ಫೆ.24-26 ಪರ್ಲಡ್ಕದಲ್ಲಿ ಸಂಭ್ರಮಿಸಲಿದೆ ‘ಎಸ್‌ಡಿಪಿ ಕಲೋಪಾಸನಾ’ ಸಾಂಸ್ಕೃತಿಕ ಕಲಾ ಸಂಭ್ರಮ

0

ಪುತ್ತೂರು:ಕಳೆದ 19 ವರ್ಷಗಳಿಂದ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸಂಗೀತ, ಭರತನಾಟ್ಯ ಕಲಾವಿದರನ್ನು ಪುತ್ತೂರಿಗೆ ಪರಿಚಯಿಸಿ ಅವರ ಮೂಲಕ ಸಾಂಸ್ಕೃತಿಕ ರಸದೌತನ ಉಣಬಡಿಸುತ್ತಿರುವ ಪರ್ಲಡ್ಕ ಎಸ್‌ಡಿಪಿ ರೆಮಿಡೀಸ್& ರಿಸರ್ಚ್ ಸೆಂಟರ್‌ನ ಎಸ್‌ಡಿಪಿ ಕಲೋಪಾಸನಾ ಸಾಂಸ್ಕೃತಿಕ ಕಲಾ ಸಂಭ್ರಮದ 20ನೇ ವರ್ಷದ ಕಾರ್ಯಕ್ರಮಗಳು ಫೆ.24ರಿಂದ ಪ್ರಾರಂಭಗೊಂಡು 26ರ ತನಕ ಪರ್ಲಡ್ಕದಲ್ಲಿರುವ ಸಂಸ್ಥೆಯ ಆವರಣದಲ್ಲಿ ಸಂಭ್ರಮಿಸಲಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ ಹೇಳಿದರು.


ಫೆ.21ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಸ್ಕೃತಿಕ ಕಲಾ ಸಂಭ್ರಮದ ಮೊದಲ ದಿನವಾದ ಫೆ.24ರಂದು ಸಂಜೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು ಮಂಗಳೂರು ಕೆಎಂಸಿ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ.ಸಿ.ಕೆ ಬಲ್ಲಾಲ್ ಉದ್ಘಾಟಿಸಲಿದ್ದಾರೆ. ನಂತರ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದೂಸ್ಥಾನಿ ಸಂಗೀತ ಜುಗಲ್‌ಬಂದಿ ನಡೆಯಲಿದ್ದು ಹಾಡುಗಾರಿಕೆಯಲ್ಲಿ ವಿದ್ವಾನ್ ಸಂದೀಪ್ ನಾರಾಯಣ್ ಚೆನ್ನೈ, ವಯಲಿನ್‌ನಲ್ಲಿ ವಿದ್ವಾನ್ ಬಿ.ಅನಂತಕೃಷ್ಣ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ಕೆ.ಯು ಜಯಚಂದ್ರ ರಾವ್ ಬೆಂಗಳೂರು, ಹಾಡುಗಾರಿಕೆಯಲ್ಲಿ ಪಂಡಿತ್ ಜಯತೀರ್ಥ ಮೇವುಡಿ ಬೆಂಗಳೂರು, ಹಾರ್ಮೋನಿಯಂನಲ್ಲಿ ವ್ಯಾಸಮೂರ್ತಿ ಕಟ್ಟೆ ಹಾಗೂ ತಬಲದಲ್ಲಿ ಯಶವಂತ ವೈಷ್ಣವ್ ಸಹಕರಿಸಲಿದ್ದಾರೆ.


ಎರಡನೇ ದಿನವಾದ ಫೆ.25ರಂದು ಸಂಜೆ ಭರತನಾಟ್ಯ ಭರತಾಂಜಲಿ ನೃತ್ಯ ಸಂಸ್ಥೆಯವರಿಂದ ಅನಿತಾ ಗುಹಾ ಚೆನ್ನೈ ನಿರ್ದೇಶನದಲ್ಲಿ ‘ಹರೇ ರಾಮ ಹರೇ ಕೃಷ್ಣಾ’ ಎಂಬ ಭರತನಾಟ್ಯ ನೃತ್ಯಗಾಥಾ ವಿಶೇಷ ಕಾರ್ಯಕ್ರಮ ನಡೆಯಲಿದೆ. ಕೊನೆಯ ದಿನವಾದ ಫೆ.26ರಂದು ಸಂಜೆ ಹನುಮಗಿರಿ ಮೇಳದವರಿಂದ ‘ಇಂದ್ರಪ್ರಸ್ಥ’ ಎಂಬ ಯಕ್ಷಗಾನ ನಡೆಯಲಿದೆ ಎಂದು ಅವರು ತಿಳಿಸಿದರು. ಸಂಸ್ಥೆಯ ನಿರ್ದೇಶಕಿ ರೂಪಲೇಖ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here