ಪುತ್ತೂರಿನಲ್ಲಿ ಎಸ್‌ಡಿಪಿಐ ಕಾರ್ಯಕರ್ತರ ಸಮಾವೇಶ

0

ಬಿಜೆಪಿ ಮುಕ್ತ ಭಾರತ ಮಾಡಲು ಮೈತ್ರಿ ಒಕ್ಕೂಟ ಅಗತ್ಯ- ರಿಯಾಝ್ ಫರಂಗಿಪೇಟೆ

ಪುತ್ತೂರು: ಮುಂದೆ ಬರುವ ಲೋಕಸಭಾ ಚುನಾವಣೆಗೆ ಇಳಿಯಲು ನಾವು ಮತ್ತೆ ಸಜ್ಜಾಗಬೇಕಾಗಿದೆ. ಈಗಾಗಲೇ ನಮ್ಮ ಕೇಂದ್ರ ಸಮಿತಿಯ ತೀರ್ಮಾನದಂತೆ ಸುಮಾರು 200 ರಷ್ಟು ಪ್ರದೇಶಗಳಲ್ಲಿ 100 ರಷ್ಟು ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಪಕ್ಷಕ್ಕೆ ಸ್ಪರ್ಧೆ ಮಾಡುವ ಶಕ್ತಿ ಇದೆ. ಬಿಜೆಪಿಯನ್ನು ಮುಕ್ತ ಭಾರತ ಮಾಡಲು ಇಂಡಿಯಾ ಒಕ್ಕೂಟ ಮೈತ್ರಿಯನ್ನು ಮಾಡಬೇಕಾಗಿದೆ ಎಂದು ಎಸ್‌ಡಿಪಿಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಅವರು ಹೇಳಿದರು.


ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಫೆ. 20ರಂದು ಸಂಜೆ ಪುತ್ತೂರು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮುಂದೆ ಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿ ನಮ್ಮ ಕೇಂದ್ರ ಸಮಿತಿಯ ತೀರ್ಮಾನದಂತೆ ಸುಮಾರು 200 ರಷ್ಟು ಪ್ರದೇಶಗಳಲ್ಲಿ 100 ರಷ್ಟು ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಪಕ್ಷಕ್ಕೆ ಸ್ಪರ್ಧೆ ಮಾಡುವ ಶಕ್ತಿ ಇದೆ. ಆದರು ಕೂಡಾ ಅಳೆದು ತೂಗಿ ನೇರವಾಗಿ ಬಿಜೆಪಿ ಆಯ್ಕೆಯಾಗಲಿರುವ ಸಾಧ್ಯತೆಗಳನ್ನು ಬಿಟ್ಟು ಕೇವಲ 60 ಸೀಟ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. 27 ಕ್ಷೇತ್ರಗಳನ್ನು ಘೋಷಣೆ ಮಾಡಿ ಆಗಿದೆ. ಮುಂದಿನ ದಿನ ನಮ್ಮ ಅಭ್ಯರ್ಥಿಗಳ ಘೋಷಣೆ ಆಗಬೇಕಾಗಿದೆ. ಆದ್ದರಿಂದ ಈ ಇಂಡಿಯಾ ಒಕ್ಕೂಟಕ್ಕೆ ಎಸ್‌ಡಿಪಿಐ ಪಕ್ಷ ಸಿದ್ಧವಿದೆ. ಬಿಜೆಪಿ ಮುಕ್ತ ಭಾರತ ಕಟ್ಟಲು ಒಕ್ಕೂಟ ಮೈತ್ರಿಯನ್ನು ಮಾಡಬೇಕು. ಇಲ್ಲದೆ ಹೋದರೆ ನಮ್ಮ ಸ್ವಂತ ರಾಜಕೀಯದ ಮೂಲಕ ನಮ್ಮ ಶಕ್ತಿಯನ್ನು ತೋರಿಸಲಿದ್ದೇವೆ. ನಾವು ಮಂಡಿಯೂರುವುದಕ್ಕಿಂತ ಒಂದು ಸಮೂಹ ಶಕ್ತಿಯಾಗಿ ಮೂಡಬೇಕು. ಮುಂದೊಂದು ದಿನ ನಮ್ಮ ಈ ಸಿದ್ದಾಂತ ಸರಿಯಾಗಿದೆ ಎಂದು ಹೇಳಿ ಜನರಿಗೆ ಮನವರಿಕೆ ಆಗುತ್ತದೆ. ಆ ಕಾರಣದಿಂದಾಗಿ ದ ಕ ಜಲ್ಲೆಯಲ್ಲಿ 6 ಗ್ರಾ.ಪಂ ಗಳಲ್ಲಿ ನಮ್ಮ ಜನಪ್ರತಿನಿಧಿಗಳು ಆಳ್ವಿಕೆ ಮಾಡುತ್ತಿದ್ದಾರೆ. ಪುತ್ತೂರು ವಿಧಾನಭಾ ಕ್ಷೇತ್ರದಲ್ಲಿ 20 ಕ್ಕಿಂತಲೂ ಅಧಿಕ ಜನಪ್ರತಿನಿಧಿಗಳು ಇದ್ದಾರೆ. ಪುತ್ತೂರಿನಲ್ಲೂ ಪಯಾರ್ಯ ರಾಜಕೀಯ ಬಯಸುವ ದೊಡ್ಡ ಸಮುಹಾ ನಮ್ಮಲ್ಲಿದೆ. ಇಲ್ಲಿನ ಕಾಂಗ್ರೆಸ್, ನಕಲಿ ಜಾತ್ಯಾತೀತ ಹಾಕಿಕೊಂಡ ಪಕ್ಷದ ವಿರೋಧಿಗಳಾಗಿದ್ದಾರೆ. ಆದರೆ ಅಂದು ಇಂದು ಮುಂದೆಯು ನಾವು ಬಿಜೆಪಿಯ ಮತ್ತು ಸಂಘ ಪರಿವಾರದ ಪ್ಯಾಸಿಸ್ಟ್ ಮನಸ್ಥಿತಿಯ ವಿರೋಧಿಗಳು. ನಾವು ಉಳಿದ ಪಕ್ಷದ ವಿರೋಧಿಗಳು ಅಲ್ಲ. ಆದರೆ ಇಲ್ಲಿರುವ ಉಳಿದ ಪಕ್ಷಗಳು ನಮ್ಮನ್ನು ವಿರೋಧಿಯನ್ನಾಗಿಸಿದೆ. ಅದು ನಮ್ಮ ತಪ್ಪಲ್ಲ. ನಿಮ್ಮ ತಪ್ಪನ್ನು ನೀವು ಸರಿಪಡಿಸುವುದಾದರೆ ನಾವೆಲ್ಲ ಒಗ್ಗಟ್ಟಾಗಿ ಈ ಪ್ಯಾಸಿಸ್ಟ್ ಅನ್ನು ವಿರೋಧಿಸಲು ಸಾಧ್ಯವಿದೆ. ಪ್ರಜಾಪ್ರಭುತ್ವವನ್ಬು ಧಿಕ್ಕರಿಸುತ್ತಿರುವ ನಮ್ಮ ಧ್ವನಿ ರಣ ಕಹಳೆಯಾಗಿ ಮೊಳಗಬೇಕು. ಅವರ ಕಾರ್ಯಯೋಜನೆ ಸಪಲವಾಗದಂತೆ ಮೊಳಗಬೇಕು. ಶೋಷಿತ ಸಮುದಾಯದವನ್ನು ಪ್ಯಾಸಿಸ್ಡ್ ಕಪಿಮುಷ್ಟಿಯಿಂದ ರಕ್ಷಿಸಲು ನಾವೆಲ್ಲ ಹೋರಾಟ ಮಾಡಲೇಬೇಕು. ಪ್ಯಾಸಿಸ್ಟ್ ಮನೋಸ್ಥಿತಿಯ ವಿರುದ್ದ ಹೇಳಿಕೆ ನೀಡುವ ಎದೆಗಾರಿಕೆ ಇಲ್ಲಿನ ವಿರೋಧ ಪಕ್ಷಗಳಿಗೆ ಇಲ್ಲ. ದೇಶ ವಿನಾಶದ ಅಂಚಿಗೆ ಹೋಗುತ್ತಿದೆ ಎಂದರಲ್ಲದೆ ಮುಂದಿನ ದಿನ ದೇಶದಲ್ಲಿ ಜಾತಿ ಗಣತಿ ಆಗಬೇಕು. ಜನಸಂಖ್ಯೆ ಆಧಾರದಲ್ಲಿ ಪ್ರಾತಿನಿಧ್ಯ ಇರಲಿ. ಜಾತಿ ಸಮೀಕ್ಷೆಗಿಂತಲೂ ಜನಗಣತಿ ಅಗತ್ಯ. ಕ್ಷೇತ್ರ ಪುನರ್ ವಿಂಗಡಣೆ ನಿಲ್ಲಬೇಕು ಎಂದು ಬೇಡಿಕೆ ಮುಂದಿಟ್ಟರು.


