ವೈದ್ಯಕೀಯ ಪದವಿಯಲ್ಲಿ ರಾಜ್ಯಕ್ಕೆ ಟಾಪರ್ ಆದ ಸಂಸ್ಥೆಯ ವಿದ್ಯಾರ್ಥಿನಿಗೆ ಡಾ. ಹಾಜಿ ಯು.ಕೆ. ಮೋನು’ ಪ್ರಶಸ್ತಿ ಪ್ರದಾನ
ಶಿಕ್ಷಣದ ಮೂಲಕ ಬಡತನ ನೀಗಿಸುವ ಕೆಲಸವು ಕಣಚೂರು ಶಿಕ್ಷಣ ಸಂಸ್ಥೆಯಿಂದ ಆಗುತ್ತಿದೆ: ಹೆಚ್.ಎಸ್.ಬಲ್ಲಾಳ್
ಅಧ್ಯಕ್ಷರ ಪರಿಶ್ರಮದಿಂದ ಸಂಸ್ಥೆಯ ಹೆಸರು ಇನ್ನಷ್ಟು ಬೆಳೆಯಲಿ: ಯು.ಟಿ.ಇಫ್ತಿಕಾರ್ ಆಲಿ
ದೇಶ, ಭಾಷೆ, ಸಂಸ್ಕೃತಿಯನ್ನು ಮರೆಯದೆ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಿ: ಯು.ಕೆ.ಕಣಚೂರು ಮೋನು
ವಿಟ್ಲ: ಶಿಕ್ಷಣದ ಮೂಲಕ ಬಡತನ ನೀಗಿಸುವ ಕೆಲಸವು ಕಣಚೂರು ಶಿಕ್ಷಣ ಸಂಸ್ಥೆಯಿಂದೆ ಆಗುತ್ತಿರುವುದು ಅಭಿನಂದನೀಯ. ಮಹಿಳೆಯರನ್ನು ಶಿಕ್ಷಿತರನ್ನಾಗಿಸುವುದು ಸಮಾಜವನ್ನು ಶಿಕ್ಷಿತವನ್ನಾಗಿಸಿದಂತೆ. ಅಂತರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಬಹುದೊಡ್ಡ ಮಾನ್ಯತೆಯನ್ನು ಪಡೆದುಕೊಂಡಿರುವ ಮಾಹೆ ಸ್ಥಾಪಕ ಟಿ.ಎಂ.ಪೈ ಹಾದಿಯಲ್ಲಿ ಕಣಚೂರು ಮೋನು ಅವರಿದ್ದಾರೆ ಎಂದು ಮಾಹೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಹೆಚ್.ಎಸ್.ಬಲ್ಲಾಳ್ ಹೇಳಿದರು.
![](https://puttur.suddinews.com/wp-content/uploads/2024/04/77460902-23ba-4cd3-b19f-7c03ccfa6bea.jpg)
ಅವರು ಎ.20ರಂದು ನಾಟೆಕಲ್ ಕಣಚೂರು ಶಿಕ್ಷಣ ಸಂಸ್ಥೆಗಳ ವಠಾರದಲ್ಲಿ ಜರಗಿದ ಕಣಚೂರು ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಇದರ ಮೂರನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವೀಧರರಿಗೆ ಪದವಿ ಪ್ರದಾನಗೈದು, ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
![](https://puttur.suddinews.com/wp-content/uploads/2024/04/95960e49-19af-4630-b781-0a6b446b8a96.jpg)
ವಿವಿಧ ಔಷಧೀಯ ಪದ್ಧತಿಗಳ ವೈದ್ಯರ ಅನುಪಾತ ಗಮನಿಸಿದಲ್ಲಿ ದ.ಕ ಜಿಲ್ಲೆಯಲ್ಲಿ 1,000 ಮಂದಿಗೆ ಒಬ್ಬ ವೈದ್ಯರಿದ್ದಾರೆ. ಆದರೆ ಮುಂಬರುವ ದಿನಗಳಲ್ಲಿ ಆಲೋಪತಿ ಪದ್ಧತಿಯಲ್ಲೇ ಅಂತಹ ಅನುಪಾತ ಸಾಧ್ಯವಾಗಲಿದೆ. ಹುಟ್ಟು ಮತ್ತು ಸಾವುಗಳ ನಡುವೆ ಇತರರಿಗೆ ಸಹಕಾರಿಯಾಗಿ ಬಾಳುವುದು ಜೀವನ. ಪದವಿ ಪಡೆದು . ವೈದ್ಯರಾದವರು ಹಣವೇ ಮುಖ್ಯವಲ್ಲ , ರೋಗಿಗಳ ಆರೈಕೆ ಪ್ರಮುಖ ಎಂಬುದನ್ನು ಗಮನದಲ್ಲಿಟ್ಟುಕೊಂಡು , ತಮ್ಮ ಪದವಿಗಾಗಿ ತ್ಯಾಗಮಾಡಿದ ಹೆತ್ತವರ ತ್ಯಾಗವನ್ನು ಮನದಲ್ಲಿಟ್ಟುಕೊಂಡು ಬದುಕಬೇಕು ಎಂದರು.
