ಕುಂತೂರು: ನಿವೃತ್ತ ಶಿಕ್ಷಕಿ ಭವಾನಿಯವರಿಗೆ ಬೀಳ್ಕೊಡುಗೆ,ಸನ್ಮಾನ

0

ಕಡಬ: ವಿವಿಧ ಶಾಲೆಗಳಲ್ಲಿ ಸುಮಾರು 29 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕುಂತೂರು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿಸುತ್ತಿದ್ದು ಜು.31ರಂದು ವಯೋ ನಿವೃತ್ತಿಯಾದ ಭವಾನಿ ವೈ ಇವರಿಗೆ ಕುಂತೂರು ಶಾಲಾ ಎಸ್‌ಡಿಎಂಸಿ, ಪೋಷಕ ವೃಂದ, ಶಿಕ್ಷಕ ವೃಂದ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಆ.1ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಹರೀಶ ಬಾಣಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆದ್ದೊಟ್ಟೆ ಅವರು ಕಾರ್ಯಕ್ರಮ ಉದ್ಘಾಟಿಸಿ ನಿವೃತ್ತ ಶಿಕ್ಷಕರಿಗೆ ಶುಭಹಾರೈಸಿದರು. ಅತಿಥಿಯಾಗಿದ್ದ ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಅವರು ಮಾತನಾಡಿ, ನಿವೃತ್ತ ಶಿಕ್ಷಕಿ ಭವಾನಿಯವರು ಪ್ರಾಮಾಣಿಕ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿರುತ್ತಾರೆ. ನಿವೃತ್ತಿ ಎಂಬುದು ಸರಕಾರಿ ಉದ್ಯೋಗದಲ್ಲಿ ಅನಿವಾರ್ಯವಾದರೂ ಅವರ ಸೇವೆ ಇನ್ನು ಮುಂದೆಯೂ ಸಮಾಜಕ್ಕೆ ಸಿಗುವಂತಾಗಲಿ ಎಂದು ಹೇಳಿ ಶುಭಹಾರೈಸಿದರು. ಪ್ರಾಥಮಿಕ ಶಾಲಾ ಮುಖ್ಯಗುರುಗಳ ಸಂಘದ ದ.ಕ.ಜಿಲ್ಲಾಧ್ಯಕ್ಷ ನಿಂಗರಾಜು, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಕಡಬ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲರವರು ಸಂದರ್ಭೋಚಿತವಾಗಿ ಮಾತನಾಡಿ ನಿವೃತ್ತ ಶಿಕ್ಷಕಿಗೆ ಶುಭಹಾರೈಸಿದರು.

ಸನ್ಮಾನ:
ನಿವೃತ್ತರಾದ ಶಿಕ್ಷಕಿ ಭವಾನಿ ಅವರನ್ನು ಶಾಲಾ ಎಸ್‌ಡಿಎಂಸಿ, ಶಿಕ್ಷಕವೃಂದ, ಪೋಷಕರು ಶಾಲುಹೊದಿಸಿ, ಹಣ್ಣಹಂಪಲು, ನೆನೆಪಿನ ಕಾಣಿಕೆ ನೀಡಿ ಗೌರವಿಸಿ ಸನ್ಮಾನಿಸಿದರು. ನಿವೃತ್ತ ಮುಖ್ಯಶಿಕ್ಷಕಿ ಶಾರದಾಕೇಶವ್, ಹರಿಣಾಕ್ಷಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಪ್ರೌಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ನಿಂಗರಾಜು, ಹಳೆವಿದ್ಯಾರ್ಥಿಗಳು, ಶಿಕ್ಷಕಿಯರಾದ ತೀರ್ಥಾವತಿ, ಚೈತ್ರರವರು ನಿವೃತ್ತ ಶಿಕ್ಷಕಿ ಭವಾನಿಯವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಶಾಲಾ ಮಕ್ಕಳು ಶಿಕ್ಷಕಿಗೆ ಕಿರುಕಾಣಿಕೆ ನೀಡಿ ಆಶೀರ್ವಾದ ಪಡೆದುಕೊಂಡರು. ಶಾಲಾ ಅಕ್ಷರ ದಾಸೋಹ ಸಿಬ್ಬಂದಿಗಳು ಕಿರುಕಾಣಿಕೆ ನೀಡಿ ಗೌರವಿಸಿದರು.

ಕೊಡುಗೆ:
ನಿವೃತ್ತ ಶಿಕ್ಷಕಿ ಭವಾನಿಯವರು ಶಾಲಾ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಲು ಸ್ಮಾರ್ಟ್ ಟಿ.ವಿ.ಯೊಂದನ್ನು ಕೊಡುಗೆಯಾಗಿ ನೀಡಿದರು. ಈ ವೇಳೆ ಮಾತನಾಡಿದ ಭವಾನಿ ಅವರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಮಾಜಿ ಸಚಿವ ಎಸ್.ಅಂಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಅವರಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೇ ವಿವಿಧ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಹಕಾರ ನೀಡಿದ ಅಲ್ಲಿನ ಮುಖ್ಯಶಿಕ್ಷಕರಿಗೆ, ಶಿಕ್ಷಕ ಬಂಧುಗಳಿಗೆ, ವಿದ್ಯಾರ್ಥಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಕುಂತೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ರೈ, ಅಧ್ಯಕ್ಷ ಅಯೂಬ್, ಪೆರಾಬೆ ಗ್ರಾ.ಪಂ.ಸದಸ್ಯೆ ಮಮತಾ ಶೆಟ್ಟಿ ಅಂಬರಾಜೆ, ನಿವೃತ್ತ ಶಿಕ್ಷಕಿ ಭವಾನಿ ಅವರ ಪತಿ ಪ್ರೌಢಶಾಲಾ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್, ಪುತ್ರಿ ಉಜಿರೆ ಎಸ್‌ಡಿಎಂ ಆಸ್ಪತ್ರೆಯ ವೈದ್ಯೆ ಡಾ.ಪ್ರತ್ಯೂಷ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಂತೂರುಪದವು ಶಾಲಾ ಶಿಕ್ಷಕ ಕೇಶವ ಗೌಡ, ಶರವೂರು ಶಾಲೆಯ ಶಿಕ್ಷಕಿ ರೆಜಿನಮ್ಮಜೋಸೆಫ್, ಬೆಳ್ಳಾರೆ ಕೆಪಿಎಸ್ ಶಾಲೆಯ ಶಿಕ್ಷಕಿ ಕಮಲ, ತ್ರಿವೇಣಿ, ಶಾಲಾ ಪೋಷಕರು, ಮಕ್ಕಳು, ಎಸ್‌ಡಿಎಂಸಿ ಸದಸ್ಯರು, ಊರಿನ ಗಣ್ಯರು, ಹಿರಿಯ ವಿದ್ಯಾರ್ಥಿಗಳು, ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here