ದೇಶದಲ್ಲಿ ನಮ್ಮ ಅಸ್ತಿತ್ವ ಉಳಿಸಬೇಕಾಗಿದೆ:
ಸಿಎಎ, ಎನ್‌ಆರ್‌ಸಿಯನ್ನು ಮತ್ತೆ ಜಾರಿಗೆ ತರುತ್ತೇವೆ ಎಂಬ ಗೃಹ ಮಂತ್ರಿಯ ಮಾತುಗಳು ಮೊಳಗುತ್ತಿದೆ. ದೇಶದ ಮೂಲ ನಿವಾಸಿಗಳನ್ನು ಭಾರತದಿಂದ ಓಡಿಸುವ ಪ್ರಯತ್ನ ಕೇಂದ್ರ ಸರಕಾರದಿಂದ ಆಗುತ್ತಿದೆ. ಕೇಂದ್ರ ಸರಕಾರದ ಒಕ್ಕೂಟ ವ್ಯವಸ್ಥೆ ಈ ರೀತಿಯ ಷಡ್ಯಂತ್ರಗಳಿಂದ ಈ ದೇಶದ ಮೂಲ ನಿವಾಸಿಗಳನ್ನು, ಅಲ್ಪಸಂಖ್ಯಾತ ಸಮುದಾಯವನ್ನು ಎದುರಿಸಲು ಬರುವುದಾದರೆ ನಾವೆಲ್ಲ ಮತ್ತೆ ನಮ್ಮ ಐಕ್ಯ ಮತದ ಹೋರಾಟವನ್ನು ಮತ್ತೊಮ್ಮೆ ಸಾಬೀತು ಪಡಿಸಬೇಕಾಗಿದೆ. ನಾವೆಲ್ಲ ಈ ದೇಶದ ಫ್ಯಾಸಿಸ್ಟ್ ವಿರುದ್ಧ ಇದ್ದೇವೆ ಎಂದು ತೋರಿಸಲು ಹೋರಾಟದಲ್ಲಿ ಮುಂಚೂಣಿಯ ನಾಯಕತ್ವವನ್ನು ಪಕ್ಷದ ಕಾರ್ಯಕರ್ತರು, ನಾಯಕರು ಮುಂದಿನ ದಿನಗಳಲ್ಲಿ ವಹಿಸಿಕೊಳ್ಳಲು ತಯಾರಾಗಬೇಕಾಗಿದೆ. ಅದು ಯಾವುದೇ ರೀತಿಯಲ್ಲಾದರೂ, ಎಷ್ಟು ಕೇಸುಗಳು ದಾಖಲಾದರೂ, ಜೈಲುವಾಸ ಅನುವಿಸಬೇಕಾಗಿ ಬಂದರೂ ಕೂಡಾ ಆ ಕೆಲಸವನ್ನು ನಾವು ಮುಂದೆ ನಿಂತು ಈ ದೇಶದಲ್ಲಿ ನಮ್ಮ ಅಸ್ತಿತ್ವವನ್ನು ಉಳಿಸಬೇಕಾಗಿದೆ ಎಂದು ರಿಯಾಝ್ ಫರಂಗಿಪೇಟೆ ಹೇಳಿದರು.