![](https://puttur.suddinews.com/wp-content/uploads/2024/04/5e6322a7-7cf5-4d57-9b6d-9c2e122af82f.jpg)
ರಾಜೀವ್ ಗಾಂಧಿಆರೋಗ್ಯ ವಿಜ್ಞಾನ ವಿ.ವಿ.ಯ ಸಿಂಡಿಕೇಟ್ ಸದಸ್ಯ ಯು.ಟಿ.ಇಫ್ತಿಕಾರ್ ಆಲಿ ಮಾತನಾಡಿ, ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ ಹೆತ್ತವರನ್ನು ಗೌರವಿಸಿರಿ. ಸಂಸ್ಥೆಯ ಎಲ್ಲರ ಪ್ರಯತ್ನದಿಂದ ರಾಜ್ಯಕ್ಕೆ ಮೊದಲ ಸ್ಥಾನದೊಂದಿಗೆ ವಿದ್ಯಾರ್ಥಿ ಪಡೆದುಕೊಂಡಿರುವುದು ಗಮನಾರ್ಹ. ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ರ್ಯಾಂಕ್ ಪಡೆದಿರುವುದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ. ಸಂಸ್ಥೆಯ ಅಧ್ಯಕ್ಷರ ಪರಿಶ್ರಮದಿಂದ ಸಂಸ್ಥೆಯ ಹೆಸರು ಇನ್ನಷ್ಟು ಬೆಳೆದು ನಿಲ್ಲಲಿ ಎಂದು ಹಾರೈಸಿದರು.
![](https://puttur.suddinews.com/wp-content/uploads/2024/04/17868e5a-2bb1-47d4-9f36-c72b1e0d2dbb.jpg)
ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕೆ.ಕಣಚೂರು ಮೋನುರವರು ಮಾತನಾಡಿ, ಕಷ್ಟಪಟ್ಟು ಬಹಳ ಪರಿಶ್ರಮ ನಡೆಸಿ ಉನ್ನತ ಶಿಕ್ಷಣಕ್ಕೆ ಹೆತ್ತವರು ತ್ಯಾಗ ಮಾಡಿದ್ದಾರೆ. ಜವಾಬ್ದಾರಿ ಹೆಚ್ಚಿದ್ದು, ದೇಶ, ಭಾಷೆ, ಸಂಸ್ಕೃತಿಯನ್ನು ಮರೆಯದೆ ಮಾನವೀಯತೆಯನ್ನು ಮೈಗೂಡಿಸಿಕೊಂಡು ಸೇವಾ ಕಾರ್ಯದಲ್ಲಿ ಭಾಗಿಯಾಗಿ. ವೈದ್ಯಕೀಯ ಶಿಕ್ಷಣ ಆರಂಭದ ಸಂದರ್ಭ ಹೇಳಿದ ಕಿವಿಮಾತುಗಳಿಗೆ ಪದವೀಧರರು ಗೌರವ ನೀಡಿ ಬೆಳೆದುನಿಂತಿದ್ದು, ಇಂದು ಅವರ ಉಜ್ವಲ ಭವಿಷ್ಯದ ಜೊತೆಗೆ ಸಂಸ್ಥೆಗೂ ಹೆಸರು ತಂದುಕೊಟ್ಟಿದ್ದಾರೆ ಎಂದರು.
