ಪುತ್ತೂರು: ಧರ್ಮಶ್ರೀ ಭಜನಾ ಮಂದಿರ ಅಶ್ವತ್ಥಕಟ್ಟೆ ಕೋಡಿಂಬಾಡಿ ಇದರ ವತಿಯಿಂದ ಜ.4ರಿಂದ ನಡೆದ 18ನೇ ವರ್ಷದ ನಗರ ಭಜನೋತ್ಸವ ಪ್ರಯುಕ್ತ ಫೆ.1ರಂದು ಏಕಾಹ ಭಜನೆ ಮತ್ತು ಅಶ್ವತ್ಥಪೂಜೆ ನಡೆಯಿತು.
ಜ.4ರಂದು ಬೆಳಿಗ್ಗೆ ಭಜನಾ ಮಂದಿರದಲ್ಲಿ ಮಹಾಗಣಪತಿ ಹೋಮ ನಡೆದು ಸಂಜೆ ಮಂದಿರದಿಂದ ಮನೆ ಮನೆ ಭಜನೆಗೆ ಹೊರಡುವ ಕಾರ್ಯಕ್ರಮ ನಡೆದಿತ್ತು. ನಂತರ ಪ್ರತೀ ದಿನ ಸಂಜೆ ಬೈಲುವಾರು ಭಜನೆ, ಜ.31ರಂದು ರಾತ್ರಿ ಮನೆ ಮನೆ ಭಜನೆ ಮುಗಿಸಿ ಮಂದಿರಕ್ಕೆ ಆಗಮಿಸುವ ಕಾರ್ಯಕ್ರಮ ನಡೆಯಿತು.
ಫೆ.1ರಂದು ಬೆಳಿಗ್ಗೆ ಏಕಾಹ ಭಜನೆ ಆರಂಭಗೊಂಡು ಮಧ್ಯಾಹ್ನ ಅಶ್ವತ್ಥಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಅಶ್ವತ್ಥಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ಫೆ.2ರಂದು ಬೆಳಿಗ್ಗೆ ಏಕಾಹ ಭಜನೆಯ ಮಂಗಳ ನಡೆಯಿತು. ಗೌರವಾಧ್ಯಕ್ಷ ಚಂದ್ರಹಾಸ ರೈ ಸರೋಳಿ, ಅಧ್ಯಕ್ಷ ಶೇಖರ ಪೂಜಾರಿ ನಿಡ್ಯ, ಕಾರ್ಯದರ್ಶಿ ದಯಾನಂದ ಗೌಡ ಬೋಳಾಜೆ, ಅರ್ಚಕ ದೀಪಕ್ ಮಣಿಯಾಣಿ ಸಹಿತ ಹಲವರು ಭಾಗವಹಿಸಿದ್ದರು. ಬೆಳಿಗ್ಗೆ ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
47ನೇ ವರ್ಷದ ಸತ್ಯನಾರಾಯಣ ಪೂಜೆ:
ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಅಶ್ವತ್ಥಕಟ್ಟೆ ಕೋಡಿಂಬಾಡಿ ಇದರ ವತಿಯಿಂದ ಫೆ.1ರಂದು ಮಧ್ಯಾಹ್ನ ಕೋಡಿಂಬಾಡಿ ಅಶ್ವತ್ಥಕಟ್ಟೆಯಲ್ಲಿ 7ನೇ ವರ್ಷದ ಸಾರ್ವಜನಿಕ ಶ್ರೀ ಅಶ್ವತ್ಥಪೂಜೆ ಹಾಗೂ ಸಂಜೆ 47ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ(ವೃತ) ಪೂಜೆ ಮತ್ತು ವೇದಮೂರ್ತಿ ಶ್ರೀವತ್ಸ ಕೆದಿಲಾಯ ಶಿಬರ ಇವರಿಂದ ಕಥಾ ವಾಚನ, ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಮಿತಿಯ ಅಧ್ಯಕ್ಷ ಕೇಶವ ಭಂಡಾರಿ ಕೈಪ, ಪ್ರಧಾನ ಕಾರ್ಯದರ್ಶಿ ದೇವಾನಂದ ಕೆ, ಗೌರವಾಧ್ಯಕ್ಷ ವಾರಿಸೇನ ಜೈನ್ ಕೋಡಿಯಾಡಿ, ಅರ್ಚಕ ಬಾಲಕೃಷ್ಣ ಐತಾಳ್ ಸಹಿತ ಹಲವರು ಭಾಗವಹಿಸಿದ್ದರು.