ಪುತ್ತೂರಿನ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ನೇತೃತ್ವದಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಕುರಿತು ಶಿಕ್ಷಕರಿಗೆ ಮಾಹಿತಿ ಕಾರ್ಯಾಗಾರ

0

ಉಡುಪಿಯ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ವಿವೇಕ ನೈಪುಣ್ಯ

  • ಅಂಕಗಳಿಕೆ ಮಾತ್ರ ಯಶಸ್ಸನ್ನು ಅಳೆಯುವ ಮಾರ್ಗವಲ್ಲ : ಡಾ. ಅಶೋಕ್‌ ಕಾಮತ್‌

  • ಪುತ್ತೂರು: ಕೇವಲ ಅಂಕಗಳಿಕೆಯಿಂದ ಮಾತ್ರ ಯಶಸ್ಸನ್ನು ಅಳೆಯುವುದು ಸರಿಯಾದ ಮಾರ್ಗವಲ್ಲ. ಮಂಗ, ಆನೆ, ಮೊಲ, ಜಿರಾಫೆಗಳಿಗೆ ಮರ ಹತ್ತುವ ಸ್ಪರ್ಧೆಯನ್ನಿಟ್ಟು ಯಾರು ಜಾಣರು ಎಂದು ನಿರ್ಧರಿಸಿದಂತಾಗುವುದು. ವಿದ್ಯಾರ್ಥಿಗಳಲ್ಲಿ ಐಕ್ಯೂ ಜೊತೆಗೆ ಇಕ್ಯೂ ಬೆಳೆಸುವ ಶ್ರಮ ವಹಿಸಬೇಕು” ಎಂದು ಉಡುಪಿಯ ಡಯೆಟ್‌ ನ ಉಪಪ್ರಾಂಶುಪಾಲರಾದ ಡಾ. ಅಶೋಕ್‌ ಕಾಮತ್‌ ಹೇಳಿದರು. ಪುತ್ತೂರಿನ ವಿವೇಕಾನಂದ ಪದವಿಪೂರ್ವ ವಿದ್ಯಾಲಯಮತ್ತು ಉಡುಪಿಯ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಉಡುಪಿಯ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ “ವಿವೇಕ ನೈಪುಣ್ಯ” ಎಂಬ ಶೀರ್ಷಿಕೆಯೊಂದಿಗೆ ನಡೆದಮಕ್ಕಳ ಮಾನಸಿಕ ಆರೋಗ್ಯ ಕುರಿತು ಶಿಕ್ಷಕರಿಗೆ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಕಾರ್ಯಾಗಾರವು ಮುಂಬಯಿನ ಕಮಲ್‌ ಬಾಳಿಗಾ ಚಾರಿಟೇಬಲ್‌ ಟ್ರಸ್ಟ್‌ ಹಾಗೂ ಮಣಿಪಾಲದ ರೋಟರಿ ಕ್ಲಬ್‌ ಸಹಕಾರದೊಂದಿಗೆ ನಡೆಯಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿಯ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕರಾದ ಡಾ.ಪಿ.ವಿ.ಭಂಡಾರಿ ವಹಿಸಿದರು. ಮಣಿಪಾಲದ ರೋಟರಿ ಕ್ಲಬ್‌ ಅಧ್ಯಕ್ಷರಾದ ಸುಭಾಷ್‌ ಬಂಗೇರ, ಉಡುಪಿಯ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಖ್ಯಾತ ಲೇಖಕರು ಹಾಗೂ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ, ಪುತ್ತೂರಿನ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ ಮಹೇಶ್‌ ನಿಟಿಲಾಪುರ‌ ಹಾಗೂ ಪುತ್ತೂರಿನ ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್‌ ಶ್ಯಾನುಭೋಗ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭದ ನಂತರ ವಿವಿಧ ಅವಧಿಗಳಲ್ಲಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಕಾರ್ಯಾಗಾರ ನಡೆಯಿತು. ಮೊದಲ ಅವಧಿಯಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ವ್ಯಸನಿಗಳ ವರ್ತನೆಯ ಬಗ್ಗೆ ಆಸ್ಪತ್ರೆಯ ನಿರ್ದೇಶಕರಾದ ಡಾ. ಪಿ. ವಿ. ಭಂಡಾರಿ ಮಾಹಿತಿ ನೀಡಿದರು. ಎರಡನೇ ಅವಧಿಯಲ್ಲಿ ಮನೋವೈದ್ಯರಾದ ಡಾ. ಮನಸ್‌ ಇ. ಅರ್.‌ ಹದಿಹರೆಯದವರಲ್ಲಿ ಭಾವನಾತ್ಮಕ ಮತ್ತು ವರ್ತನೆಯ ಸಮಸ್ಯೆಗಳು ಎಂಬ ವಿಷಯದ ಕುರಿತು ಮಾತನಾಡಿದರು. ಮೂರನೇ ಅವಧಿಯಲ್ಲಿ ಮನೋವೈದ್ಯರಾದ ಡಾ.ದೀಪಕ್ ಮಲ್ಯ ಅವರು ಆತ್ಮಹತ್ಯೆ ಮತ್ತು ಅದರ ನಿಯಂತ್ರಣ ಎಂಬ ವಿಷಯದ ಬಗ್ಗೆ ಅವಧಿಯನ್ನು ಕೈಗೊಂಡರು. ನಾಲ್ಕನೇ ಅವಧಿಯಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಸೌಜನ್ಯ ಶೆಟ್ಟಿ ಅವರು ಆಪ್ತ ಸಲಹೆಗಾರರಾಗಿ ಶಿಕ್ಷಕರು ಎಂಬ ವಿಷಯದ ಕುರಿತು ಮಾತನಾಡಿದರು. ಐದನೇ ಅವಧಿಯಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಿಂದ ಒಂದು ಅಣುಕು ಪ್ರದರ್ಶನ ನಡೆಯಿತು. ಆರನೇ ಅವಧಿಯಲ್ಲಿ ಶೈಕ್ಷಣಿಕ ತೊಂದರೆಗಳಿಗೆ ಕಾರಣಗಳು ಮತ್ತು ನಿರ್ವಹಣೆ ಎಂಬ ವಿಷಯದ ಕುರಿತು ನಾಗರಾಜಮೂರ್ತಿ ಅವರು ಮಾತನಾಡಿದರು. ಏಳನೇ ಅವಧಿಯಲ್ಲಿ ಶಿಕ್ಷಕರ ಒತ್ತಡ ನಿರ್ವಹಣೆ ಕುರಿತು ಪದ್ಮಾ ರಾಘವೇಂದ್ರ ವಿಷಯ ಮಂಡಿಸಿದರು. ಕೊನೆಯ ಅವಧಿಯಲ್ಲಿ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಅವರು ಸಮಾರೋಪದ ಮಾತುಗಳನ್ನಾಡಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ನೆಹರು ನಗರದ ವಿವೇಕಾನಂದ ಪದವಿಪೂರ್ವ ಕಾಲೇಜು ಹಾಗೂ ತೆಂಕಿಲದ ನರೇಂದ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಮತ್ತು ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಅಧ್ಯಾಪಕರು ಈ ಎರಡನೇ ಹಂತದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಮೊದಲನೇ ಹಂತದ ಕಾರ್ಯಾಗಾರವು ಈ ಹಿಂದೆ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆದಿತ್ತು.

LEAVE A REPLY

Please enter your comment!
Please enter your name here