ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಮೊದಲ ಬಾರಿಗೆ ಕನ್ನಡದ ಪದವರ್ಣ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರನ್ನು ಭಕ್ತಿಯಿಂದ ಆರಾಧಿಸುವ ನಿಟ್ಟಿನಲ್ಲಿ ಕನ್ನಡದಲ್ಲಿ ಅನೇಕ ಸ್ತುತಿಗಳಿವೆ. ಆದರೆ ಇಲ್ಲಿನ ತನಕ ಕನ್ನಡದ ಪದವರ್ಣ ಆಗಿರಲಿಲ್ಲ. ಆದರೆ ಇದೀಗ ಕನ್ನಡದಲ್ಲೂ ಪದವರ್ಣದ ಮೂಲಕ ಶ್ರೀ ಮಹಾಲೀಂಗೇಶ್ವರ ದೇವರನ್ನು ಸ್ತುತಿಸುವ ಮೊದಲ ಪ್ರಯೋಗ ಪುತ್ತೂರಿನಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾದೀಪ ನೃತ್ಯ ದಂಪತಿಗಳು ನೃತ್ಯದ ಮೂಲಕ ಪ್ರದರ್ಶನ ನೀಡಲಿದ್ದಾರೆ. ಅ.17ರಂದು ಪುತ್ತೂರು ಪುರಭವನದಲ್ಲಿ ಸಂಜೆ ಗಂಟೆ 5.30 ರಿಂದ ನೃತ್ಯೋತ್ಕ್ರಮಣ ಕಾರ್ಯಕ್ರಮ ನಡೆಯಲಿದೆ.


ಪತ್ರಿಕಾಗೋಷ್ಟಿಯಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಅವರು ಜಂಟಿಯಾಗಿ ಮಾತನಾಡಿ ಪ್ರತಿ ವರ್ಷ ನೃತ್ಯೋತ್ಕ್ರಮಣ ಎಂಬ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ. ಈ ವರ್ಷದ ನೃತ್ಯೋತ್ಕ್ರಮಣದಲ್ಲಿ ನಾವೇ ನೃತ್ಯ ಪ್ರದರ್ಶನ ನೀಡಲಿದ್ದೇವೆ. ಸುಮಾರು 12 ವರ್ಷಗಳ ಹಿಂದೆ ನಾವು ಹಿಮ್ಮೇಳನ ಸಹಿತವಾಗಿ ನಟರಾಜ ವೇದಿಕೆಯಲ್ಲಿ ಕಾರ್ಯಕ್ರಮ ಮಾಡಿದ್ದೆವು. ಈಗ ಮತ್ತೆ ನಾವು ನೃತ್ಯ ಪ್ರದರ್ಶನ ನೀಡಲಿದ್ದೇವೆ. ಕಾರ್ಯಕ್ರಮವನ್ನು ನನ್ನ ಗುರುಗಳಾದ ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಮಂಗಳೂರಿನ ಉಳ್ಳಾಲ ಮೋಹನ್ ಕುಮಾರ್ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ ಎಂದವರು ಹೇಳಿದರು.

ಮಹಾಲಿಂಗೇಶ್ವರ ದೇವರಿಗೆ ಮೊದಲ ಬಾರಿಗೆ ಕನ್ನಡದಲ್ಲಿ ಪದವರ್ಣ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಮೇಲೆ ಕನ್ನಡದಲ್ಲಿ ಸ್ತುತಿಗಳಾಗಿವೆ. ಕನ್ನಡದಲ್ಲಿ ನೃತ್ಯಪದವರ್ಣ ಆಗಿರಲಿಲ್ಲ. ತಮಿಳು ಭಾಷೆಯಲ್ಲಿ ಚಿದಂಬರ, ಮಧುರೆ ಮೀನಾಕ್ಷಿ, ಕಾಮಾಕ್ಷಿ ರೂಪದಲ್ಲಿ ನೃತ್ಯ ಮಾಡುತ್ತೇವೆ. ನಮಗೊಂದು ಕನ್ನಡದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ಪದವರ್ಣ ಮಾಡಬೇಕೆಂಬ ಆಸೆಯಿತ್ತು. ಈ ಪದವರ್ಣವನ್ನು ಯಕ್ಷಗಾನ ಮತ್ತು ಭರತನಾಟ್ಯ ಕಲಾವಿದೆ ಮಂಗಳೂರಿನ ವಿದುಷಿ ಸುಮಂಗಲರತ್ನ ಅವರು ಕನ್ನಡದಲ್ಲಿ ಬರೆದು ಕೊಟ್ಟಿದ್ದರು. ಮಹಾಲಿಂಗೇಶ್ವರ ದೇವರ ಸ್ಥಳ ಪುರಾಣ ಕಥೆ, ಮಹಿಮೆಯ ಕುರಿತು ಇದರಲ್ಲಿದೆ. ಅದಕ್ಕೆ ನೃತ್ಯ ರೂಪಕವನ್ನು ನಾವು ಮಾಡಿದ್ದೇವೆ. ರಾಗ ಸಂಯೋಜನೆಯನ್ನು ವಿದುಷಿ ಪ್ರೀತಿಕಲಾ ಅವರು ಮಾಡಿದ್ದಾರೆ. ಇದನ್ನು ಪ್ರಥಮ ಬಾರಿಗೆ ಪ್ರಸ್ತುತ ಪಡಿಸುತ್ತಿದ್ದೇವೆ
-ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ

LEAVE A REPLY

Please enter your comment!
Please enter your name here