ಪುತ್ತೂರು: ವಿಧಾಪರಿಷತ್ತಿನ ಸದಸ್ಯ ರಾದ ಐವನ್ ಡಿಸೋಜ ಅವರ ಮಂಗಳೂರಿನ ಮಹಾನಗರ ಪಾಲಿಕೆಯ ಕಟ್ಟಡದ ಒಂದನೇ ಮಹಡಿಯಲ್ಲಿರುವ ನೂತನ ಕಚೇರಿಯಲ್ಲಿ ಭಾರತೀಯ ಸಂವಿಧಾನ ಪೀಠಿಕೆ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮ ಫೆ.3 ರಂದು ನಡೆಯಲಿದೆ.
ಸಂವಿಧಾನದ ಪೀಠಿಕೆಯು ಸಂವಿಧಾನದ ಆಶಯಗಳು ಉದ್ದೇಶಗಳನ್ನು ಪ್ರತಿಬಿಂಬಿಸುವ ಮುಕುಟವಾಗಿದ್ದು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಗೌರವಿಸುವ ಮೂಲಕ ಈ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಈಗಾಗಲೇ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಸಂವಿಧಾನ ಜಾಗೃತಿಯನ್ನೂ ಮೂಡಿಸಿದೆ. ಸರಕಾರಿ ಕಚೇರಿ, ನ್ಯಾಯಾಲಯ, ಶಾಲೆ, ಸಂಘ-ಸಂಸ್ಥೆಗಳು ಸೇರಿದಂತೆ ಪ್ರತಿ ಮನೆ-ಮನೆಯಲ್ಲಿ ಸಂವಿಧಾನದ ಪೀಠಿಕೆ ಮತ್ತು ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸುವಂತಾಗಬೇಕು ಈ ಮೂಲಕ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಐವನ್ ಡಿಸೋಜ ಅವರು ತಿಳಿಸಿದ್ದಾರೆ.
ಪ್ರತಿ ಸರಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಅನಾವರಣ ಮಾಡಬೇಕು ಎಂಬ ಆಶಯದೊಂದಿಗೆ ಪುತ್ತೂರಿನ ಸಮಾನ ಮನಸ್ಕರಾದ ಜನಾರ್ದನ್ ಬಿ, ರೆ.ವಿಜಯ ಹಾರ್ವಿನ್, ಮಹಮ್ಮದ್ ಬಡಗನ್ನೂರು, ಸೇಸಪ್ಪ ಬೆದ್ರಕಾಡು, ರಾಮಣ್ಣ ಪಿಲಿಂಜ, ಸಿಶೇ ಕಜೆಮಾರ್ ರವರು ಈಗಾಗಲೇ ಸರ್ಕಾರದ ಮಟ್ಟದಲ್ಲಿ ಮನವಿ ಸಲ್ಲಿಸಿದ್ದರು.