34 ನೆಕ್ಕಿಲಾಡಿ: ಸರಕಾರಿ ಭೂಮಿ ಅತಿಕ್ರಮಣ-ವಿರೋಧದ ನಡುವೆಯೂ ತೆರವು ಕಾರ್ಯ

0

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ನ ಬೀತಲಪ್ಪು ಎಂಬಲ್ಲಿ ಸರಕಾರಿ ಜಾಗವನ್ನು ಕೆಲವರು ಅತಿಕ್ರಮಿಸಿ ವಾಸ್ತವ್ಯ ಹೂಡಿದ್ದು, ಅದರ ತೆರವು ಕಾರ್ಯಾಚರಣೆ ವಿರೋಧದ ನಡುವೆಯೂ ಉಪ್ಪಿನಂಗಡಿ ಕಂದಾಯ ಹೋಬಳಿಯ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ಅವರ ನೇತೃತ್ವದಲ್ಲಿ ಫೆ.16ರಂದು ನಡೆಯಿತು.


ತೆರವಿಗೆ ವಿರೋಧ:
ಬೀತಲಪ್ಪು ಬಳಿಯ ಸ.ನಂ.84/3ಎ ಯಲ್ಲಿರುವ 0.40 ಎಕ್ರೆ ಸರಕಾರಿ ಜಾಗದಲ್ಲಿ ಐದು ಕುಟುಂಬಗಳು ಷೆಡ್‌ಗಳನ್ನು ನಿರ್ಮಿಸಿ ಅದರಲ್ಲಿ ವಾಸ್ತವ್ಯ ಹೂಡಿದ್ದರು. ಇವುಗಳ ತೆರವಿಗೆ ಕಂದಾಯ ಇಲಾಖೆಯ ತಂಡ ಬಂದಿರುವ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ)ಯ ದ.ಕ. ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್ ಹಾಗೂ 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್ ಅವರು ಮನೆ ತೆರವಿಗೆ ವಿರೋಧ ವ್ಯಕ್ತಪಡಿಸಿದರು. ರೂಪೇಶ್ ರೈ ಅಲಿಮಾರ್ ಮಾತನಾಡಿ, ಇಲ್ಲಿ ಮನೆ ಕಟ್ಟಿಕೊಂಡಿರುವರು ತುಂಡಿಂಚು ಭೂಮಿ ಇಲ್ಲದ ಬಡವರು. ಇವರು ದಲಿತರಾಗಿದ್ದು, ಕೃಷಿ ಕೂಲಿ ಕಾರ್ಮಿಕರು. ರೈತಾಪಿ ವರ್ಗ ಬದುಕುವುದೇ ಇವರಿಂದಾಗಿ. ಇವರಿಗೆ ಭೂಮಿ ಕೊಳ್ಳುವಷ್ಟು ಶಕ್ತಿ ಇಲ್ಲ. ಸುಮಾರು ವರ್ಷಗಳಿಂದ ಇವರ ತಾತ- ಮುತ್ತ ಂದಿರು ಇಲ್ಲೇ ನೆಲೆಸಿದ್ದಾರೆ. ಆದ್ದರಿಂದ ಅವರು ಈಗ ಕಟ್ಟಿರುವ ಮನೆಗಳನ್ನು ಯಾವುದೇ ಕಾರಣಕ್ಕೂ ತೆರವು ಮಾಡಬಾರದು ಎಂದರು.


ಅನಿ ಮಿನೇಜಸ್ ಮಾತನಾಡಿ, ಇವರು ಬಡವರಾಗಿದ್ದು, ಇವರಿಂದ ಇಲ್ಲಿ ಯಾರಿಗೂ ಸಮಸ್ಯೆಯಾಗಿಲ್ಲ. ಇವರನ್ನು ಇಲ್ಲಿಂದ ತೆರವು ಮಾಡಿದರೆ ಇವರು ಎಲ್ಲಿಗೆ ಹೋಗಲಿ. ಆದ್ದರಿಂದ ಅವರ ಮನೆಯನ್ನು ತೆರವು ಮಾಡಬೇಡಿ. ಕಾನೂನಾತ್ಮಕವಾಗಿ ಅವರಿಗೆ ಈ ಜಾಗವನ್ನು ಮಾಡಿಕೊಡಿ. ಅವರಿಗೂ ಬದುಕುವ ಹಕ್ಕು ನೀಡಿ ಎಂದರು.


ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ದ.ಕ. ಜಿಲ್ಲಾ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಪುಚ್ಚತ್ತಡ್ಕ ಮಾತನಾಡಿ, ನಿವೇಶನ ಇಲ್ಲದವರಿಗೆ ನಿವೇಶನ ನೀಡುವುದು ಸರಕಾರದ ಜವಾಬ್ದಾರಿ. ಆದ್ದರಿಂದ ಸರಕಾರ ಹಾಗೂ ಇಲ್ಲಿನ ಗ್ರಾ.ಪಂ. ಈ ಬಗ್ಗೆ ಕ್ರಮ ವಹಿಸಿ, ಇಲ್ಲಿನವರಿಗೆ ನಿವೇಶನ ನೀಡಬೇಕು ಎಂದರು

.
ಸಂತ್ರಸ್ತ ಕುಟುಂಬಗಳು ತಮ್ಮ ಸಂಕಷ್ಟಗಳನ್ನು ಈ ಸಂದರ್ಭ ಹೇಳಿಕೊಂಡರಲ್ಲದೇ, ನೀವು ತೆರವು ಮಾಡಿದರೂ ನಾವು ಇಲ್ಲಿಂದ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಆಗ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ಅವರು ಮಾತನಾಡಿ, ಪಂಚಾಯತ್ ಮನವಿ ಕೊಟ್ಟಿದೆ. ಸಾರ್ವಜನಿಕರು ಕೂಡಾ ಮನವಿ ನೀಡಿದ್ದಾರೆ. ಹಾಗಾಗಿ ತೆರವಿಗೆ ತಹಶೀಲ್ದಾರ್ ಅವರು ಕೂಡಾ ಆದೇಶ ನೀಡಿದ್ದಾರೆ. ಅದರಂತೆ ನಾವು ನಮ್ಮ ಕರ್ತವ್ಯ ಮಾಡಲೇ ಬೇಕಾಗುತ್ತದೆ ಎಂದರು.


ಆಕ್ರೋಶಗೊಂಡ ಜನರು: ಚುನಾವಣೆಗೆ ಮನೆ ಮನೆಗೆ ಓಟು ಕೇಳಿಕೊಂಡು ಬರುವ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು ಈಗೆಲ್ಲಿದ್ದಾರೆ. ಅವರು ಸ್ಥಳಕ್ಕೆ ಬಾರದೆ ಈಗ ಯಾಕೆ ತಪ್ಪಿಸಿಕೊಂಡಿದ್ದಾರೆ. ಅವರು ಸ್ಥಳಕ್ಕೆ ಬರಲಿ. ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ. ನಮ್ಮ ಪಂಚಾಯತ್ ಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆಯಿಸಿ ಎಂದು ಸ್ಥಳದಲ್ಲಿದ್ದವರು 34 ನೆಕ್ಕಿಲಾಡಿ ಪಿಡಿಒ ಸತೀಶ್ ಬಂಗೇರ ಅವರನ್ನು ತರಾಟೆಗೆ ತೆಗೆದುಕೊಂಡರು.


