![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಸೋಲು, ಯಶಸ್ಸನ್ನು ಸಮನಾಗಿ ಸ್ವೀಕರಿಸಿ ಮುಂದಡಿಯಿಡಿ-ಮಧು ಎಸ್.ಮನೋಹರ್
ಪುತ್ತೂರು: ನಿತ್ಯ ದೈನಂದಿನ ಚಟುವಟಿಕೆಗಳ ನಡುವೆಯೂ ನಾವು ಯಾವುದಾದರೊಂದು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಾಗ ಎದುರಾಗುವ ಯಶಸ್ಸು ಹಾಗೂ ಸೋಲನ್ನು ಸಮನಾಗಿ ಸ್ವೀಕರಿಸಿ ಮುಂದಡಿಯಿಟ್ಟಾಗ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್ ರವರು ಹೇಳಿದರು.
ಫೆ.29 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸಂಪ್ಯ ಅಕ್ಷಯ ಕಾಲೇಜಿನ ವಾರ್ಷಿಕ ಕ್ರೀಡಾಕೂಟ “ಸ್ಪೈರೋ ,2024” ಅನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಪಥ ಸಂಚಲನದ ಗೌರವ ವಂದನೆಯನ್ನು ಸ್ವೀಕರಿಸಿ, ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಪುತ್ತೂರು ತಾಲೂಕು ನಿವೃತ್ತ ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ ಮಾಧವ ಬಿ.ಕೆ ಮಾತನಾಡಿ, ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಯಾವುದೇ ಚಟುವಟಿಕೆ ಮಾಡಲು ದೈಹಿಕ ಹಾಗೂ ಮಾನಸಿಕ ಆರೋಗ್ಯ ಮುಖ್ಯ. ಕ್ರೀಡಾಪಟುಗಳಿಗೆ ಕ್ರೀಡಾಂಗಣದಲ್ಲಿ ಮಾತ್ರ ವೈರಿಗಳು ಆದರೆ ಕ್ರೀಡಾಂಗಣದ ಹೊರಗೆ ಎಲ್ಲರೂ ಮಿತ್ರರು. ವಿದ್ಯಾರ್ಥಿಗಳು ಭಾರತೀಯ ಸೇನೆಯಲ್ಲಿ ಗುರುತಿಸುವಂತಾಗಬೇಕು ಎಂದರು.
![](https://puttur.suddinews.com/wp-content/uploads/2024/03/RAI9588.jpg)
ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲು ಮಾತನಾಡಿ, ಕ್ರೀಡಾಕೂಟದಲ್ಲಿನ ಪಥಸಂಚಲನದಲ್ಲಿ ಯಾವುದೇ ತರಬೇತಿ ಪಡೆಯದೆ ಬಹಳ ಶಿಸ್ತುಬದ್ಧವಾಗಿ ಭಾಗವಹಿಸಿರುವುದು ಹೆಮ್ಮೆ ತಂದಿದೆ. ಜೀವನದಲ್ಲಿ ಸೋಲು-ಗೆಲುವು ಇರುತ್ತದೆ ಆದರೆ ಸೋಲನ್ನು ಜವಾಬ್ದಾರಿಯುತವಾಗಿ ಸ್ವೀಕರಿಸಿ ಜಯಿಸುವತ್ತ ಹೆಜ್ಜೆ ಇಡಬೇಕು ಎಂದರು.
![](https://puttur.suddinews.com/wp-content/uploads/2024/03/RAI9636.jpg)
ಕೊಂಬೆಟ್ಟು ಜ್ಯೂನಿಯರ್ ಕಾಲೇಜ್ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಜಾನೆಟ್ ಪಾಯಿಸ್ ಮಾತನಾಡಿ, ಮಾನವನ ನಿಜವಾದ ಸಂಪತ್ತು ಆರೋಗ್ಯ. ಆರೋಗ್ಯ ಇದ್ರೆ ಎಲ್ಲವೂ ಜಯಿಸಿದ ಹಾಗೆ. ಮನುಷ್ಯ ಯಾವಾಗಲೂ ಚಟುವಟಿಕೆಯಿಂದ ಇದ್ದಾಗ ಸದೃಢ ಆರೋಗ್ಯ ನಮ್ಮದಾಗುವುದು. ಆಧುನಿಕ ಯುಗದಲ್ಲಿ ಸ್ಪರ್ಧೆ ಸಹಜ. ಆದರೆ ಸ್ಪರ್ಧೆಯು ಆರೋಗ್ಯಕರ ಸ್ಪರ್ಧೆಯಾಗಲಿ ಎಂದರು.
