ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳಿಗೆ  ಚಾಲನೆ ಮತ್ತು ಎರಡನೇ  ಘಟಕದ  ಉದ್ಘಾಟನೆ

0

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ  ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳಿಗೆ  ಚಾಲನೆ ಮತ್ತು  ಎರಡನೇ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಯಿತು .

ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ  ಶೇಷಪ್ಪ ಕೆ  ದೀಪ ಬೆಳಗಿಸಿ ಉದ್ಘಾಟಿಸಿದರು . ಅಧಿಕೃತವಾಗಿ 2 ನೇ  ಘಟಕಕ್ಕೆ ಚಾಲನೆ ಕೊಟ್ಟು ರಾಷ್ಟ್ರೀಯ ಸೇವಾ ಯೋಜನೆಯು  ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಹುದೊಡ್ಡ ಕಾರ್ಯಕರ್ತರನ್ನು ಹೊಂದಿರುವ ಯೋಜನೆ. ಈ ಯೋಜನೆಯಲ್ಲಿ ಸೇವಾ ಕಾರ್ಯಕರ್ತನಾಗಿ ಸದೃಢ ಹಾಗೂ ಸುಸ್ಥಿರ ರಾಷ್ಟ್ರ ನಿರ್ಮಾಣದ  ಕಾರ್ಯದಲ್ಲಿ ತೊಡಗಬೇಕು .ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಗ್ರಾಮದ ಜನತೆಯ ಅಂಕಿ ಅಂಶಗಳ ಮಾಹಿತಿ ಪಡೆದು ಸಮಾಜದಲ್ಲಿನ  ವೃದ್ಧಾಪ್ಯ, ಅಂಗವಿಕಲ, ವಿಧವೆಯರು ಮತ್ತು  ಅನೇಕ ರೀತಿಯಲ್ಲಿ  ಕಷ್ಟಗಳನ್ನು ಅನುಭವಿಸುವ ಜನರ ಅಗತ್ಯಗಳಿಗೆ  ಸ್ಪಂದಿಸುವ  ಕಾರ್ಯವನ್ನು  ಮಾಡಬೇಕು. ಸಮಾಜದಲ್ಲಿ  ಅನೇಕ  ಮಕ್ಕಳು  ಪ್ರಾಥಮಿಕ  ಶಿಕ್ಷಣದಲ್ಲೇ  ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಸನ್ನಿವೇಶಗಳನ್ನು ಕಾಣಬಹುದು ಅಂತಹ ಮಕ್ಕಳನ್ನು ಗುರುತಿಸಿ ಅವರ ಉನ್ನತ ವಿದ್ಯಾಭ್ಯಾಸ ಕ್ಕೆ ನೆರವಾಗಬೇಕು. ಪ್ರಸ್ತುತ ಮಕ್ಕಳು, ಯುವಕರು  ಮಾದಕ ಪದಾರ್ಥಗಳ ವ್ಯಸನಕ್ಕೆ ಬಲಿಯಾಗಿ ಮತ್ತು ಅನೇಕ ರೀತಿಯಲ್ಲಿ  ಸಮಾಜದ್ರೋಹ  ಚಟುವಟಿಕೆಗಳಲ್ಲಿ ತೊಡಗಿರುವ ಘಟನೆಗಳನ್ನು ಪ್ರತಿ ನಿತ್ಯ ಸಮೂಹ ಮಾಧ್ಯಮಗಳಲ್ಲಿ ಕಾಣಬಹುದು ಈ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿ ಅಭಿವೃದ್ಧಿ ಕಾಣಲು ನಾವು ಶ್ರಮಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲ್  ಮಾತನಾಡಿ  ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ, ಸೃಜನಶೀಲತೆಯನ್ನು ಬೆಳೆಸಿ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಲು ಪ್ರೇರಣೆ ನೀಡುತ್ತದೆ. ಕಲಿಕೆಯ ಜೊತೆಗೆ ಸೇವಾ ಮನೋಭಾವನೆ,  ರಾಷ್ಟ್ರ  ಪ್ರೇಮ ಬೆಳೆಸಿ ಯುವ ಶಕ್ತಿಯಾಗಿ ಬೆಳೆಯ ಬೇಕು ಎಂದರು.

ಪ್ರಾಂಶುಪಾಲ ಸಂಪತ್ ಕೆ ಪಕ್ಕಳ ತಮ್ಮ ಆಶಯ ನುಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ತಮ್ಮ ಅನುಭವವನ್ನು ಹಂಚಿಕೊಂಡು  ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ನೂತನ ಎರಡನೇ ಘಟಕ ಯೋಜನಾಧಿಕಾರಿಯಾಗಿ ವಾಣಿಜ್ಯ ವಿಭಾಗದ ಉಪನ್ಯಾಸಕಿ ಮೇಘ ಶ್ರೀ ಅವರು ಆಯ್ಕೆಗೊಂಡರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕಿಶೋರ್ ಕುಮಾರ್ ರೈ  ಪ್ರಾಸ್ತಾವಿಕವಾಗಿ ಮಾತನಾಡಿ ಹಮ್ಮಿಕೊಂಡ ಮತ್ತು  ಮುಂದಿನ ದಿನಗಳಲ್ಲಿ  ಹಮ್ಮಿಕೊಳ್ಳುವ  ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.    ರಾಷ್ಟ್ರೀಯ ಸೇವಾ ಯೋಜನಾ ಘಟಕ ನಾಯಕಿ ಕುಮಾರಿ ವರ್ಷಿಣಿ ಸ್ವಾಗತಿಸಿ , ನಾಯಕ  ರಾಕೇಶ್ ವಂದಿಸಿದರು. ಸ್ವಯಂಸೇವಕಿ ಕುಮಾರಿ ವಿಂದುಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here