![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪ್ರತೀಯೊಬ್ಬರೂ ವೈದ್ಯರನ್ನು ಗೌರವಿಸಬೇಕಾಗಿದೆ-ಶಾಸಕ ಅಶೋಕ್ ರೈ
ಪುತ್ತೂರು: ವೈದ್ಯರೆಂದರೆ ಅವರನ್ನು ದೇವರಿಗೆ ಸಮಾನರಾಗಿ ಕಾಣುತ್ತಾರೆ, ಒಂದು ದೇಹಕ್ಕೆ ಜೀವ ಕೊಡುವ ಮತ್ತು ಜೀವ ಉಳಿಸುವ ಕೆಲಸವನ್ನು ಮಾಡುತ್ತಾರೆ. ಇಂಥಹ ವೈದ್ಯರನ್ನು ನಾವು ಪ್ರತೀಯೊಬ್ಬರೂ ಗೌರವಿಸುವ ಕಾರ್ಯ ಮಾಡಬೇಕಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
![](https://puttur.suddinews.com/wp-content/uploads/2024/07/08087a9c-a3c1-4e78-954c-653b4c992774.jpg)
ಅವರು ವೈದ್ಯ ದಿನಾಚರಣೆಯ ಪ್ರಯುಕ್ತ ಪುತ್ತೂರಿನ ಹೋಮಿಯೋಪತಿ ವೈದ್ಯರಾದ ಡಾ. ರಮೇಶ್ ಅವರನ್ನು ಅವರ ಕ್ಲಿನಿಕ್ ಗೆ ತೆರಳಿ ಸನ್ಮಾನಿಸಿ ಗೌರವಿಸಿದರು.
ಒಬ್ಬ ವೈದ್ಯ ಮಾಡಿದ ತಪ್ಪಿಗೆ ಇಡೀ ವೈದ್ಯ ಸಮೂಹವನ್ನೇ ದೂಷಿಸುವ ಕೆಲಸವನ್ನು ಯಾರೂ ಮಾಡಬಾರದು. ವೈದ್ಯರು ಕೂಡಾ ರೋಗಿಗೆ ಅತ್ಯಂತ ಹತ್ತಿರವಾಗಬೇಕು. ಒಬ್ಬ ಉತ್ತಮ ವೈದ್ಯನ ಬಳಿ ಬಂದರೆ ,ಅವರ ಬಳಿ ಮಾತನಾಡಿದಾಗಲೇ ಅರ್ಧ ರೋಗ ವಾಸಿಯಾಗುತ್ತದೆ ಎಂಬ ಮಾತಿನಂತೆ ರೋಗಿಗಳು ನೋವಿನಿಂದ ಏನೇ ಮಾತನಾಡಿದರೂ ಅದನ್ನು ತಾಳ್ಮೆಯಿಂದ ಕೇಳುವ ಮನಸ್ಸು ವೈದ್ಯರಲ್ಲಿರಬೇಕಾಗುತ್ತದೆ. ಇಂದು ಭಾರತದಾಧ್ಯಂತ ಡಾಕ್ಟರ್ಸ್ ಡೇ ಆಚರಣೆ ಮಾಡಲಾಗುತ್ತದೆ ಇದು ವೈದ್ಯ ಸಮೂಹಕ್ಕೆ ಭಾರತೀಯರು ಕಲ್ಪಿಸಿದ ಗೌರವದ ಸಂಕೇತವಾಗಿದೆ ಎಂದು ಹೇಳಿದರು.
ಹೆಚ್ಚು ಕಮ್ಮಿಯಾದರೆ ಗಲಾಟೆ ಮಾಡದಿರಿ: ಸುರೇಶ್ ಪುತ್ತೂರಾಯ
ವೈದ್ಯರೆಂದರೆ ಮನುಷ್ಯ ಎಂಬ ಜೀವಂತ ಯಂತ್ರವನ್ನು ದುರಸ್ಥಿ ಮಾಡುವವರು ಕೆಲವೊಂದು ಬಾರಿ ಸಣ್ಣಪುಟ್ಟ ಅನಾಹುತಗಳು ಸಂಭವಿಸಿದರೂ ರೋಗಿ ಕಡೆಯವರು ಗಲಾಟೆ ಮಾಡುತ್ತಾರೆ ಇದು ವೈದ್ಯರ ಮನೋಬಲವನ್ನು ಕುಗ್ಗಿಸುತ್ತದೆ ಯಾವುದೇ ಕಾರಣಕ್ಕೂ ಯಾರೂ ಸಂಘರ್ಷಕ್ಕೆ ಎಡೆ ಮಾಡಿಕೊಡಬಾರದು ಎಂದು ಡಾ.ಸುರೇಶ್ ಪುತ್ತೂರಾಯ ಮನವಿ ಮಾಡಿದರು. ಕೆಲವೊಂದು ರೋಗಗಳ ಬಗ್ಗೆ ರೋಗಿಗಳು ತಾತ್ಸಾರ ಮಾಡಬಹುದು ಆದರೆ ಅವರನ್ನು ಪರೀಕ್ಷೆ ಮಾಡಿದಾಗ ರೋಗ ಗಂಭೀರವಾಗಿರುತ್ತದೆ ಆಗ ರೋಗಿ ಕಡೆಯವರು ವೈದ್ಯರ ಮೇಲೆ ಸಂಶಯ ಪಡುವ ರೀತಿಯಲ್ಲಿ ವರ್ತಿಸುತ್ತಾರೆ ಇದು ಸರಿಯಲ್ಲ. ವ್ಯಕ್ತಿಯ ರೋಗ ಯಾವುದೆಂದು ತಿಳಿಸುವುದು ವೈದ್ಯರೇ ವಿನಾ ಅನ್ಯ ವ್ಯಕ್ತಿಗಳಲ್ಲ ಏನೇ ಬಂದರೂ ತಾಳ್ಮೆಯಿಂದ ವರ್ತಿಸಿದರೆ ಎಲ್ಲವೂ ಸಮಾಧಾನಕರವಾಗಿ ನಡೆಯುತ್ತದೆ ಎಂದು ಹೇಳಿದರು.