ಕಾಂಗ್ರೆಸ್‌ಗೆ ಅಲ್ಪಸಂಖ್ಯಾತ ಮತ ಬೀಳುತ್ತೆಂಬ ಭ್ರಮೆ:
ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಭಾರತವನ್ನು ಜೋಡಿಸಲಿಕ್ಕಿದ್ದೇವೆ ಎಂದು ಹೇಳಿಕೊಂಡು ಬಂದ ವ್ಯಕ್ತಿಗಳೂ ಈಗ ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದ ರಿಯಾಝ್ ಫರಂಗಿಪೇಟೆ ಅವರು ಅಲ್ಪಸಂಖ್ಯಾತ ಸಮುದಾಯವನ್ನು ಅಪಹಾಸ್ಯ ಮಾಡಿದ ಸಂದರ್ಭದಲ್ಲಿ, ದಲಿತ ಸಹೋದರರ ಮಹಿಳೆಯರಿಗೆ ಅವಮಾನ ಮಾಡಿದ ಸಂದರ್ಭದಲ್ಲಿ ನಮ್ಮ ಉಲೇಮಗಳನ್ನು ಬಂಧನ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್‌ನ ಪ್ರೀತಿಯ ಅಂಗಡಿ ಎಲ್ಲಿ ಹೋಗಿತ್ತು. ವಿರೋಧ ಪಕ್ಷದ ಜವಾಬ್ದಾರಿ ನಡೆಸಬೇಕೆಂಬ ಚಿಂತನೆಯೂ ಅವರಿಗೆ ಬರಲಿಲ್ಲ. ವಿರೋಧ ಪಕ್ಷದ ಎಲ್ಲರು ಒಗ್ಗಟ್ಟಾಗಿ ಫ್ಯಾಸಿಸ್ಟ್ ಮನಸ್ಥಿತಿಯ ಸಂವಿಧಾನವನ್ನು ಉರುಳಿಸಬೆಕಾಗಿದೆ. ಆದರೆ ಕೆಲವರು ಪ್ಯಾಸಿಸ್ಟ್ ವ್ಯವಸ್ಥೆಯನ್ನು ಪೋಷಣೆ ಮಾಡುತ್ತಿದ್ದಾರೆ. ಕಾಂಗ್ರಸ್‌ಗೆ ಅಲ್ಪಸಂಖ್ಯಾತ ಓಟುಗಳು ಕಣ್ಣು ಮುಚ್ಚಿ ಬೀಳುತ್ತವೆ ಎಂಬ ಭ್ರಮೆ ಇದೆ. ನಮ್ಮ ಮತಗಳು ಅವರಿಗೆ ಹೋಲ್ ಸೇಲ್ ಆಗಿ ಬೇಕು. ಆದರೆ ನಮ್ಮ ಸಮಸ್ಯೆಗಳು ಅವರಿಗೆ ಬೇಕಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿರುವಾಗ ನಾವು ನಮ್ಮದೇ ಅದ ಶಕ್ತಿಯನ್ನು ವೇದಿಕೆಯನ್ನು ರಾಜಕೀಯ ಚೈತನ್ಯವನ್ನು ಈ ಸಮಾಜದ ಮುಂದೆ ತೋರಿಸವಲ್ಲಿ ತಪ್ಪೇನಿದೆ ಎಂದರು.


