ಸವಣೂರು: ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕಿನ ಸವಣೂರು ಗ್ರಾಮದ ಶಾಂತಿನಗರ, ಮಾಂತೂರು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳ್ಳಾರೆ ಠಾಣಾ ಎಸೈ ಈರಯ್ಯ ಡಿ ಎನ್ ಅವರು ಮಾಂತೂರು ಎಂಬಲ್ಲಿಗೆ ಠಾಣಾ ಸಿಬ್ಬಂದಿಗಳ ಜೊತೆ ತೆರಳಿದ ಸಂದರ್ಭ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಸವಣೂರು ಗ್ರಾಮದ ಮಹಮ್ಮದ್ ಫೈಝೀನ್ (34) ಎಂಬಾತನನ್ನು ವಿಚಾರಿಸಿದಾಗ ಆತ ಮಾದಕವಸ್ತು ಸೇವನೆ ಮಾಡಿರುವಂತೆ ಕಂಡುಬಂದ ಹಿನ್ನೆಲೆಯಲ್ಲಿ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದ್ದು, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 87/2024 ಕಲಂ 27(b) N.D.P.S Act ರಂತೆ ಪ್ರಕರಣ ದಾಖಲಾಗಿರುತ್ತದೆ.
ಇನ್ನೊಂದು ಪ್ರಕರಣದಲ್ಲಿ ಸವಣೂರು ಗ್ರಾಮದ ಶಾಂತಿನಗರ ಮೆಸ್ಕಾಂ ಸಬ್ ಸ್ಟೇಷನ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಆತ ಸವಣೂರು ಗ್ರಾಮದ ನಿವಾಸಿ ಮಜೀದ್ (35) ಎಂಬುದಾಗಿ ತಿಳಿದುಬಂದಿರುತ್ತದೆ. ಈತನು ಮಾದಕವಸ್ತು ಸೇವನೆ ಮಾಡಿರುವಂತೆ ಕಂಡುಬಂದ ಹಿನ್ನೆಲೆಯಲ್ಲಿ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದ್ದು, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 88/2024 ಕಲಂ 27(b) N.D.P.S Act ರಂತೆ ಪ್ರಕರಣ ದಾಖಲಾಗಿದೆ.