ಆಲಂಕಾರು: ಯಾರೂ ಇಲ್ಲದ ಸಂದರ್ಭ ಮನೆಯೊಂದರಿಂದ ಹಗಲು ವೇಳೆಯೇ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ ಆಗಿರುವ ಘಟನೆ ಆಲಂಕಾರು ಗ್ರಾಮದ ಕಲ್ಲೇರಿ ಎಂಬಲ್ಲಿ ಡಿ.18ರಂದು ನಡೆದಿತ್ತು.
ಆಲಂಕಾರು-ಶರವೂರು ರಸ್ತೆ ಬದಿಯ ಕಲ್ಲೇರಿ ಎಂಬಲ್ಲಿರುವ ಪಿಡಬ್ಲ್ಯೂಡಿ ಗುತ್ತಿಗೆದಾರ, ಆಲಂಕಾರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರೂ ಆದ ಸುಧಾಕರ ಪೂಜಾರಿಯವರ ಮನೆಯಲ್ಲಿ ಈ ಕಳ್ಳತನ ನಡೆದಿತ್ತು.
ಸುಧಾಕರ ಪೂಜಾರಿ ಅವರಿಗೆ ಕುಂತೂರಿನಲ್ಲಿ ಕೃಷಿ ಜಾಗವಿದ್ದು ಅವರು ಬೆಳಿಗ್ಗೆ ಅಲ್ಲಿಗೆ ಹೋಗಿದ್ದರು. ಮಕ್ಕಳು ಶಾಲೆಗೆ ಹೋಗಿದ್ದು ಅವರ ಪತ್ನಿ ಸೌಮ್ಯ ಅವರು ಮನೆಗೆ ಬಾಗಿಲು ಹಾಕಿ ಮನೆ ಪಕ್ಕದಲ್ಲೇ ಇರುವ ತೋಟಕ್ಕೆ ಹೋಗಿದ್ದರು. ಅವರು ಮಧ್ಯಾಹ್ನ ಮನೆಗೆ ಬಂದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು.
ಹಂಚಿನ ಮನೆಯ ಹಿಂಬದಿ ಬಾಗಿಲಿಗೆ ಕಾಲಿನಿಂದ ಒದ್ದು ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಬೆಡ್ ರೂಮ್ ನ ಕಪಾಟಿನಲ್ಲಿದ್ದ ಸೌಮ್ಯ ಅವರ ಕರಿಮಣಿ ಸರ, ಮಕ್ಕಳ ಮೂರ್ನಾಲ್ಕು ಚಿನ್ನದ ಉಂಗುರ, ಬೆಳ್ಳಿಯ ಕಾಲು ಚೈನ್, ಸೊಂಟದ ಚೈನ್ ಕಳವು ಗೈದಿದ್ದಾರೆ. ಅಲ್ಲದೇ ಕಪಾಟಿನಲ್ಲಿದ್ದ ರೋಲ್ಡ್ ಗೋಲ್ಡ್ ಸಹ ಕದ್ದೊಯ್ದಿದ್ದಾರೆ.
ಘಟನಾ ಸ್ಥಳಕ್ಕೆ ಕಡಬ ಪೋಲಿಸರು, ಶ್ವಾನದಳ, ಬೆರಳಚ್ಚು ತಜ್ಞರ ಆಗಮಿಸಿದ್ದರು. ನಂತರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಪುತ್ತೂರು ಗ್ರಾಮಾಂತರ, ವಿಟ್ಲ, ಕಡಬ ಪೊಲೀಸರ ಕಾರ್ಯಾಚರಣೆ ನಡೆಸಿ ಅಂತರಾಜ್ಯ ಮನೆ ಕಳ್ಳತನ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ಸೇರಿ 21 ಲಕ್ಷ ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದರು. ಆರೋಪಿ ಸೂರಜ್ ಕೆ. ಗುಡ್ಡೆಮನೆ ಮನೆ, ಉಪ್ಪಳ ಕಾಸರಗೋಡು ಜಿಲ್ಲೆ ಕೇರಳ, ಪ್ರಸಕ್ತ ವಾಸವಾಗಿರುವ ನವಿಲು ಗಿರಿಮನೆ ಮೂಡಂಬೈಲು ಗ್ರಾಮ ಹೊಸಂಗಡಿ ಮಂಜೇಶ್ವರ ಕಾಸರಗೋಡು ಜಿಲ್ಲೆ ಕೇರಳ ರಾಜ್ಯದವನನ್ನು ಬಂಧಿಸಿ ಕಡಬ ಪೋಲಿಸರು ಮಹಜರು ನಡೆಸಿದ್ದಾರೆ.