ಮೊದಲು ನಮ್ಮ ಮನೆಯವರನ್ನು ಪಕ್ಷಕ್ಕೆ ಸೇರಿಸಿ:
ಎಸ್‌ಡಿಪಿಐ ಪಕ್ಷದ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್ ಹಾಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಪಕ್ಷವು 14 ವರ್ಷ 8 ತಿಂಗಳ ಹಿಂದೆ ಈ ದೇಶದಲ್ಲಿ ಹುಟ್ಟಿತು. ಇವತ್ತು ಪಕ್ಷ ಸಂಘಟನೆಯಾಗಿ ಶಕ್ತಿಯುತವಾಗಿ ಬೆಳೆಯುತ್ತಾ ಬರುತ್ತಿದೆ. ಪಕ್ಷ ಕಟ್ಟಲು ಮಹಿಳೆಯ ಪಾತ್ರ ಬಹಳ ಮುಖ್ಯ ಎಂದಾಗ ಉಮೆನ್ ವಿಂಗ್ ಮೂವ್‌ಮೆಂಟ್ ರಾಜ್ಯ, ಜಿಲ್ಲೆ, ತಾಲೂಕು ಸಮಿತಿ ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ಈಗಾಗಲೇ ಸದಸ್ಯತ್ವ ಅಭಿಯನ ಹಮ್ಮಿಕೊಂಡಿದ್ದೇವೆ. ಇಲ್ಲಿ ನಾವು ಮೊದಲು ನಮ್ಮ ಮನೆಯವರನ್ನು ಪಕ್ಷಕ್ಕೆ ಸೇರಿಸುವ ಕೆಲಸ ಆಗಬೇಕು. ನಮ್ಮ ಮನೆಯವರನ್ನು ಮೊದಲು ಪಕ್ಷಕ್ಕೆ ಸೇರಿಸದಿದ್ದರೆ ಹೊರಗಿನವರನ್ನು ಸೇರಿಸುವ ನೈತಿಕತೆ ನಮಗಿಲ್ಲ. ಅದೆ ರೀತಿ ಪಕ್ಷದ ಮಾಸಿಕ ಸಭೆಯು ಸರಿಯಾದ ಸಮಯಕ್ಕೆ ನಡೆಯಬೇಕು. ಪಕ್ಷದ ವತಿಯಿಂದ ನಡೆಯುವ ಯಾವುದೇ ಪ್ರತಿಭಟನೆಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಹೋರಾಟದ ಮೂಲಕ ಪಕ್ಷ ಬಂದಿದೆ. ಕೇವಲ ಚುನಾವಣೆ ಮಾತ್ರವಲ್ಲ ಜನರ ಕಣ್ಣೀರು ಒರೆಸುವ ಕೆಲಸ ಆಗಬೇಕೆಂದರು. ರಾಜ್ಯ ಸಮಿತಿ ಸದಸ್ಯ ವಕೀಲ ಮಜೀದ್ ಖಾನ್, ಪಕ್ಷದ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರ್, ಪುತ್ತೂರು ಉಸ್ತುವಾರಿ ಅಬೂಬಕರ್ ಸಿದ್ದಿಕ್, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ಕೋಶಾಧಿಕಾರಿ ವಿಶ್ವನಾಥ್ ಪುಣಚ, ವುಮೆನ್ ಇಂಡಿಯಾ ಮುವುಮೆಂಟ್ ತಾಲೂಕು ಅಧ್ಯಕ್ಷೆ ಜಾಹಿದಾ ಸಾಗರ್, ನಗರಸಭಾ ಸದಸ್ಯೆ ಪಾತಿಮಾತ್ ಜೋರಾ, ಕ್ಷೇತ್ರ ಸಮಿತಿ ಸದಸ್ಯ ಬಿ.ಕೆ.ಮುಸ್ತಾಪ, ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೊಡಿಪ್ಪಾಡಿ, ರೆಹಮಾನ್, ಅಶ್ರಫ್ ಬಾವು, ಪಿ.ಬಿ.ಕೆ.ಮೊಹಮ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್‌ಡಿಪಿಐ ಪಕ್ಷದ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಪೇರಮೊಗ್ರು ಸ್ವಾಗತಿಸಿದರು. ರಿಯಾಜ್ ಬಳಕ್ಕ ಕಾರ್ಯಕ್ರಮ ನಿರೂಪಿಸಿದರು. ಡಿ.ಬಿ ಮುಸ್ತಾಫ ವಂದಿಸಿದರು. ಕಾರ್ಯಕ್ರಮದಲ್ಲಿ ರಾಜಕೀಯ ವ್ಯವಸ್ಥೆಯ ಕುರಿತು ಸ್ಲೈಡ್ ಶೋ ಮೂಲಕ ಕಾರ್ಯಕರ್ತರಿಗೆ ಮಾಹಿತಿ ನೀಡಲಾಯಿತು.

