ಎ.19-ಎ.28: ಕಟ್ಟತ್ತಿಲ ಜುಮಾ ಮಸೀದಿಯಲ್ಲಿ ಉರೂಸ್ ಕಾರ್ಯಕ್ರಮ

0

ವಿಟ್ಲ: ಸಾಲೆತ್ತೂರು ಗ್ರಾಮದ ಕಟ್ಟತ್ತಿಲದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಇತಿಹಾಸ ಪ್ರಸಿದ್ಧ ಅಸ್ಸಯ್ಯಿದ್ ವಲಿಯುಲ್ಲಾಹಿ (ಖ.ಸಿ) ಅವರ ಹೆಸರಿನಲ್ಲಿ 2 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಮತ್ತು ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮ ಎ.19ರಿಂದ ಎ.28ರ ವರೆಗೆ ನಡೆಯಲಿದ್ದು, ಎ.28ರಂದು ಉರೂಸ್ ಹಾಗೂ ಅನ್ನದಾನ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಮತ್ತು ಮುದರಿಸ್ ಇಬ್ರಾಹಿಂ ಫೈಝಿ ಪುಳಿಕೂರ್ ಉಸ್ತಾದರ ನೇತೃತ್ವದಲ್ಲಿ ನಡೆಯಲಿದೆ ಎಂದು ಕಟ್ಟತ್ತಿಲ ಜುಮ್ಮಾ ಮಸೀದಿ ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಕೆ.ಎಮ್ ಮುಹ್‍ಯಿದ್ದೀನ್ ಮದನಿ ಕಟ್ಟತ್ತಿಲ ತಿಳಿಸಿದರು.

ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಎ.19ರಂದು ಜುಮಾ ನಮಾಝಿನ ಬಳಿಕ ಅಸ್ಸಯ್ಯಿದ್ ಹಾಮಿದ್ ಅಲ್ ಹಾದಿ ತಂಙಳ್ ಮಂಜೇಶ್ವರ ನೇತೃತ್ವದಲ್ಲಿ ಕೂಟು ಝಿಯಾರತ್ ಮತ್ತು ಧ್ವಜಾರೋಹಣ ನಡೆಯಲಿದೆ. ಪಾತೂರು ಉಸ್ತಾದ್ ಉದ್ಘಾಟಿಸಲಿದ್ದಾರೆ. ಪ್ರತಿದಿನ ಧಾರ್ಮಿಕ ಪ್ರಭಾಷಣ ನಡೆಯಲಿದೆ. ಎ.22ರಂದು ಕುಂಬೋಳ್ ಜಾಫರ್ ಸ್ವಾದಿಖ್ ತಂಙಳ್ ಆಧ್ಯಾತ್ಮಿಕ ಜಲಾಲಿಯ ರಾತೀಬ್‍ಗೆ ನೇತೃತ್ವ ನೀಡಲಿದ್ದಾರೆ. ಎ.25ರಂದು ರಾತ್ರಿ ಅಸ್ಸಯ್ಯಿದ್ ಅಹ್ಮದ್ ಶಿಹಾಬುದ್ದೀನ್ ತಂಙಳ್ ಸ್ವಲಾತ್ ಮಜ್ಲಿಸ್‍ಗೆ ನೇತೃತ್ವ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮೂರು ದಶಕಗಳ ಸೇವೆ ಸಲ್ಲಿಸಿದ ಇಬ್ರಾಹಿಂ ಫೈಝಿ ಪುಳಿಕೂರು ಉಸ್ತಾದರಿಗೆ ಶಿಷ್ಯ ವೃಂದದ ವತಿಯಿಂದ ಗೌರವಾರ್ಪಣೆ ನಡೆಯಲಿದೆ. ಎ.26ರಂದು ನಡೆಯುವ ಖತ್ಮುಲ್ ಖುರ್ ಆನ್ ಮತ್ತು ತಾಜುಲ್ ಉಲಮಾ ಅನುಸ್ಮರಣೆಗೆ ಜೈನುಲ್ ಉಲಮಾ ಮಾಣಿ ಉಸ್ತಾದ್ ನೇತೃತ್ವ ನೀಡಲಿದ್ದಾರೆ. ಎ.28ರಂದು ಬೆಳಿಗ್ಗೆ ಕೂಟು ಝಿಯಾರತ್ ಮೌಲಿದ್ ಪಾರಾಯಣ, ಮತ್ತು ಉರೂಸ್ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಟ್ಟತ್ತಿಲ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಡಿ.ಎ ಅಬ್ದುಲ್ ಹಮೀದ್ ಹಾಜಿ, ಉಪಾಧ್ಯಕ್ಷ ಕೆ.ಪಿ ಅಬ್ದುಲ್ ಖಾದರ್ ಟಿಫ್‍ಟಾಫ್, ಕೆ ಅಬ್ದುಲ್ ಖಾದರ್ ಟೆಲಿಫೋನ್, ಮಾಜಿ ಅಧ್ಯಕ್ಷ ಎ.ಸಿ ಮೊಯಿದ್ದೀನ್ ಕುಂಞ ಸಾಲೆತ್ತೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here