ಅಶೋಕ್ ರೈ ಅದೃಷ್ಟದಿಂದ ಶಾಸಕರಾಗಿದ್ದಲ್ಲ,ಅವರು ಶಾಸಕರಾಗಿದ್ದೆ ಪುತ್ತೂರಿನವರ ಅದೃಷ್ಟ
ಅಶೋಕ್ ರೈ ಯವರು ಅದೃಷ್ಟದಿಂದ ಶಾಸಕರಾಗಿದ್ದಾರೆ ಎಂದು ಕೆಲವರು ಹೇಳುತ್ತಾರೆ ಅವರು ಅದೃಷ್ಟದಿಂದ ಶಾಸಕರಾಗಿದ್ದಲ್ಲ ಅವರು ಶಾಸಕರಾಗಿದ್ದೇ ಪುತ್ತೂರಿನ ಜನತೆಯ ಅದೃಷ್ಟವಾಗಿದೆ ಎಂದು ಡಾ ಸುರೇಶ್ ಪುತ್ತೂರಾಯ ಹೇಳಿದರು.ಪುತ್ತೂರಿನಲ್ಲಿ ಅತ್ಯುತ್ತಮ ರೀತಿಯಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ.ಎಲ್ಲಾ ಕ್ಷೇತ್ರಗಳಲ್ಲಿಯೂ ಶಾಸಕರು ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ ಅವರು ಜನಮೆಚ್ಚಿದ ಶಾಸಕರಾಗಿ ಮೆರೆಯುತ್ತಿದ್ದಾರೆ ಅವರ ಮುಂದಿನ ರಾಜಕೀಯ ಉಜ್ವಲವಾಗಲಿ ಎಂದು ಹೇಳಿದರು.
ಸನ್ಮಾನ ಅಚ್ಚರಿ ಮೂಡಿಸಿದೆ: ರಮೇಶ್ ಭಟ್
ವೈದ್ಯರ ದಿನಾಚರಣೆಯಂದು ನನ್ನ ಕ್ಲಿನಿಕ್ ಗೆ ಬಂದು ನನ್ನನ್ನು ಸನ್ಮಾನ ಮಾಡಿದ್ದು ನನಗೆ ಅಚ್ಚರಿ ಮೂಡಿಸಿದೆ. ಶಾಸಕರಿಂದ ನನಗೆ ಗೌರವ ಸ್ವೀಕರಿಸಲು ಸಂತೋಷವಾಗುತ್ತಿದೆ.ಅಭಿವೃದ್ದಿ ವಿಚಾರದಲ್ಲಿ ಅತಿ ವೇಗದಿಂದ ಸಾಗುತ್ತಿರುವ ಶಾಸಕರು ಎಲ್ಲಾ ವಿಭಾಗದಲ್ಲಿಯೂ ಅಚ್ಚರಿಯ ಕೆಲಸವನ್ನು ಮಾಡುತ್ತಿದ್ದಾರೆ. ಇದೇ ವೇಗ ಮುಂದುವರೆದರೆ ಪುತ್ತೂರಿನಲ್ಲಿ ಹೆಚ್ಚಿನ ಅಭಿವೃದ್ದಿ ಕಾರ್ಯ ನಡೆಯಲಿದೆ. ವೈದ್ಯರ ದಿನಾಚರಣೆಯಂದು ವೈದ್ಯರಿಗೆ ಗೌರವ ಕೊಡುವ ಕೆಲಸ ದೇಶದೆಲ್ಲೆಡೆ ನಡೆಯುತ್ತಿದೆ ಇದು ಪ್ರಶಂಸನೀಯವಾಗಿದೆ ಎಂದು ಎಂದು ಸನ್ಮಾನಿತ ಡಾ.ರಮೇಶ್ ಭಟ್ ಹೇಳಿದರು.
ರೋಗಿಗಳು ಎಂದಿಗೂ ವೈದ್ಯರ ಮೇಲೆ ರೇಗಬಾರದು.ನಾವು ದೇವರಲ್ಲ ,ಜೀವ ಉಳಿಸುವ ಕೆಲಸ ಮಾಡಬಹುದೇ ವಿನ ಜೀವ ಕೊಡುವ ಕೆಲಸ ಮಾಡಲು ಸಾಧ್ಯವಿಲ್ಲ. ರೋಗಿಗಳ ಸಂಬಂಧಿಕರು ಸಂಯಮದಿಂದ ವರ್ತಿಸುವ ಪೃವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಬನ್ನೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಉದ್ಯಮಿ ಜಗನ್ನಾಥ್, ಸುಜಾತಾ ರಮೇಶ್ ಭಟ್, ಹರಿಣಾಕ್ಷಿ ಉಪಸ್ಥಿತರಿದ್ದರು.
ಜಯಂತ್ ನಡುಬೈಲು ಸ್ವಾಗತಿಸಿದರು. ರವೀಂದ್ರ ಪೂಜಾರಿ ಸಂಪ್ಯ ವಂದಿಸಿದರು. ಸಿಬಂದಿಗಳಾದ ಸರಸ್ವತಿ, ಚೇತನ,ಸುರೇಖಾ ಕಾರ್ಯಕ್ರಮ ನಿರೂಪಿಸಿದರು.