ಒಂದು ಸಮುದಾಯದ ಮತಗಳ ಕ್ರೋಢಿಕರಣವೇ ರಾಮಮಂದಿರ
ಇವತ್ತು ಪೂಜಾರಿಗಳು ಸಂಸತ್ ಭವನವನ್ನು ಉದ್ಘಾಟಿಸುತ್ತಿದ್ದಾರೆ. ರಾಜಕೀಯ ನೇತಾರರು ದೇವಸ್ಥಾನವನ್ನು ಉದ್ಘಾಟಿಸುತ್ತಿದ್ದಾರೆ. ಇವತ್ತು ದೇಶದ ಸಂಸತ್ ವ್ಯವಸ್ಥೆ ಅಪಹಾಸ್ಯವಾಗಿದೆ. ಧರ್ಮರಾಜಕಾರಣ ನಡೆಯುತ್ತಿದೆ. ರಾಮ ಮಂದಿರವು ಒಂದು ಸಮುದಾಯದ ಮತಗಳನ್ನು ಕ್ರೋಡಿಕರಿಸಲಿರುವ ಷಡ್ಯಂತ್ರದ ಭಾಗವೆ ಹೊರತು ಅದು ಯಾವುದೇ ಕಾರಣಕ್ಕೂ ದೈವ ಭಕ್ತಿಯ ಪ್ರತೀಕ ಅಲ್ಲ. ದೇವರ ಬಗ್ಗೆ ಭಕ್ತಿಯೇ ಇರದೇ ಇರುವ ವ್ಯಕ್ತಿಗಳಾಗಿದ್ದಾರೆ. ಅವರು ಪ್ಯಾಸಿಸ್ಟ್ ಪರಿವಾರದಲ್ಲಿ ಇರುವವರು. ಇವತ್ತು ದೊಡ್ಡ ಸಮುದಾಯವನ್ನು ಮೂರ್ಖರನ್ನಾಗಿಸುವಲ್ಲಿ ಬಿಜೆಪಿ ಸರಕಾರ ಯಶಸ್ಸನ್ನು ಕಾಣುತ್ತಿದೆ. ಅದರ ಮೂಲಕ ಮತಬೇಟೆ ಮಾಡುತ್ತಿದೆ. ಇದರ ಮುಂದುವರಿದ ಭಾಗವಾಗಿ ಮಥುರಾ ಜ್ಞಾನವ್ಯಾಪಿ ಮಸೀದಿಯ ಪ್ರಕರಣವಾಗಿದೆ. ತಳಮಟ್ಟದ ನ್ಯಾಯಾಲಯ ಒಂದು ವರ್ಗದ ಪರವಾಗಿ ತೀರ್ಪು ನೀಡುತ್ತಿದೆ. ಆದರೆ ನಾವು ಯಾವತ್ತೂ ಕೂಡಾ ಧರ್ಮ ರಾಜಕಾರಣ ಮಾಡಿಲ್ಲ. ಆದರೆ ಇಲ್ಲಿನ ದ್ವಿಮುಖ ಧೋರಣೆ ವಿರುದ್ಧ ನಾವು ಸಂವಿಧಾನ ನೀಡಿದ ಹಕ್ಕಿನಲ್ಲಿ ಪ್ರಶ್ನೆ ಮಾಡಬೇಕಾಗಿದೆ ಎಂದು ರಿಯಾಝ್ ಫರಂಗಿಪೇಟೆ ಹೇಳಿದರು.

ಪಕ್ಷಕ್ಕೆ ಸೇರ್ಪಡೆ
ಅರೇಬಿಕ್ ಕಾಲೇಜಿನ ಅಬ್ದುಲ್ ಕರೀಂ ಪುಣಚ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಅವರು ಅಬ್ದುಲ್ ಕರೀಂ ಅವರಿಗೆ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.

LEAVE A REPLY

Please enter your comment!
Please enter your name here