ಅತಿಥಿ ಶಿಕ್ಷಕರ ವೇತನ ಯಾಕೆ ಪೆಂಡಿಂಗ್ ಇದೆ: ಎರಡು ದಿನದೊಳಗೆ ಮಾಹಿತಿ ನೀಡಿ-ಅಧಿಕಾರಿಗೆ ಪುತ್ತೂರು ಶಾಸಕರ ಖಡಕ್ ಸೂಚನೆ

0

ಪುತ್ತೂರು: ಕಳೆದ ಜೂನ್ ತಿಂಗಳಿಂದ ಪುತ್ತೂರು ಸೇರಿದಂತೆ ದ ಕ ಜಿಲ್ಲೆಯ ಅತಿಥಿ ಶಿಕ್ಷಕರ ವೇತನ ಪೆಂಡಿಂಗ್ ಇದೆ,ಯಾವ ಕಾರಣಕ್ಕೆ ವೇತನ ಪಾವತಿಯಾಗಿಲ್ಲ ಎಂಬುದನ್ನು ಎರಡು ದಿನದೊಳಗೆ ತಿಳಿಸಬೇಕು ಸರಕಾರದ ವತಿಯಿಂದ ಬಾಕಿಯಾಗಿದ್ದರೆ ಅದನ್ನು ತಕ್ಷಣ ಪಾವತಿಗೆ ಕ್ರಮಕೈಗೊಳ್ಳಲು ಸರಕಾರಕ್ಕೆ ಸೂಚನೆ ನೀಡುತ್ತೇನೆ ಎಂದು ಪುತ್ತೂರು ಶಾಸಕರಾದ ಅಶೋಕ್‌ ಕುಮಾರ್‌ ರೈ ಅವರು ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸೂಚನೆಯನ್ನು ನೀಡಿದ್ದಾರೆ.


ಕಳೆದ 6 ತಿಂಗಳಿಂದ ಅತಿಥಿ ಶಿಕ್ಷಕರ ವೇತನ ಬಾಕಿ ಇದೆ. ಈ ಬಗ್ಗೆ ಕೆಲವು ಶಿಕ್ಷಕರು ಶಾಸಕರ ಬಳಿ ದೂರು ನೀಡಿದ್ದರು. ಈ ಬಗ್ಗೆ ಅಧಿಕಾರಿಗೆ ಕರೆ ಮಾಡಿ ಮಾತನಾಡಿದ ಶಾಸಕರು “ ಕಳೇದ 6 ತಿಂಗಳಿಂದ ವೇತನ ಸಿಕ್ಕಿಲ್ಲ ಅಂದ್ರೆ ಅವರು ಬದುಕುವುದು ಹೇಗೆ? ಸಿಗುವ ವೇತನವನ್ನೇ ನಂಬಿಕೊಂಡು ಬದುಕು ಸಾಗಿಸುವ ಅನೇಕ ಶಿಕ್ಷಕರಿದ್ದಾರೆ, ಪಾಪ ಅವರು ಏನು ಮಾಡಬೇಕು? ಯಾರ ಕಾರಣಕ್ಕೆ ಬಾಕಿಯಾಗಿದೆ? ಸಚಿವರ ಜೊತೆ ಮಾತನಾಡುವಾಗ ಅಂಥದ್ದೇನು ಸಮಸ್ಯೆ ಆಗಿಲ್ಲ ಎಂದು ಹೇಳಿದ್ದಾರೆ. ಅಧಿಕಾರಿಗಳ ಕಾರಣಕ್ಕೆ ಬಾಕಿಯಾಗಿದೆಯೇ ಅಥವಾ ದಾಖಲೆ ಕ್ರೋಡೀಕರಣ ಮಾಡುವಾಗ ತಡವಾಗಿದೆಯೇ? ಈ ರೀತಿ ವೇತನ ತಡವಾಗಲು ಕಾರಣವಾದರೂ ಏನು ಎಂಬುದನ್ನು ತಿಳಿಸಬೇಕು. ನೀವು ತಿಳಿಸದೇ ಇದ್ದಲ್ಲಿ ನಾನು ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪವನ್ನು ಮಾಡಿ ಸರಕಾರದ ಗಮನಕ್ಕೆ ತರುತ್ತೇನೆ. ನಿಮ್ಮ ಕಡೆಯಿಂದ ಬಾಕಿಯಾಗಿದ್ದರೆ ವಾರದೊಳಗೆ ಪಾವತಿ ವ್ಯವಸ್ಥೆ ಮಾಡಬೇಕು ಎಂದು ಶಾಸಕರು ಅಧಿಕಾರಿಗೆ ಸೂಚನೆ ನೀಡಿದ್ದಾರೆ.


ಕಳೆದ ಜೂನ್ ತಿಂಗಳಿಂದ ಅತಿಥಿ ಶಿಕ್ಷಕರಿಗೆ ವೇತನವನ್ನು ನೀಡಲಾಗಿಲ್ಲ. ಕೆಲವರಿಗೆ ವೇತನ ಬಂದಿದ್ದು , ಪುತ್ತೂರು ಮತ್ತು ಕಡಬ ತಾಲೂಕಿನ ಬಹುತೇಕ ಅತಿಥಿ ಶಿಕ್ಷಕರಿಗೆ ಬಹುತೇಕರಿಗೆ ವೇತನ ಪಾವತಿಯಾಗಿಲ್ಲ. ವೇತನ ದೊರೆಯಲು ಇಲಾಖೆಗೆ ಹಾಜರಾತಿ ದಾಖಲೆಯನ್ನು ಒದಗಿಸಬೇಕಾಗಿದ್ದು ಶಿಕ್ಷಕರು ಸರಿಯಾದ ಸಮಯಕ್ಕೆ ಹಾಜರಾತಿ ದಾಖಲೆಯನ್ನು ಇಲಾಖೆಗೆ ನೀಡಿದ್ದರೂ ಇಲಾಖೆಯ ಕೆಲ ಅಧಿಕಾರಿಗಳು ವರದಿಯನ್ನು ಇಲಾಖೆಗೆ ಸಲ್ಲಿಸುವಲ್ಲಿ ತಡವಾಗಿದ್ದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಕೆಲವು ಶಿಕ್ಷಕರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here