ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಕಳಿಯಾಟ ಮಹೋತ್ಸವ ಸಂಪನ್ನ

0

ಪುತ್ತೂರು: ವಾಣಿಯನ್ ಗಾಣಿಗ ಸಮುದಾಯದವರ ಕುಲದೇವತೆಯಾಗಿರುವ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ 7 ದಿನಗಳ ಕಾಲ ನಡೆದ ‘ಕಳಿಯಾಟ ಮಹೋತ್ಸವ’ವು ಲಕ್ಷಾಂತರ ಮಂದಿ ಭಕ್ತಾದಿಗಳು ಭಾಗವಹಿಸುವ ಮೂಲಕ ಭಕ್ತಿ ಭಾವದ ಸಂಭ್ರಮಕ್ಕೆ ಸಾಕ್ಷಿಯಾಯಿತು.

ಕಳಿಯಾಟ ಮಹೋತ್ಸವವು ಮಾ.1ರಂದು ಶ್ರೀ ಅನಂತಪುರ ಅನಂತ ಪದ್ಮನಾಭ ಸ್ವಾಮಿ ದೇವರ ಸನ್ನಿಧಿಯಿಂದ ಭಂಡಾರ ಅಗಮನ, ಹೊರೆಕಾಣಿಕೆ ಮೆರವಣಿಗೆ, ಶ್ರೀ ಸನ್ನಿಧಿಯಲ್ಲಿ ಕೊಡಿ ಎಲೆ ಇಡುವುದು, ಅಚ್ಚನ್ಮಾರರ ದರ್ಶನ, ಉಗ್ರಾಣ ತುಂಬಿಸುವುದು, ಅಕ್ಷಯ ಪಾತ್ರೆ ಇಡುವುದು, ಅಪರಾಹ್ನ ತಂಬುರಾಟಿಯ ಮಧ್ಯಾಹ್ನ ಸ್ತೋತ್ರದೊಂದಿಗೆ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಪ್ರತಿ ದಿನ ಕ್ಷೇತ್ರದಲ್ಲಿ ಪುಲ್ಲೂರ್‌ಕಣ್ಣನ್ ದೈವದ ನರ್ತನ, ಕಣ್ಣಂಗಾಟ್ ಭಗವತಿ-ಪುಲ್ಲೂರ್‌ಕಾಳಿ ದೈವಗಳ ನರ್ತನ, ಪುಲ್ಲೂರ್‌ಕಣ್ಣನ್ ದೈವದ ವೆಳ್ಳಾಟ, ವಿಷ್ಣುಮೂರ್ತಿ ದೈವದ ತೊಡಂಙಲ್, ಕಣ್ಣಂಗಾಟ್ ಭಗವತಿ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ ಸೇರಿದಂತೆ ವಿವಿಧ ದೈವಗಳ ನರ್ತನ ಸೇವೆ ನೆರವೇರಿತು. ಏಳು ದಿವಸವು ಪ್ರಧಾನ ದೈವಗಳೊಂದಿಗೆ ಭಗವತಿ ದೇವಿಯು ಆರಾಧಿಸಲ್ಪಟ್ಟು ಕೊನೆಯ ದಿನವಾದ ಮಾ.7ರಂದು ನರಂಬಿಲ್ ಭಗವತಿ ದೈವದ ನರ್ತನ, ಪೂರ್ವಾಹ್ನ ಪುಲ್ಲೂರ್ ಕಾಳಿ ದೈವದ ನರ್ತನ, ತೀಪಾತಿ ದೈವದ ನರ್ತನ, ಅಗ್ನಿ ಸೇವೆ, ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಸಿರಿಮುಡಿ ದರ್ಶನ, ಪುಲ್ಲೂರ್‌ಕಾಳಿ ದೈವದೊಂದಿಗೆ ಭೇಟಿ, ಪ್ರಸಾದ ವಿತರಣೆಯೊಂದಿಗೆ ಕಳಿಯಾಟ ಮಹೋತ್ಸವವು ಸಂಪನ್ನಗೊಂಡಿತ್ತು.

ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶಾಲವಾದ ಪಾರ್ಕಿಂಗ್ ಸೌಲಭ್ಯ, ಕ್ಷೇತ್ರದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ವೀಕ್ಷಣೆಗೆ ಅನುಕೂಲವಾಗುವಂತೆ ವಿಶಾಲವಾದ ಗ್ಯಾಲರಿಗಳು, ಕುಳಿತು ಊಟ ಮಾಡುವ ವಿಶಾಲವಾದ ಭೋಜನ ಶಾಲೆ, ಶುಚಿ ರುಚಿಯಾದ ಊಟ, ಉಪಹಾರಗಳು, ತಂಪು ಪಾನೀಯಗಳು, ಅತಿಥಿ ಸತ್ಕಾರಗಳು ಅತ್ಯಂತ ಶಿಸ್ತು ಹಾಗೂ ವ್ಯವಸ್ಥಿತವಾಗಿ ನೆರವೇರಿತು. ಕಳಿಯಾಟ ಮಹೋತ್ಸವಕ್ಕೆ ಕುಂಬಳೆ ಪೇಟೆಯಿಂದಲೇ ಬಂಟಿಂಗ್ಸ್, ವಿದ್ಯುತ್ ದೀಪಗಳಿಂದ ಶೃಂಗಾರಗೊಂಡಿದ್ದು ಭಕ್ತರನ್ನು ಕ್ಷೇತ್ರಕ್ಕೆ ಕೈಬೀಸಿ ಕರೆಯುವಂತಿತ್ತು. ವಿವಿಧ ವಿಭಾಗಗಳಲ್ಲಿ ಸ್ವಯಂಸೇವಕರ ತಂಡವು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದೆ. ಕ್ಷೇತ್ರಕ್ಕೆ ಪ್ರತಿದಿನ ವಿವಿಧ ಭಾಗಗಳ ಭಕ್ತರಿಂದ ಹಸಿರು ಹೊರೆಕಾಣಿಕೆಗಳು ಸಮರ್ಪಣೆಗೊಂಡಿದೆ. ಕ್ಷೇತ್ರದ ಪ್ರವೇಶ ಧ್ವಾರದ ಬಳಿಯಲ್ಲಿ ವಾಣಿಯನ್ ಗಾಣಿಗ ಸಮುದಾಯದ ಕುಲ ಕಸುಬು ಗಾನದಿಂದ ಎಣ್ಣೆ ತೆಗೆಯುವ ಸ್ಥಬ್ದ ಚಿತ್ರ ಸೇರಿದಂತೆ ಹಲವು ಸ್ಥಬ್ದ ಚಿತ್ರಗಳು ವಿಶೇಷ ಆಕರ್ಷಣೆಯಾಗಿತ್ತು.

ಪುತ್ತೂರು, ಕಡಬ ತಾಲೂಕಿನ ವಾಣಿಯನ್ ಗಾಣಿಗ ಸಮಾಜ ಬಾಂಧವರು ಹಾಗೂ ಭಕ್ತಾದಿಗಳಿಂದ ಮಾ.2ರಂದು ಬೃಹತ್ ಹಸಿರು ಹೊರೆಕಣಿಕೆ ಸಮರ್ಪಣೆಗೊಂಡಿತ್ತು. 7 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ನಿರಂತರವಾಗಿ ಪುತ್ತೂರಿನ ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಸಮುದಾಯದ ಹಲವು ಮಂದಿ ಪ್ರಮುಖರು ಕಳಿಯಾಟ ಮಹೋತ್ಸವದಲ್ಲಿ ವಿವಿಧ ಜವಾಬ್ದಾರಿಗಳಲ್ಲಿ ಕಾರ್ಯನಿರ್ವಹಿಸಿದ್ದರು. ಕ್ಷೇತ್ರದಲ್ಲಿ 20ವರ್ಷಗಳ ನಂತರ ನಡೆದ ಕಳಿಯಾಟ ಮಹೋತ್ಸವದಲ್ಲಿ ಕರ್ನಾಟಕ ಹಾಗೂ ಕೇರಳದ ರಾಜ್ಯದ ವಿವಿಧ ಭಾಗಗಳಿಂದ ಪ್ರತಿದಿನ ಸಹಸ್ರರಾರು ಸಂಖ್ಯೆಯಲ್ಲಿ ಆಗಮಿಸಿ ಕಳಿಯಾಟ ಮಹೋತ್ಸವದ ವೈಭವವನ್ನು ಕಣ್ತುಂಬಿಕೊಂಡು ಪುನೀತರಾದರು.

LEAVE A REPLY

Please enter your comment!
Please enter your name here