![](https://puttur.suddinews.com/wp-content/uploads/2024/04/5862840f-c913-4d28-96f4-2bc0b9eeec58-1024x683.jpg)
ಸಂಸ್ಥೆಯ ನಿರ್ದೇಶಕಿ ಝೌಹರಾ ಮೋನು, ವೈದ್ಯಕೀಯ ಅಧೀಕ್ಷಕ ಡಾ. ಹರೀಶ್ ಶೆಟ್ಟಿ, ಡಾ. ವೆಂಕಟ್ ಪ್ರಭು, ಡಾ. ಮೊಹಮ್ಮದ್ ಇಸ್ಮಾಯಿಲ್, ಚೀಫ್ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ರೋಹನ್ ಮೋನಿಸ್ ಹಾಗೂ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.ಇನ್ಸಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸಯನ್ಸ್ ನ ಪ್ರಿನ್ಸಿಪಾಲ್ ಡಾ. ಶಮಿಮಾ, ಫಿಸಿಯೋಥೆರಪಿ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಮಹಮ್ಮದ್ ಸುಹೈಲ್, ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಮೊಲ್ಲಿ ಸಲ್ದಾನ ಪ್ರತಿಜ್ಞಾವಿಧಿಗೈದರು.
ಕಣಚೂರು ಎಜ್ಯುಕೇಶನ್ ಟ್ರಸ್ಟ್ ನಿರ್ದೇಶಕ ಡಾ. ಅಬ್ದುಲ್ ರಹ್ಮಾನ್ ಸ್ವಾಗತಿಸಿದರು. ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ನ ಡೀನ್ ಡಾ. ಯು.ಪಿ. ರತ್ನಾಕರ್ ವಂದಿಸಿದರು.
![](https://puttur.suddinews.com/wp-content/uploads/2024/04/07ca992a-c559-46bc-abef-f75feef9b49d-1024x682.jpg)
ಡಾ.ಮಧುರಾಗೆ ಡಾ. ಹಾಜಿ ಯು.ಕೆ. ಮೋನು’ ದತ್ತಿನಿಧಿ ಚಿನ್ನದ ಪದಕ:
ಬೆಂಗಳೂರಿನ ರಾಜೀವ್ ಗಾಂಧೀ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಅಧೀನದ ಐವತ್ತು ವೈದ್ಯಕೀಯ ಕಾಲೇಜುಗಳ ಪೈಕಿ 2018ರ ಬ್ಯಾಚಿನಲ್ಲಿ ಕಣಚೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಡಾ. ಮಧುರಾ ಕೆ.ಐ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಚಿನ್ನದ ಪದಕದೊಂದಿಗೆ ಸಾಧನೆ ಮಾಡಿದ್ದು ಅವರಿಗೆ ಡಾ. ಹಾಜಿ ಯು.ಕೆ. ಮೋನು’ ಪ್ರಶಸ್ತಿ ಹೆಸರಿನಲ್ಲಿ ಎಂಟು ಗ್ರಾಂ ತೂಕವುಳ್ಳ ನಿಜವಾದ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಇದರೊಂದಿಗೆ ಇತರ ರ್ಯಾಕ್ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
![](https://puttur.suddinews.com/wp-content/uploads/2024/04/ede2d965-0c4f-4fca-b7da-26716952f163.jpg)
ಇಂಜಿನಿಯರಿಂಗ್ ಪದವಿಗೆ ತೆರಳಿದ್ದ ನಾನು ವೈದ್ಯಕೀಯ ಪದವಿ ಪಡೆದೆ
ಇಂಜಿನಿಯರಿಂಗ್ ಪದವಿಗೆ ತೆರಳಿದ್ದ ನಾನು, ವೈದ್ಯಕೀಯ ಸೇವೆಯಲ್ಲಿ ಆಸಕ್ತಿ ವ್ಯಕ್ತಪಡಿಸಿ ಮರಳಿ ನೀಟ್ ಪೂರೈಸಿ ವೈದ್ಯಕೀಯ ಪದವಿ ಪಡೆದುಕೊಂಡಿದ್ದೇನೆ. ನನಗೆ ಸರಕಾರಿ ಕೋಟದಡಿಯಲ್ಲಿ ಕಣಚೂರು ಕಾಲೇಜಿನಲ್ಲಿ ಅವಕಾಶ ಸಿಕ್ಕಿತು. ಇಲ್ಲಿ ಕಲಿತ ಅನುಭವ ಅಪೂರ್ವವಾದುದು. ನನ್ನ ಸಾಧನೆಗೆ ಕಾರಣಕರ್ತರಾದ ನನ್ನ ಪೋಷಕರು ಹಾಗೂ ಕಣಚೂರು ಶಿಕ್ಷಣ ಸಂಸ್ಥೆಗೆ ಆಭಾರಿಯಾಗಿದ್ದಾನೆ.
ಡಾ| ಮಧುರಾ ಕೆ.ಐ
![](https://puttur.suddinews.com/wp-content/uploads/2024/04/b5e0e6f5-ef76-4938-8b6f-03f181087bb3.jpg)