ರೋಟರಿ ಪುತ್ತೂರು ಸ್ವರ್ಣದಿಂದ ಪತ್ರಿಕಾ ದಿನಾಚರಣೆ – ಪತ್ರಕರ್ತ ಸಂತೋಷ್ ಮೊಟ್ಟೆತ್ತಡ್ಕರವರಿಗೆ ಸನ್ಮಾನ

0

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ವತಿಯಿಂದ ಪತ್ರಿಕಾ ದಿನಾಚರಣೆಯನ್ನು ಜು.4ರಂದು ಸಂಜೆ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿತು.

ರೋಟರಿ ಸ್ವರ್ಣದ ಜಿಎಸ್‌ಆರ್ ಚಿದಾನಂದ ಬೈಲಾಡಿರವರು ಮಾತನಾಡಿ, ಅಂತರ್ರಾಷ್ಟ್ರೀಯ ರೋಟರಿಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರಿನ ಸೇವಾ ಸಂಘವೆನಿಸಿದ ರೋಟರಿ ಸಂಸ್ಥೆಯ ಬಹುತೇಕ ವರದಿಗಳನ್ನು ಸುದ್ದಿ ಪತ್ರಿಕೆಯಲ್ಲಿ ನಿರಂತರ ಪ್ರಕಟಿಸುವ ಮೂಲಕ ರೋಟರಿ ಸಂಸ್ಥೆಯ ಹೆಸರನ್ನು ಎತ್ತಿ ಹಿಡಿಯುವ ಕಾರ್ಯ ಪತ್ರಕರ್ತ ಸಂತೋಷ್ ಮೊಟ್ಟೆತ್ತಡ್ಕರವರು ಮಾಡಿರುತ್ತಾರೆ. ಪತ್ರಕರ್ತ ಸಂತೋಷ್‌ರವರ ಸೇವೆಯನ್ನು ಗುರುತಿಸಿ ಪತ್ರಿಕಾ ದಿನಾಚರಣೆಯ ಅಂಗವಾಗಿ ಅವರನ್ನು ಕ್ಲಬ್ ಸನ್ಮಾನಿಸಿರುವುದು ಶ್ಲಾಘನೀಯ. ಜೊತೆಗೆ ಮುಂದಿನ ದಿನಗಳಲ್ಲಿ ನಡೆಯುವ ಕ್ಲಬ್‌ನ ಪದ ಪ್ರದಾನ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು, ಸಮಯದ ಪರಿಪಾಲನೆ ಮಾಡಬೇಕು. ಅತಿಥಿಗಳ ಸತ್ಕಾರ ಸದಸ್ಯರು ಮಾಡುವಂತಾಗಬೇಕು. ಎಲ್ಲಾ ಸದಸ್ಯರು ಕಾರ್ಯಕ್ರಮದ ಮುಂಚಿತವಾಗಿ ಹಾಜರಿದ್ದು ಯಶಸ್ವಿಯಾಗಿಸಬೇಕು ಎಂದರು.
ಕ್ಲಬ್ ಮಾಜಿ ಅಧ್ಯಕ್ಷ ಸುರೇಶ್ ಎಂ.ರವರು ಮಾತನಾಡಿ, ರೋಟರಿ ಸ್ವರ್ಣವು ಇದೀಗ ದಶಮಾನೋತ್ಸವದ ಸಂಭ್ರಮವನ್ನು ಕಾಣುತ್ತಿದ್ದು, ನೂತನ ಅಧ್ಯಕ್ಷ ಸುರೇಶ್ ಪಿ.ರವರ ತಂಡವು ಪದ ಪ್ರದಾನದ ಸಿದ್ಧತೆಯಲ್ಲಿದೆ. ಪದ ಪ್ರದಾನ ಕಾರ್ಯಕ್ರಮವು ನಿಗದಿತ ಅವಧಿಯಲ್ಲಿ ಮುಗಿಸುವಂತೆ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸದಸ್ಯರಲ್ಲಿ ಮನವಿ ಮಾಡಕೊಂಡರಲ್ಲದೆ ನಮ್ಮೊಂದಿಗೆ ಸದಾ ಸಹಕರಿಸುತ್ತಿರುವ ಹಾಗೂ ಸನ್ಮಾನ ಸ್ವೀಕರಿಸಿದ ಸುದ್ದಿ ಪತ್ರಿಕಾ ವರದಿಗಾರರಾದ ಸಂತೋಷ್ ಮೊಟ್ಟೆತ್ತಡ್ಕರವರ ಮುಂದಿನ ಪತ್ರಿಕಾ ಪಯಣಕ್ಕೆ ಶುಭ ಹಾರೈಸಿದರು.
ನಿಕಟಪೂರ್ವ ಅಧ್ಯಕ್ಷ ಸುಂದರ್ ರೈ ಬಲ್ಕಾಡಿ, ವಲಯ ಸೇನಾನಿ ವೆಂಕಟ್ರಮಣ ಗೌಡ ಕಳುವಾಜೆರವರು ಪದ ಪ್ರದಾನ ಕಾರ್ಯಕ್ರಮದಲ್ಲಿ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ತಮ್ಮಿಂದಾದ ಕೊಡುಗೆಯನ್ನು ನೀಡುವವರಾಗಿ ಎಂದು ಹೇಳಿ ಸನ್ಮಾನ ಸ್ವೀಕರಿಸಿದ ಪತ್ರಕರ್ತ ಸಂತೋಷ್ ಮೊಟ್ಟೆತ್ತಡ್ಕರವರಿಗೆ ಅಭಿನಂದನೆ ಸಲ್ಲಿಸಿದರು.

