ಇಚ್ಲಂಪಾಡಿ: 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ನೆಲ್ಯಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇಚ್ಲಂಪಾಡಿ ಮತ್ತು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಆಡಳಿತ ಸಮಿತಿ ನೇರ್ಲ ಇಚ್ಲಂಪಾಡಿ ಇವುಗಳ ಸಹಭಾಗಿತ್ವದಲ್ಲಿ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.7ರಂದು ಇಚ್ಲಂಪಾಡಿ ನೇರ್ಲ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ನಡೆಯಿತು.


ಸೆ.6ರಂದು ಸಂಜೆ ಶ್ರೀ ಗಣಪತಿ ದೇವರ ವಿಗ್ರಹ ತರಲಾಯಿತು. ಸೆ.7ರಂದು ಬೆಳಿಗ್ಗೆ 5.30ರಿಂದ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಗಣಹೋಮ ನಡೆದು ಬೆಳಿಗ್ಗೆ 7.32ಕ್ಕೆ ಕನ್ಯಾ ಲಗ್ನದ ಸುಮೂರ್ತದಲ್ಲಿ ಶ್ರೀ ಗಣಪತಿ ದೇವರ ಪ್ರತಿಷ್ಠೆ ನಡೆಯಿತು. ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಅರ್ಚಕ ಹರೀಶ್ ಭಟ್ ಕೋಡಿಂಬಾಳರವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.

ಧಾರ್ಮಿಕ ಸಭೆ:
ಬೆಳಿಗ್ಗೆ ನಡೆದ ಧಾರ್ಮಿಕ ಸಭೆಯಲ್ಲಿ ಯುವ ಅಧ್ಯಯನಕಾರ ದೇವಿಪ್ರಸಾದ್ ಪಿ.ಪೊಯ್ಯತ್ತಡ್ಡ ಧಾರ್ಮಿಕ ಉಪನ್ಯಾಸ ನೀಡಿ, ಗಣೇಶೋತ್ಸವದ ಮೂಲಕ ಧರ್ಮಪ್ರತಿಷ್ಠಾಪನೆ ಆಗಬೇಕು. ಭಗವದ್ಗೀತೆ ಶ್ಲೋಕ, ಭಜನೆಗಳಲ್ಲಿ ಮಕ್ಕಳನ್ನು ತೊಡಗಿಸಬೇಕೆಂದು ಹೇಳಿದರು. ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶುಭಾಕರ ಹೆಗ್ಗಡೆ ಶುಭಹಾರೈಸಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಪೂಜಾರಿ ಪೊಯ್ಯತ್ತಡ್ಡ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇ.ಧ.ಗ್ರಾ.ಯೋ.ಇಚ್ಲಂಪಾಡಿ ಒಕ್ಕೂಟದ ಅಧ್ಯಕ್ಷ ಚೆನ್ನಪ್ಪ ಗೌಡ ಕುಡಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ಮಾಜಿ ಸೈನಿಕರಾದ ಮಧುಕುಮಾರ್ ನಾಯರ್ ಮಾನಡ್ಕ, ಚಂದ್ರಶೇಖರ ಗೌಡ ಕೋಟಿಪಾಲು, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿಕುಮಾರ್, ಮೆಸ್ಕಾಂ ಪವರ್‌ಮ್ಯಾನ್‌ಗಳಾದ ಶರಣಪ್ಪ, ಸಂಜು ಅವರನ್ನು ಸನ್ಮಾನಿಸಲಾಯಿತು. ಅನ್ನಸಂತರ್ಪಣೆ ಪ್ರಾಯೋಜಕರನ್ನು ಶಾಲು ಹಾಕಿ ಗೌರವಿಸಲಾಯಿತು. ಇಚ್ಲಂಪಾಡಿ-ನೇರ್ಲ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ ಗೌರವಾಧ್ಯಕ್ಷ ಭಾಸ್ಕರ ಎಸ್.ಗೌಡ ಒಡ್ಯತ್ತಡ್ಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಅಕ್ಷಯ್ ನೇರ್ಲ ವಂದಿಸಿದರು. ಶ್ರೀನಿವಾಸ ಪೂಜಾರಿ, ಉದಯ ಕುಮಾರ್ ನಿರೂಪಿಸಿದರು. ಮಧ್ಯಾಹ್ನ ಶ್ರೀ ದೇವರ ಮಹಾಪೂಜೆ, ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ನೇರ್ಲ ಶಾಲಾ ಮಕ್ಕಳಿಂದ ಹಾಗೂ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಎಂ.ಎಫ್.ಸಿ.ಇಚ್ಲಂಪಾಡಿ ಇವರಿಂದ ನಾಸಿಕ್ ಬ್ಯಾಂಡ್ ನಡೆಯಿತು.


ಭವ್ಯ ಶೋಭಾಯಾತ್ರೆ:
ಸಂಜೆ ಶ್ರೀ ಮಹಾಗಣಪತಿ ದೇವರ ಭವ್ಯ ಶೋಭಾಯಾತ್ರೆ ನಡೆಯಿತು. ಇಚ್ಲಂಪಾಡಿ-ಬೀಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಇಚ್ಲಂಪಾಡಿ-ನೇರ್ಲ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ, ಇಚ್ಲಂಪಾಡಿ-ಬೀಡು ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಭಜನಾ ಮಂಡಳಿ, ಇಚ್ಲಂಪಾಡಿ ಕೆಡೆಂಬೇಲು ಶ್ರೀ ಮಂಜುಶ್ರೀ ಭಜನಾ ಮಂಡಳಿ, ಕುರಿಯಾಳಕೊಪ್ಪ ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ, ಇಚ್ಲಂಪಾಡಿ ಶಂಖದ್ವೀಪ ಶ್ರೀ ಗೌರಿಶಂಕರ ಮಹಿಳಾ ಭಜನಾ ಮಂಡಳಿ, ಇಚ್ಲಂಪಾಡಿ-ನೇರ್ಲ ಶ್ರೀ ಸಿದ್ಧಿವಿನಾಯಕ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here