ಎಲ್ಲರನ್ನೂ ಸಮಾಧಾನಿಸಿ ಮಾತನಾಡಿದ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ಅವರು, ಹೀಗೆ ಕಾನೂನು ಬಾಹಿರವಾಗಿ ಕೂತುಕೊಂಡರೆ ಅವರಿಗೆ ಒಂದು ಅವಕಾಶ ಸಿಗುವುದಿಲ್ಲ. ಈ ಜಮೀನನ್ನು ನಿವೇಶನಕ್ಕೆ ಮಂಜೂರು ಮಾಡಿ. ಇಲ್ಲಿ ಯಾರು ಕೂತುಕೊಂಡಿದ್ದಾರೆ. ಅವರಿಗೆ ಪ್ರಥಮ ಆದ್ಯತೆ ನೀಡಿ ಅವಕಾಶವನ್ನು ನೀಡೋಣ ಎಂದರು. ಈ ಸಂದರ್ಭ ಅನಿ ಮಿನೇಜಸ್ ಮಾತನಾಡಿ, ಈಗ ಇಲ್ಲಿ ಯಾರು ಕೂತುಕೊಂಡಿದ್ದಾರೆ. ಅವರಿಗೆ ಮೊದಲ ಆದ್ಯತೆ ನೀಡಬೇಕು ಎಂದರು.


ಈ ಕಾರ್ಯಾಚರಣೆಯಲ್ಲಿ 34 ನೆಕ್ಕಿಲಾಡಿ ಗ್ರಾಮ ಆಡಳಿತಾಧಿಕಾರಿ ಜಂಗಪ್ಪ, ತಾಲೂಕು ಭೂಮಾಪಕರಾದ ಮೋಹನ್, ಗ್ರಾಮ ಸಹಾಯಕರಾದ ದಿವಾಕರ, ಯತೀಶ, ೩೪ ನೆಕ್ಕಿಲಾಡಿ ಗ್ರಾ.ಪಂ. ಸಿಬ್ಬಂದಿ ನಿತಿನ್ ಭಾಗವಹಿಸಿದರು. ಉಪ್ಪಿನಂಗಡಿ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ಈ ಸಂದರ್ಭ ಕಾಂಗ್ರೆಸ್ ಮುಖಂಡ ಅಭಿಷೇಕ್ ಬೆಳ್ಳಿಪ್ಪಾಡಿ, ೩೪ ನೆಕ್ಕಿಲಾಡಿ ಬೂತ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಾದರ್, ಸಂತ್ರಸ್ಥ ಕುಟುಂಬದ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.

ದಲಿತರಿಗೆ ಅವಕಾಶ ನೀಡಿ: ರೂಪೇಶ್ ರೈ
150-200 ವರ್ಷಗಳಿಂದ ಬೀತಲಪ್ಪು ಕಾಲನಿಯಲ್ಲಿ ದಲಿತರು ಬದುಕುತ್ತಿದ್ದಾರೆ. ಈಗ ಜಾಗವಿಲ್ಲದೇ ಇಲ್ಲೇ ಪಕ್ಕದಲ್ಲಿರುವ ಇಲ್ಲಿ ಶೀಟ್ ಹಾಕಿಕೊಂಡು ಕೂತಿರುವ ದಲಿತರನ್ನು ಎಬ್ಬಿಸುವ ಕೆಲಸ ಗ್ರಾ.ಪಂ.ನವರೇ ಮಾಡುತ್ತಿದ್ದಾರೆ. ಇದೆಂತಹ ವ್ಯವಸ್ಥೆ. ಸರಕಾರ ಈ ಬಗ್ಗೆ ಕೂಲಂಕುಷ ಪರಿಶೀಲನೆ ಮಾಡಬೇಕು. ಜಾಗವಿದ್ದವರಿಗೆ ಖಂಡಿತಾ ಜಾಗ ನೀಡಬೇಡಿ. ಜಾಗ ಇಲ್ಲದ ದಲಿತರಿಗೆ ಈ ಭೂಮಿಯನ್ನು ಮನೆ ನಿವೇಶನಕ್ಕೆ ಕಾದಿರಿಸಬೇಕು. ಇಲ್ಲಿ ಈಗಾಗಲೇ ಮನೆ ಕಟ್ಟಿರುವ ದಲಿತರಿಗೆ ಮೊದಲ ಆದ್ಯತೆ ನೀಡಬೇಕು.
ರೂಪೇಶ್ ರೈ ಅಲಿಮಾರ್
ಸಂಚಾಲಕರು,
ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ದ.ಕ. ಜಿಲ್ಲೆ

LEAVE A REPLY

Please enter your comment!
Please enter your name here