![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಜೂನ್ 21ರಂದು ವಿಶ್ವಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಯೋಗ ಶಿಕ್ಷಕಿ ವಿದ್ಯಾ ಕೃಷ್ಣರಾಜ್ ರವರು ದೀಪೋಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುವುದರಿಂದ ದೇಹ ಮತ್ತು ಮನಸ್ಸು ಆರೋಗ್ಯಕರವಾಗಿರುತ್ತದೆ. ಉಲ್ಲಾಸ ಮತ್ತು ಏಕಾಗ್ರತೆಯಿಂದ ಕಲಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ರವರು ಯೋಗ ಧ್ಯಾನವು ಎಲ್ಲರೂ ಅನುಸರಿಸಲೇ ಬೇಕಾದ ಜೀವನ ಪದ್ಧತಿ. ಉದ್ವೇಗ, ಖಿನ್ನತೆ, ಹಿಂಸಾತ್ಮಕ ಮನೋಭಾವಗಳನ್ನು ಕಳಚಿಕೊಂಡು ಉತ್ತಮ ವ್ಯಕ್ತಿಗಳಾಗಿ, ಸಶಕ್ತರಾಗಿ ಬೆಳೆಯಲು ಇದು ಸಹಕಾರಿ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿ ಗಗನ್ ) ದಿನದ ಮಹತ್ವವನ್ನು ತಿಳಿಸಿದರು. ದೈಹಿಕ ಶಿಕ್ಷಕರಾದ ನವೀನ್ ಸ್ವಾಗತಿಸಿ, ಸಹಶಿಕ್ಷಕಿ ಕವಿತಾ ಅಡೂರು ವಂದಿಸಿದರು. ದೈಹಿಕ ಶಿಕ್ಷಕರಾದ ಪುಷ್ಪರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.
![](https://puttur.suddinews.com/wp-content/uploads/2024/06/IMG20240621104855.jpg)
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ತರಬೇತಿಯನ್ನು ನೀಡಲಾಯಿತು. ಶಾಲಾ ಸಹಶಿಕ್ಷಕಿ ಯೋಗಿತಾ ಪ್ರದೀಪ್ ಮತ್ತು ಅಕ್ಷರ ಕೆ ಸಿ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಮುಖ್ಯ ಅಭ್ಯಾಗತರಾದ ವಿದ್ಯಾ ಕೃಷ್ಣರಾಜ್ ರವರು ನಿರ್ದೇಶಿಸಿದರು. ದೈಹಿಕ ಶಿಕ್ಷಕಿ ಲೀಲಾವತಿ, ಸಹಶಿಕ್ಷಕಿ ಗೀತಾ ಆಚಾರ್ಯ ಸಹಕರಿಸಿದರು. ಜೊತೆಗೆ ವಿಶ್ವಯೋಗ ದಿನದ ಅಂಗವಾಗಿ ಪುತ್ತೂರು ಮಹಾಲಿಂಗೇಶ್ವರ ದೇಗುಲದಲ್ಲಿ ನಡೆದ ಯೋಗದಿನಾಚರಣೆಯಲ್ಲಿ ಸುದಾನ ಶಾಲಾ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಎಲ್ಲಾ ಕಾರ್ಯಕ್ರಮವನ್ನು ಶಕ್ತಿ ಸ್ಪೋಟ್ಸ್ ಕ್ಲಬ್ ಆಯೋಜಿಸಿತ್ತು.
![](https://puttur.suddinews.com/wp-content/uploads/2024/06/Yoga-In-Ground.jpg)