![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಡಬ:ಪಂಜ ಮೆಸ್ಕಾಂ ಶಾಖಾ ವ್ಯಾಪ್ತಿಯ ಅಲೆಕ್ಕಾಡಿ ಸಮೀಪದ ಪಿಜಾವು ಪಾರ್ಲ ಎಂಬಲ್ಲಿ ವಿದ್ಯುತ್ ಕಂಬದಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಜೂ.17ರಂದು ನಡೆದಿದೆ.
ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಉರ್ಮಾಳ ಕೃಷ್ಣಪ್ಪ ಗೌಡರ ಮಗ ಪ್ರಕಾಶ್(29ವ.)ಮೃತಪಟ್ಟವರು.ಈ ಕುರಿತು ಅವರ ಸಹೋದರ ಸೀತಾರಾಮ ಗೌಡ ಅವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ.ತಾನು, ಅಣ್ಣ ಪುರಂದರ ಹಾಗೂ ತಮ್ಮ ಪ್ರಕಾಶ ಕಳೆದ ಮೂರು ವರ್ಷಗಳಿಂದ ಗುತ್ತಿಗೆದಾರ ಅಭಿಲಾಶ್ ಅವರೊಂದಿಗೆ ಕೆಲಸ ಮಾಡಿಕೊಂಡಿದ್ದು ಜೂ.17ರಂದು ಬೆಳಿಗ್ಗೆ 11.45ರ ಸುಮಾರಿಗೆ ದುರ್ಘಟನೆ ನಡೆದಿದೆ.
ಅಲೆಕ್ಕಾಡಿ ಪಾರ್ಲ ಎಂಬಲ್ಲಿ ನಾವು ಮೂವರು ಸಹೋದರರು ಇತರರೊಂದಿಗೆ 4 ವಿದ್ಯುತ್ ಕಂಬಗಳಲ್ಲಿ ಎಲ್ಟಿ ವಾಹಕ ಬದಲಾವಣೆ ಕೆಲಸ ಮಾಡಿಕೊಂಡಿದ್ದೆವು.ಈ ಪೈಕಿ ಪ್ರಕಾಶ್ 3ನೇ ಕಂಬದಲ್ಲಿ ಕೆಲಸ ಮಾಡಿಕೊಂಡಿದ್ದು ಕಂಬದಿಂದ 2 ಡಬಲ್ ಎಲ್ಟಿ ಸಿಂಗಲ್ ಫೆಸ್ ಲೈನ್ ಸುಮಾರು 25 ಮೀ.ರಸ್ತೆಯಿಂದ ಆ ಕಡೆ ಬದಿಯಿಂದ ಹೆಚ್ಟಿ ಲೈನ್ ಕೆಳಗಡೆ ಹಾದು ಹೋಗಿದ್ದು ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿರುವ ಸಮಯ ಪ್ರಕಾಶ್ ಏಕಾಏಕಿ ಕಿರುಚಾಡಿಕೊಂಡ.ಶಬ್ದಕೇಳಿ ನೋಡಿದಾಗ ಆತ ಕಂಬದಲ್ಲಿ ಸಿಕ್ಕಿ ಕೊಂಡಿರುವ ಸ್ಥಿತಿಯಲ್ಲಿದ್ದು ತಾನು ಹಾಗೂ ಇತರರು ಏಣಿ ಸಹಾಯದಿಂದ ಆತನಿದ್ದ ಕಂಬ ಏರಿ ಕೆಲಕ್ಕಿಳಿಸಿ ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಕೂಡಲೇ ಆಂಬುಲೆನ್ಸ್ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಪ್ರಯೋಜನವಾಗಲಿಲ್ಲ.ಮೃತ ಪ್ರಕಾಶ್ ವಿದ್ಯುತ್ ಕಂಬದಲ್ಲಿ ವಾಹಕ ಬದಲಾವಣೆ ಮಾಡುತ್ತಿರುವ ಸಮಯ ವಿದ್ಯುತ್ ಪ್ರವಹಿಸಿ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರುವ ಸಾಧ್ಯತೆ ಇದ್ದು ಆತನ ಮರಣದಲ್ಲಿ ಸಂಶಯವಿದೆ ಎಂದು ಮೃತರ ಸಹೋದರ ಸೀತಾರಾಮ ಎಂಬವರು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸರು ಯುಡಿಆರ್ 24/2024, ಕಲಂ 174(3) 4 ಸಿಆರ್ಪಿಸಿಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯುತ್ ಲೈನ್ ಆಫ್ ಆಗಿತ್ತು:
ಕಾಮಗಾರಿ ನಡೆಯುತ್ತಿದ್ದ ಸಂದರ್ಭ ವಿದ್ಯುತ್ ಆಫ್ ಆಗಿತ್ತು.ಆದರೂ ವಿದ್ಯುತ್ ಶಾಕ್ನಿಂದ ದುರ್ಘಟನೆ ಸಂಭವಿಸಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪಂಜ ಶಾಖಾ ಜೆಇ ತಿಳಿಸಿದ್ದಾರೆ.