ಉಪ್ಪಿನಂಗಡಿ: ಸ್ವರಕ್ಷಣೆಯು ಪ್ರತಿಯೊಬ್ಬ ವ್ಯಕ್ತಿಯ ಸಾಮಾನ್ಯ ಪ್ರಜ್ಞೆಯಾಗಿದ್ದು ವಿದ್ಯಾರ್ಥಿಗಳು ಸಂಬಂಧಿಕರ ಮತ್ತು ಅಪರಿಚಿತ ವ್ಯಕ್ತಿಗಳ ದುವರ್ತನೆ ಬಗ್ಗೆ ಜಾಗರೂಕತೆ ವಹಿಸಬೇಕು. ಮೊಬೈಲ್ ಬಳಕೆಯಲ್ಲಿ ಅಪರಿಚಿತ ವ್ಯಕ್ತಿಗಳ ಸಂದೇಶಗಳು ಬಂದರೆ ಪೋಷಕರಿಗೆ ತಿಳಿಸಬೇಕೆಂದು ಉಪ್ಪಿನಂಗಡಿ ಪೊಲೀಸ್ ಠಾಣೆಯ ಎಎಸ್ಐ ಕವಿತಾ ಹೇಳಿದರು.
![](https://puttur.suddinews.com/wp-content/uploads/2024/07/periyadka.jpg)
ಅವರು ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಪೋಕ್ಸೋ ಮತ್ತು ಸೈಬರ್ ಕ್ರೈಂ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು. ಬೀಟ್ ಪೊಲೀಸ್ ಸಿಬ್ಬಂದಿ ನವೀನ್ ಅವರು ಮೊಬೈಲ್ನಲ್ಲಿ ಬರುವ ಕರೆಗಳಿಗೆ ಆಕರ್ಷಣೆಗೊಂಡು ಪಿನ್ ನಂಬರ್ ಹಾಗೂ ದಾಖಲೆಗಳನ್ನು ಹೇಳಬೇಡಿ. ನಿಮ್ಮನ್ನು ಮೋಸಗೊಳಿಸುವ ಜಾಲವು ಹಲವು ವಿಧಾನಗಳಲ್ಲಿ ಇರುತ್ತದೆ ಎಂದು ಹೇಳಿದರು. ತಂಬಾಕು ಸೇವನೆ ಜೀವಕ್ಕೆ ಅಪಾಯಕಾರಿಯಾಗಿರುತ್ತದೆ. ಆದ್ದರಿಂದ ಮಾದಕ ವಸ್ತುಗಳಿಂದ ದೂರವಿರಿ. ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಕಡ್ಡಾಯವಾಗಿದ್ದು, ಲೈಸನ್ಸ್ ಇಲ್ಲದೆ ವಾಹನ ಚಲಾಯಿಸಬೇಡಿ ಎಂದು ಹೆಳಿದರು. ಸಂಸ್ಥೆಯ ಪರಿವೀಕ್ಷಕರಾದ ಬಾಲಕೃಷ್ಣ ಬಿ.ಟಿ. ಅವರು ವಿದ್ಯಾರ್ಥಿಗಳು ಯಾವುದೇ ಸಮಸ್ಯೆ ಬಂದಾಗ ಪೋಷಕರಿಗೆ ಅಥವಾ ಶಿಕ್ಷಕರಿಗೆ ತಿಳಿಸುವುದು ಅತೀ ಅಗತ್ಯವಾಗಿದ್ದು ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಸಮಯೋಚಿತವಾಗಿ ವರ್ತಿಸುವುದು ಅಗತ್ಯ ಎಂದು ಹೇಳಿದರು. ಶಾಲಾ ಮುಖ್ಯೋಪಾಧ್ಯಾಯನಿ ಲಕ್ಷ್ಮಿ ಪಿ. ಅವರು ಮಾತನಾಡಿ, ವ್ಯಕ್ತಿಯು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಸಮಸ್ಯೆಗಳನ್ನು ಯಾವುದೇ ಅಳುಕಿಲ್ಲದೆ ಸಂಬಂಧಪಟ್ಟವರಿಗೆ ತಿಳಿಸಬೇಕೆಂದು ಸಲಹೆ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ಮೋಹನ ಹೆಚ್ ಸ್ವಾಗತಿಸಿ, ವಿಜ್ಞಾನ ಶಿಕ್ಷಕಿ ಸವಿತಾ ಪಿ.ಸಿ ವಂದಿಸಿದರು. ಗಣಿತ ಶಿಕ್ಷಕಿ ಶಕುಂತಲಾ ಕೆ.ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ರಜನಿ ಹೆಚ್., ಭವ್ಯ ವೈ ಸಹಕರಿಸಿದರು.