ಕ್ರೀಡಾಕೂಟಕ್ಕೆ ಸಹಕರಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಮೋನಪ್ಪ ಎಂ, ನವೀನ್, ಮನೋಹರ್ ಮೆದು, ದಾಮೋದರ್, ಪ್ರಸಾದ್ ರವರನ್ನು ಅಭಿನಂದಿಸಲಾಯಿತು. ಕಾಲೇಜು ಆಡಳಿತ ನಿರ್ದೇಶಕಿ ಕಲಾವತಿ ಜಯಂತ್, ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು.
![](https://puttur.suddinews.com/wp-content/uploads/2024/03/RAI9543.jpg)
ವಿದ್ಯಾರ್ಥಿನಿ ಪ್ರಕೃತಿ ಪ್ರಾರ್ಥಿಸಿದರು. ಉಪನ್ಯಾಸಕ ಹರೀಶ್ಚಂದ್ರ ಸ್ವಾಗತಿಸಿದರು. ಉಪನ್ಯಾಸಕರಾದ ಕಿಶೋರ್ ಕುಮಾರ್, ಪ್ರಭಾ, ಕಾಲೇಜು ಆಡಳಿತ ಸಮಿತಿ ಸದಸ್ಯ ನಾರಾಯಣ ಕೆ.ವಿರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಕ್ರೀಡಾ ಸಂಯೋಜಕ ರಕ್ಷಣ್ ಟಿ.ಆರ್ ರವರು ಪ್ರಮಾಣವಚನ ನೆರವೇರಿಸಿ, ವಂದಿಸಿದರು. ಉಪನ್ಯಾಸಕರಾದ ರಶ್ಮಿ ಹಾಗೂ ಕಿಶನ್ ಎನ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕ ವೃಂದ, ಆಡಳಿತ ಸಿಬ್ಬಂದಿ ವರ್ಗ ಸಹಕರಿಸಿದರು
ಆಕರ್ಷಕ ಪಥಸಂಚಲನ..
ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಬ್ಯಾಂಡ್ ವಾದ್ಯದೊಂದಿಗೆ ಅಕ್ಷಯ ಕಾಲೇಜಿನ ಶ್ರೇಷ್ಠ, ಭಗೀರಾ, ಜಟಾಯು, ಯುಕ್ತ, ಐಕ್ಯಂ, ಆಭಯ ಹೀಗೆ ಆರು ವಿದ್ಯಾರ್ಥಿಗಳ ತಂಡ ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್ ಹಾಗೂ ಅತಿಥಿ ಗಣ್ಯರಿಂದ ಗೌರವ ವಂದನೆ ಸ್ವೀಕಾರದೊಂದಿಗೆ ಆಕರ್ಷಕ ಪಥ ಸಂಚಲನ ನಡೆಸಿದರು. ಈ ಪಥ ಸಂಚಲನದಲ್ಲಿ ಆಭಯ ತಂಡ ಪ್ರಥಮ, ಜಟಾಯು ದ್ವಿತೀಯ, ಭಗೀರಾ ತೃತೀಯ ಸ್ಥಾನ ಗಳಿಸಿತು. ಸುಮಾರು 400ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಆಯಾ ತಂಡಗಳ ಸಮವಸ್ತ್ರದೊಂದಿಗೆ ಪಥ ಸಂಚಲನದಲ್ಲಿ ಭಾಗವಹಿಸಿದರು.
![](https://puttur.suddinews.com/wp-content/uploads/2024/03/RAI9642.jpg)
ಕ್ರೀಡಾಜ್ಯೋತಿ ಮೆರವಣಿಗೆ..
ರಾಷ್ಟ್ರೀಯ ಕ್ರೀಡಾಪಟು ವರ್ಷಿಣಿರವರ ಮುಂದಾಳತ್ವದಲ್ಲಿ ಇತರ ಕ್ರೀಡಾಪಟುಗಳಾದ , ಧನುಷ್, ಯಜ್ಞೇಶ್, ನವೀನ್, ಹೇಮರವರೊಂದಿಗೆ ಕ್ರೀಡಾಜ್ಯೋತಿಯು ಕ್ರೀಡಾಂಗಣಕ್ಕೆ ಒಂದು ಸುತ್ತಿನ ಪ್ರದಕ್ಷಿಣೆ ನಡೆಸಿ ಕ್ರೀಡಾಜ್ಯೋತಿಯನ್ನು ಅಕ್ಷಯ ಕಾಲೇಜು ಚೇರ್ ಮ್ಯಾನ್ ಜಯಂತ್ ನಡುಬೈಲುರವರಿಗೆ ಹಸ್ತಾಂತರಿಸಲಾಯಿತು. ಬಳಿಕ ಕ್ರೀಡಾಜ್ಯೋತಿಯನ್ನು ಜಯಂತ್ ನಡುಬೈಲುರವರು ಮೇಲಕ್ಕೆತ್ತಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಪೊಟೋ: ನವೀನ್ ಪಂಜಳ