ಬಿಜೆಪಿ ಷಡ್ಯಂತರ ನಡೆಸಲು ರಾಜಭವನ ಬಳಸಿಕೊಂಡಿದ್ದಾರೆ – ಪ್ರದೀಪ್ ಕುಮಾರ್ ರೈ ಪಾಂಬಾರು ಆರೋಪ

0

ಪುತ್ತೂರು: ಸಧೃಡವಾಗಿ ಸುಭದ್ರವಾಗಿ ಇರುವ ಸಿದ್ದರಾಮಯ್ಯ ಸರ್ಕಾರವನ್ನು ತೆಗೆದು ಹಾಕಲು ಬಿಜೆಪಿ ಪಕ್ಷದವರು ರಾಜಭವನವನ್ನು ಬಳಸಿಕೊಂಡಿದ್ದಾರೆ ಎಂದು ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು ರಾಜ್ಯಪಾಲರ ನಡೆಯನ್ನು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಮೇಲೆ ಪ್ರಾಸಿಕ್ಯೂಶನ್ ನಡೆಸಲು ರಾಜ್ಯಪಾಲರು ಅನುಮತಿ ನೀಡಿದ್ದು ಸದರಿ ಅನುಮತಿ ಬಿಜೆಪಿ ಷಡ್ಯಂತರ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದ್ದು, ಇದು ಖಂಡನೀಯ ಎಂದು ಪಾಂಬಾರು ಟೀಕಿಸಿದ್ದಾರೆ.

2023 ರ ನವೆಂಬರ್ 21 ರಂದು ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರ ಸ್ವಾಮಿಯವರು 2007ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಬಾವಿಹಳ್ಳಿ ಗ್ರಾಮದಲ್ಲಿ 550, ಏಕರೆ ಭೂಮಿಯನ್ನು ಗಣಿಗಾರಿಕೆಗೆ ಅಕ್ರಮವಾಗಿ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ಪ್ರಾಸಿಕ್ಯೂಶನ್ ನಡೆಸಲು ಅನುಮತಿ ಕೋರಿ ಘನತೆವೆತ್ತ ರಾಜ್ಯಪಾಲರಿಗೆ ಸರ್ಕಾರಿ ಸಂಸ್ಥೆ ಪತ್ರ ಬರೆದಿದ್ದು, ಅದನ್ನು ಪರಿಗಣಿಸದ ರಾಜಭವನ ಸಿದ್ದರಾಮಯ್ಯ ವಿರುದ್ದ ಖಾಸಗಿ ಮತ್ತು ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಯೊಬ್ಬರು ನೀಡಿದ ಅರ್ಜಿಗೆ 24 ಗಂಟೆಗಳಲ್ಲಿಯೇ ಪ್ರತಿಕ್ರಿಯೆ ನೀಡಿರುವುದು ರಾಜಭವನದ ದುರ್ಬಳಕೆಯನ್ನು ಎತ್ತಿ ತೋರಿಸುತ್ತಿದೆ. ಇದೇ ರೀತಿ ಬಿಜೆಪಿ ಮುಖಂಡರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಮುಂತಾದವರ ಮೇಲೆ ಪ್ರಾಸಿಕ್ಯೂಶನ್ ಗೆ ಅ‌ನುಮತಿ ಕೋರಿರುವ ಪತ್ರಗಳಿಗೆ ಕೂಡ ರಾಜ್ಯಪಾಲರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರುವುದಿಲ್ಲ. ಇದು ರಾಜ್ಯಪಾಲರ ದ್ವಂದ್ವ ನಿಲುವನ್ನು ಪ್ರಕಟಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರಂಭದಲ್ಲಿ ಆಪರೇಷನ್ ಕಮಲಕ್ಕೆ ಪ್ರಯತ್ನ ಪಟ್ಟ ಬಿಜೆಪಿ ಅದು ಸಫಲವಾಗದಾಗ  ಕರ್ನಾಟಕ ಸರ್ಕಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರವರನ್ನು ಪರಸ್ಪರ ಬಣಗಳಾಗಿ ಒಡೆಯಲು ಪ್ರಯತ್ನಿಸಿದರು. ಅದೂ ವಿಫಲವಾದಾಗ ರಾಜಭವನವನ್ನು ದುರುಪಯೋಗ ಬಳಸಿಕೊಂಡಿದ್ದಾರೆ. ಸಿದ್ದರಾಮಯ್ಯ ನವರ ಪರ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಎಲ್ಲಾ ಸದಸ್ಯರು,ಕಾಂಗ್ರೆಸ್ ಶಾಸಕರು, ಕಾಂಗ್ರೆಸ್ ಹೈ ಕಮಾಂಡ್, ಕಾಂಗ್ರೆಸ್ ಕಾರ್ಯಕರ್ತರು ಹಾಗೂ  ರಾಜ್ಯದ ಜನತೆ ಇದ್ದು, ಬಿಜೆಪಿ ಕುತಂತ್ರ ಫಲಿಸುವುದಿಲ್ಲ ಹಾಗೂ ಮುಖ್ಯಮಂತ್ರಿಗಳ ರಾಜಿನಾಮೆ ಪ್ರಮೇಯವೇ ಇಲ್ಲಾ ಎಂದು ಪ್ರದೀಪ್ ಕುಮಾರ್ ರೈ ಪಾಂಬಾರು ಸ್ಪಷ್ಟನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here