ವಿಟ್ಲದಲ್ಲಿ ಯುವಕರಿಬ್ಬರ ಮೇಲಿನ ಹಲ್ಲೆಯಿಂದ ರೊಚ್ಚಿಗೆದ್ದವರ ಕೃತ್ಯ-ಕೋಮುದ್ವೇಷದಿಂದ ಕೊಲೆ: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

0

ಮಂಗಳೂರು:ವಿಟ್ಲದಲ್ಲಿ ಇಬ್ಬರು ಯುವಕರ ಮೇಲೆ ನಡೆದ ಹಲ್ಲೆಯಿಂದ ರೊಚ್ಚಿಗೆದ್ದು ಪ್ರತೀಕಾರವಾಗಿ ಕೋಮುದ್ವೇಷದಿಂದ ಕೊಲೆ ಮಾಡಿದ ನಾಲ್ವರು ಅಪರಾಧಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.


ಬಂಟ್ವಾಳ ತಾಲ್ಲೂಕು ಮಂಚಿ ಗ್ರಾಮದ ಮಂಚಿ ಬಾವ ಮನೆಯ ವಿಜೇತ್ ಕುಮಾರ್, ಮಂಗಳೂರು ತಾಲ್ಲೂಕು ಬಡಗ ಉಳಿಪ್ಪಾಡಿ ಗ್ರಾಮದ ಮಳಲಿ ಮಟ್ಟಿ ಮನೆಯ ಕಿರಣ್ ಪೂಜಾರಿ, ಮಂಗಳೂರು ತಾಲ್ಲೂಕು ತಿರುವೈಲು ಗ್ರಾಮದ ಅನೀಶ್ (ಧನು), ಬಂಟ್ವಾಳ ತಾಲ್ಲೂಕು ಮಂಚಿಗುತ್ತು ಮನೆಯ ಅಭಿ (ಅಭಿಜಿತ್) ಶಿಕ್ಷೆಗೊಳಗಾದವರು.2015ರ ಆಗಸ್ಟ್ 6ರಂದು ರಾತ್ರಿ ಆಟೊದಲ್ಲಿ ಹೋಗುತ್ತಿದ್ದ ಮೊಹಮ್ಮದ್ ಮುಸ್ತಾಫ ಮತ್ತು ನಾಸೀರ್ ಅಲಿಯಾಸ್ ಮೊಹ್ಮದ್ ನಾಸೀರ್ ಅವರ ಮೇಲೆ ಆರೋಪಿಗಳು ತಲವಾರಿನಿಂದ ಹಲ್ಲೆ ಮಾಡಿದ್ದರು.ತೀವ್ರ ಗಾಯಗೊಂಡಿದ್ದ ನಾಸೀರ್ ಅವರು ಮರುದಿನ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.


ಮೊಹಮ್ಮದ್ ಮುಸ್ತಾಫ ಅವರು ತಮ್ಮ ಮಾವನ ಹೆಂಡತಿಯನ್ನು ಹೆರಿಗೆಗಾಗಿ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ಬಂಟ್ವಾಳ ಆಸ್ಪತ್ರೆಗೆ ಬಿಟ್ಟು ರಾತ್ರಿ ವಾಪಸ್ ಬರುತ್ತಿದ್ದರು.ತಮ್ಮ ಪತ್ನಿಯ ಮನೆಗೆ ಹೋಗುವ ಸಲುವಾಗಿ ನಾಸೀರ್ ಅವರು ಮೆಲ್ಕಾರ್ ಬಳಿ ಈ ರಿಕ್ಷಾ ಹತ್ತಿದ್ದರು.ರಿಕ್ಷಾ ಮೆಲ್ಕಾರ್‌ನಿಂದ ಮುಡಿಪು ಕಡೆಗೆ ಹೋಗುತ್ತಿರುವುದನ್ನು ಗಮನಿಸಿದ ಆರೋಪಿಗಳು,ಬೈಕ್‌ನಲ್ಲಿ ಬೆನ್ನಟ್ಟಿ ರಿಕ್ಷಾದಲ್ಲಿದ್ದವರ ಮೇಲೆ ತಲವಾರಿನಿಂದ ದಾಳಿ ಮಾಡಿದ್ದರು.


