ಉಪ್ಪಿನಂಗಡಿ: ತಗ್ಗಿದ ನೆರೆ- ಶಾಂತವಾದ ಜೀವನದಿಗಳು

0

ಉಪ್ಪಿನಂಗಡಿ: ಅಪಾಯದ ಮಟ್ಟ ಮೀರಿ ಹರಿದು ನೆರೆಯನ್ನು ತಂದೊಡ್ಡಿದ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ- ಕುಮಾರಧಾರ ನದಿಗಳು ಬುಧವಾರ ನಸುಕಿನ ಜಾವ 2 ಗಂಟೆಯ ಬಳಿಕ ಶಾಂತವಾಗಿದ್ದು, ಮುಂಜಾನೆ 4ರ ವೇಳೆಗೆ ಎರಡೂ ನದಿಯ ನೀರಿನ ಹರಿವಿನ ಮಟ್ಟ ಕುಸಿದಿದೆ.


ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯವನ್ನು ಸುತ್ತುವರಿದು ಸಂಗಮವಾದ ನದಿಗಳು ಮತ್ತೆ ರಥಬೀದಿಯಲ್ಲಿ ಗಣಪತಿ ದೇವಾಲಯದ ಬಳಿಯವರೆಗೆ ಹಾಗೂ ಇಂದ್ರಪ್ರಸ್ಥ ಶಾಲೆ ಬಳಿಯ ರಸ್ತೆಯಲ್ಲಿ ಯೂನಿಯನ್ ಬ್ಯಾಂಕ್ ತನಕ ಹರಿದು ಬಂದಿತ್ತು. ಇದಲ್ಲದೇ, ಮಠ, ಹಳೆಗೇಟು, ಪಂಜಳ, ನಟ್ಟಿಬೈಲು ಮುಂತಾದ ಪ್ರದೇಶದಲ್ಲಿಯೂ ನೆರೆ ಬಂದು ಹಲವು ಮನೆಗಳು ಜಲಾವೃತಗೊಂಡಿದ್ದವು.

ಆದರೆ ಮುಂಜಾನೆಯಾಗುವಾಗ ನದಿಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ತಗ್ಗಿದ್ದು, ದೇವಾಲಯದ ಸ್ನಾನಘಟ್ಟದ ಬಳಿ ನದಿಗಿಳಿಯಲು ಇರುವ 36 ಮೆಟ್ಟಿಲುಗಳಲ್ಲಿ 10 ಮೆಟ್ಟಿಲುಗಳು ಕಾಣುತ್ತಿವೆ. ಈ ನದಿಗಳು 28.05 ಮೀ. ಎತ್ತರದಲ್ಲಿ ಹರಿಯುತ್ತಿವೆ. ಇಲ್ಲಿ ಅಪಾಯದ ಮಟ್ಟ 31.05 ಆಗಿದೆ.


ತುಂಬಿದ ಕೆಸರು,ಭಕ್ತಾದಿಗಳಿಂದ ಸ್ವಚ್ಛತೆ:
ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಆವರಣದಲ್ಲಿ ನೆರೆ ಬಂದು ಇಳಿದ ಬಳಿಕ ಕೆಸರಿನ ರಾಶಿ ತುಂಬಿಕೊಂಡಿದ್ದು, ದೇವಾಲಯದ ವ್ಯವಸ್ಥಾಪನಾ ಸಮಿತಿ, ಸಿಬ್ಬಂದಿ ವರ್ಗ ಹಾಗೂ ಭಕ್ತಾದಿಗಳು ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿದ್ದಾರೆ.

LEAVE A REPLY

Please enter your comment!
Please enter your name here