ಜು.4ರಂದು 50ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಕ್ಲಬ್ ಉಪಾಧ್ಯಕ್ಷ ಪ್ರವೀಣ್ ರೈ ಸಾಂತ್ಯರವರು ಸಿಹಿಯ ಪ್ರತೀಕವಾದ ಕೇಕ್ ಕತ್ತರಿಸುವ ಮೂಲಕ ಸಿಹಿಯನ್ನು ಹಂಚಿ ಹುಟ್ಟು ಹಬ್ಬವನ್ನು ಆಚರಿಸಿದರು. ನೂತನ ಅಧ್ಯಕ್ಷ ಸುರೇಶ್ ಪಿ.ರವರು ಸ್ವಾಗತಿಸಿ, ಮುಂದಿನ ದಿನಗಳಲ್ಲಿ ನಡೆಯುವ ಪದ ಪ್ರದಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸದಸ್ಯರಿಗೆ ಕರೆ ನೀಡಿದರು. ಅಶೋಕ್ ಆಚಾರ್ಯ ಪ್ರಾರ್ಥಿಸಿದರು. ನೂತನ ಕಾರ್ಯದರ್ಶಿ ಸೆನೋರಿಟಾ ಆನಂದ್ ವರದಿ ಮಂಡಿಸಿ, ವಂದಿಸಿದರು. ಮಾಜಿ ಅಧ್ಯಕ್ಷರಾದ ಮಹಾಬಲ ಗೌಡ, ಭಾಸ್ಕರ ಕೋಡಿಂಬಾಳ ಸಹಿತ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

ಪತ್ರಕರ್ತ ಸಂತೋಷ್ ಮೊಟ್ಟೆತ್ತಡ್ಕರವರಿಗೆ ಸನ್ಮಾನ
ಪತ್ರಿಕೋದ್ಯಮದಲ್ಲಿ ಸುಮಾರು 15 ವರ್ಷಗಳ ಅನುಭವವಿರುವ ಪತ್ರಕರ್ತ, ಪುತ್ತೂರು ತಾಲೂಕು ಜರ್ನಲಿಸ್ಟ್ ಯೂನಿಯನ್ ಇದರ ಪ್ರಧಾನ ಕಾರ್ಯದರ್ಶಿ, ಸುದ್ದಿ ಬಿಡುಗಡೆಯ ಸಂತೋಷ್ ಮೊಟ್ಟೆತ್ತಡ್ಕ ಇವರುಗಳ ಸೇವೆಯನ್ನು ಗುರುತಿಸಿ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಸಂತೋಷ್ ಮೊಟ್ಟೆತ್ತಡ್ಕರವರು, ಸುಮಾರು 15 ವರ್ಷ ಬೆಳಗ್ಗಿನ ಜಾವ ಸೈಕಲ್ ತುಳಿದು ಮನೆಮನೆಗೆ ದಿನಪತ್ರಿಕೆ ವಿತರಣೆ, ರಾತ್ರಿ ಹೊತ್ತು ತಂದೆಯ ಆಟೋ ರಿಕ್ಷಾ ಚಾಲನೆ, ಹಗಲು ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ದುಡಿಯುತ್ತಿದ್ದ ಸಂದರ್ಭದಲ್ಲಿ ಸುದ್ದಿ ಪತ್ರಿಕೆಯ ಸಂಪಾದಕರಾದ ಡಾ.ಯು.ಪಿ ಶಿವಾನಂದರು ನನ್ನನ್ನು ಗುರುತಿಸಿ, ಕ್ರೈಸ್ತ ಸಮುದಾಯದಲ್ಲಿ ತಾಲೂಕಿನಲ್ಲಿ ಪತ್ರಕರ್ತರಿಲ್ಲದ ಕಾರಣ ಪತ್ರಕರ್ತನಾಗಿ ದುಡಿಯಲು ಪ್ರೇರೇಪಣೆ ಮಾಡಿದರ ಫಲವಾಗಿ ಇಂದು ನಾನು ಎಲ್ಲರ ಸಹಕಾರದೊಂದಿಗೆ ಪತ್ರಕರ್ತನಾಗಿ ಸೇವೆ ಮಾಡಲು ಸಾಧ್ಯವಾಯಿತು ಮಾತ್ರವಲ್ಲ ಈ ಕ್ಷೇತ್ರದಲ್ಲಿ ನನಗೆ ಆತ್ಮತೃಪ್ತಿಯೂ ಇದೆ. ನನ್ನನ್ನು ಗುರುತಿಸಿ ಸನ್ಮಾನಿಸಿದ ರೋಟರಿ ಸ್ವರ್ಣ ಕ್ಲಬ್‌ಗೆ ಕೃತಜ್ಞತೆಗಳು ಎಂದರು.

LEAVE A REPLY

Please enter your comment!
Please enter your name here