ಹಿಂದಿನ ದಿನ ವಿಟ್ಲದಲ್ಲಿ ಇಬ್ಬರಿಗೆ ಹಲ್ಲೆ ನಡೆದಿತ್ತು:
ಈ ಘಟನೆಯ ಹಿಂದಿನ ದಿನ 2015ರ ಆಗಸ್ಟ್ 5ರಂದು ರಾತ್ರಿ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಆಲಬೆ ಎಂಬಲ್ಲಿ ವಿಜೇತ್ ಕುಮಾರ್ ಮತ್ತು ಅಭಿ ಎಂಬವರ ಮೇಲೆ ಮುಸ್ಲಿಂ ಸಮುದಾಯದ ಕೆಲ ಯುವಕರು ಹಲ್ಲೆ ಮಾಡಿದ್ದರು.ಇದರಿಂದಾಗಿ ರೊಚ್ಚಿಗೆದ್ದಿದ್ದ ಈ ಇಬ್ಬರು,ಇನ್ನಿಬ್ಬರು ಮಿತ್ರರನ್ನು ಕರೆಯಿಸಿಕೊಂಡು,ಪಾಣೆಮಂಗಳೂರು ಬಳಿ ಮುಸ್ಲಿಂ ಯುವಕನೊಬ್ಬನನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದರು.ಅದರಂತೆ ದಾರಿಯಲ್ಲಿ ಸಿಕ್ಕ ಇವರನ್ನು ಕೊಲೆ ಮಾಡಿದರು ಎಂದು, ಪ್ರಕರಣದ ವಿಚಾರಣೆ ನಡೆಸಿದ್ದ ಇನ್‌ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧಿಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್.ಅವರು ಅಪರಾಽಗಳಿಗೆ ಶಿಕ್ಷೆ ವಿಧಿಸಿ ಏ.30ರಂದು ತೀರ್ಪು ನೀಡಿದ್ದಾರೆ.ಸರ್ಕಾರದ ಪರವಾಗಿ ಶೇಖರ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ವಾದ ಮಂಡಿಸಿದ್ದರು.

ಅಪರಾಧಿಗಳಿಗೆ ಐಪಿಸಿ ಕಲಂ 302, ಸಹವಾಚಕ ಕಲಂ 120 (ಬಿ)ಯಡಿ ಜೀವಾವಧಿ ಶಿಕ್ಷೆ ಮತ್ತು ತಲಾ 25 ಸಾವಿರ ರೂ. ದಂಡ. ದಂಡ ಪಾವತಿಸಲು ವಿಫಲರಾದರೆ 1 ವರ್ಷ ಸಾದಾ ಸಜೆ. ಕಲಂ 307 ಮತ್ತು ಸಹವಾಚಕ ಕಲಂ 120(ಬಿ)ಯಡಿ 5 ವರ್ಷ ಕಠಿಣ ಸಜೆ ಮತ್ತು ತಲಾ 5 ಸಾವಿರ ರೂ. ದಂಡ. ದಂಡ ಪಾವತಿಸಲು ವಿಫಲನಾದರೆ 6 ತಿಂಗಳ ಸಾದಾ ಸಜೆ. ಕಲಂ 341 ಮತ್ತು ಸಹವಾಚಕ ಕಲಂ 120 (ಬಿ)ಯಡಿ 1 ತಿಂಗಳ ಸಾದಾ ಸಜೆ, ಕಲಂ 324, ಸಹವಾಚಕ ಕಲಂ 120 (ಬಿ)ಯಡಿ 1 ವರ್ಷ ಸಾದಾಸಜೆ ವಿಧಿಸಿ ತೀರ್ಪು ನೀಡಿದ್ದಾರೆ.ದಂಡದ ಮೊತ್ತ 1.20 ಲಕ್ಷ ರೂ.ವನ್ನು ಮೃತ ನಾಸಿರ್ ಅವರ ಪತ್ನಿಗೆ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತ ಪರಿಹಾರ ಯೋಜನೆಯಡಿ ಮೃತರ ಹೆಂಡತಿ ಮತ್ತು ಗಾಯಾಳು ಮುಸ್ತಾಫ ಅವರಿಗೆ ಪರಿಹಾರ ನೀಡಬೇಕು ಎಂದು ತೀರ್ಪಿನಲ್ಲಿ ನಿರ್ದೇಶನ ನೀಡಿದೆ.

LEAVE A REPLY

Please enter your comment!
Please enter your name here