಿಗೆ ಯಾವುದೇ ತೊಂದರೆ ಬರದಂತೆ ಸಮಿತಿಯವರು ವ್ಯವಸ್ಥೆ ಮಾಡಿದ್ದು ಭಕ್ತಾಧಿಗಳಿಗೆ ಖುಷಿ ಕೊಟ್ಟಿದೆ.


ಈ ಸಂದರ್ಭದಲ್ಲಿ ಪವಿತ್ರಪಾಣಿ ಬಾಲಕೃಷ್ಣ ಮುಡಂಬಡಿತ್ತಾಯ ಸೊರಕೆ, ಜಾತ್ರಾ ಸಮಿತಿಯ ಗೌರವ ಅಧ್ಯಕ್ಷರುಗಳಾದ ಬೂಡಿಯಾರ್ ರಾಧಾಕೃಷ್ಣ ರೈ, ರಾಜಾರಾವ್ ಮುಡಂಬಡಿತ್ತಾಯ ಸೊರಕೆ, ಸಂಚಾಲಕ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಅಧ್ಯಕ್ಷ ಶಿವರಾಮ ರೈ ಸೊರಕೆ, ಕ್ಷೇತ್ರದ ಆಡಳಿತಾಧಿಕಾರಿ ಉಮೇಶ್ ಕಾವಾಡಿ, ಕೋಶಾಧಿಕಾರಿ ಮಜಿತ್ ಸುವರ್ಣ ಸೊರಕೆ, ಕಾರ್ಯದರ್ಶಿ ರಜನಿಕಾಂತ ಬಾಳಯ ಹಾಗೇ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು, ಜಾತ್ರಾ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಹಾಗೇ ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರುಗಳು ಹಾಗೂ ಸರ್ವೆ, ಮುಂಡೂರು, ಕೆದಂಬಾಡಿ, ಕೆಯ್ಯೂರು ಗ್ರಾಮದ ಸಮಸ್ತ ಭಕ್ತಾಧಿಗಳು ಉಪಸ್ಥಿತರಿದ್ದರು.

ವಾಟ್ಸಪ್ ಗ್ರೂಪ್ ಮೂಲಕ ಸಕಲ ಸಂದೇಶ ರವಾನೆ
ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಎಲಿಯ ವಿಷ್ಣುಮೂರ್ತಿ ದೇವಸ್ಥಾನ ಎನ್ನುವ ವಾಟ್ಸಪ್ ಗ್ರೂಪ್ ಒಂದಿದೆ. ಈ ಗ್ರೂಪ್‌ನಲ್ಲಿ 200 ಕ್ಕೂ ಅಧಿಕ ಮಂದಿ ಇದ್ದಾರೆ. 5 ಮಂದಿ ಅಡ್ಮಿನ್ ಇದ್ದು ಈ ಗ್ರೂಪ್ ಅನ್ನು ರಿಪ್ಲೆಕ್ಷನ್‌ನ ಪ್ರಸನ್ನ ರೈ ಮಜಲುಗದ್ದೆ ನಿರ್ವಹಣೆ ಮಾಡುತ್ತಿದ್ದಾರೆ. ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಅಂದರೆ 2019 ರಲ್ಲಿ ಈ ಗ್ರೂಪ್ ಅನ್ನು ರಚಿಸಲಾಗಿದೆ. ಅಲ್ಲಿಂದ ಇಲ್ಲಿ ತನಕವೂ ದೇವಳದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದ ಫೋಟೋ ವಿವರ ಸಹಿತ ಈ ಗ್ರೂಪ್‌ನಲ್ಲಿ ಹಾಕಲಾಗುತ್ತಿದೆ. ದೇವಸ್ಥಾನಕ್ಕೆ ಬೇಕಾದ ಅವಶ್ಯಕತೆಗಳನ್ನು ಭಕ್ತರು ಕೊಡುಗೆ ರೂಪದಲ್ಲಿ ಕೊಡುವಂತೆಯೂ ವಿನಂತಿ ಮಾಡಿಕೊಳ್ಳುವುದು ಹಾಗೇ ಭಕ್ತರು ಕೊಟ್ಟ ಸೇವಾ ಕೊಡುಗೆಗಳನ್ನು ಕೂಡ ಇದರಲ್ಲಿ ಹಾಕಲಾಗುತ್ತದೆ. ಜಾತ್ರೆ, ನೇಮದ ಪ್ರತಿಯೊಂದು ವಿಶೇಷ ಕ್ಷಣಗಳನ್ನು ಕೂಡ ಫೋಟೋ ಸಮೇತ ಗ್ರೂಪ್‌ನಲ್ಲಿ ಹಾಕುವ ಕೆಲಸವನ್ನು ಪ್ರಸನ್ನ ರೈ ಮಾಡುತ್ತಿದ್ದಾರೆ. ಅಲ್ಲದೆ ಕಾರ್ಯಕ್ರಮಗಳ ವಿವರಗಳನ್ನು ಕೂಡ ಬಹಳ ಅಚ್ಚುಕಟ್ಟಾಗಿ ಹಾಕುವ ಮೂಲಕ ಭಕ್ತರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ದೇವಳದಲ್ಲಿ ಏನು ನಡೆದಿದೆ ಮುಂದೆ ಏನು ನಡೆಯಲಿದೆ, ದೇವಳಕ್ಕೆ ಯಾರು ಏನನ್ನು ಸೇವಾರೂಪದಲ್ಲಿ ಕೊಡುಗೆ ಕೊಟ್ಟರು ಹೀಗೆ ಎಲಿಯ ದೇವಳದ ಸಂಪೂರ್ಣ ಚಿತ್ರಣ ಈ ಗ್ರೂಪ್‌ನಲ್ಲಿ ಸಿಗುತ್ತದೆ. ಈ ನಿಟ್ಟಿನಲ್ಲಿ ಪ್ರಸನ್ನ ರೈ ಮಜಲುಗದ್ದೆಯವರಿಗೆ ಒಂದು ಹ್ಯಾಟ್ಸ್‌ಅಫ್ ಹೇಳಲೇಬೇಕಾಗಿದೆ.

LEAVE A REPLY

Please enter your comment!
Please enter your name here