ಒಡಿಯೂರು ಸಂಸ್ಥಾನದಲ್ಲಿ ಶ್ರೀ ಗುರುದೇವ ಆಧ್ಯಾತ್ಮ ಕೇಂದ್ರ ಲೋಕಾರ್ಪಣೆ

0

ವಿಟ್ಲ: ಭಾರತ ದೇಶದ ಆಂತರ್ಯ ಆಧ್ಯಾತ್ಮ. ಆಧ್ಯಾತ್ಮದಿಂದ ಭಾರತದ ಮೌಲ್ಯ ವರ್ಧನೆ ಸಾಧ್ಯ. ಬದುಕಿನಲ್ಲಿ ಆಧ್ಯಾತ್ಮಿಕ ಶಿಕ್ಷಣವನ್ನು ಅಳವಡಿಸಿಕೊಂಡಾಗ ನಾವು ವಿಸ್ತೃತವಾಗಿ ಬೆಳೆಯಲು ಸಾಧ್ಯವಿದೆ. ಸಮಾಜದಲ್ಲಿ ಕ್ಷೀಣವಾಗುತ್ತಿರುವ ಆಧ್ಯಾತ್ಮಿಕ ಮೌಲ್ಯಗಳನ್ನು ತುಂಬುವ ಕಾರ್ಯ ಈ ಆಧ್ಯಾತ್ಮಿಕ ಕೇಂದ್ರದ ಮೂಲಕ ಆಗಲಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.


ಫೆ.6ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆಯ ಸಂದರ್ಭದಲ್ಲಿ ಶ್ರೀ ಗುರುದೇವ ಆಧ್ಯಾತ್ಮ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ತನ್ನನ್ನು ತಾನು ಅರಿತುಕೊಳ್ಳುವುದೇ ಆಧ್ಯಾತ್ಮ. ಅರ್ಪಣಾ ಭಾವದ ಸೇವೆ ನಮ್ಮಲ್ಲಿರಬೇಕು. ಆಧ್ಯಾತ್ಮದ ಚಿಂತನೆ ನಮ್ಮಲ್ಲಿ ಮೂಡಬೇಕು. ಸನಾತನ ಹಿಂದೂ ಧರ್ಮದ ಉಳಿವಿಗೆ ನಾವೆಲ್ಲರೂ ಕಟಿಬದ್ಧರಾಗಬೇಕು. ಆಧ್ಯಾತ್ಮ ಕೇಂದ್ರದ ಮೂಲಕವಾಗಿ ಆಧ್ಯಾತ್ಮದ ಬಗ್ಗೆ ಒಲವು ಇರುವವರಿಗೆ ನೈತಿಕ, ಯೋಗ, ಶಿಕ್ಷಣ ಕೊಡುವ ಕೆಲಸ ಮಾಡಲಾಗುವುದು. ಆ ಮೂಲಕ ಮಾನವನ ಬದುಕಿಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗುವುದು ಎಂದು ಶ್ರೀಗಳು ಹೇಳಿದರು.


ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯರವರು ಮಾತನಾಡಿ ಒಡಿಯೂರು ಶ್ರೀಗಳ ಸಾಮಾಜಿಕ ಕಳಕಳಿ ಅನನ್ಯವಾದುದು. ಸಂಸ್ಕೃತಿ – ಸಂಸ್ಕಾರ ಉಳಿಸುವ ಕೆಲಸ ಎಲ್ಲರಿಂದ ಆಗಬೇಕಿದೆ. ಇಂತಹ ಸಂಸ್ಕಾರ ಕೇಂದ್ರಗಳು ನಮ್ಮ ಬಾಳಿನ ಬೆಳಕಾಗಲಿದೆ. ನಮ್ಮೊಳಗಿನ ದ್ವೇಷ ಭಾವ ದೂರವಾಗಿ ಎಲ್ಲರಲ್ಲೂ ಪ್ರೀತಿ ಭಾವ ಮೂಡಬೇಕು. ಸಂಸ್ಕೃತಿ – ಸಂಸ್ಕಾರವನ್ನು ಉಳಿಸಿ ದೇಶ ಕಟ್ಟುವ ಕೆಲಸ ಮಕ್ಕಳಿಂದ ಆಗಲಿದೆ. ಅಂತಹ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವ ಕೆಲಸ ಕ್ಷೇತ್ರದಿಂದ ಆಗುತ್ತಿರುವುದು ಸಂತಸ ತಂದಿದೆ ಎಂದರು.
ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಂಗಳೂರಿನ ಅಧ್ಯಕ್ಷರಾದ ಜಿತೇಂದ್ರ ಎಸ್. ಕೊಟ್ಟಾರಿರವರು ಮಾತನಾಡಿ ದೇಶದ ಬಗ್ಗೆ ಚಿಂತನೆ ಇರುವ ಕ್ಷೇತ್ರವಿದ್ದರೆ ಅದು ಒಡಿಯೂರು ಕ್ಷೇತ್ರ. ನಮ್ಮ ದೇಶದ ಆದ್ಯಾತ್ಮಿಕ ಶಕ್ತಿ ಅಪಾರವಾದುದು. ಹಿಂದೂ ಧರ್ಮ ಪವಿತ್ರವಾದುದು. ಪ್ರತಿಯೊಂದರಲ್ಲೂ ದೇವರನ್ನು ಕಾಣುವವರು ನಾವುಗಳು. ಆಧ್ಯಾತ್ಮಿಕ ಜಾಗೃತಿ ಮಾಡುವ ಕೆಲಸ ಸಂಸ್ಥಾನದಿಂದ ಆಗುತ್ತಿರುವುದು ಸಂತಸ ತಂದಿದೆ ಎಂದರು.


ಸಾಧ್ವಿ ಶ್ರೀ ಮಾತಾನಂದಮಯೀರವರು ಉಪಸ್ಥಿತರಿದ್ದರು. ಜಮೈಕಾದ ಕಿಂಗ್ ಸ್ಟನ್ ನ ವೈದ್ಯ ಡಾ. ರಮಾನಂದ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ ಐಕಳ, ಉದ್ಯಮಿ ವಾಮಯ್ಯ ಬಿ. ಶೆಟ್ಟಿ ಚೆಂಬೂರು ಮುಂಬೈ, ಕಣಂಜಾರ್ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಣಂಜಾರ್ ವಿಕ್ರಮ ಹೆಗ್ಡೆ, ಮುಂಬಯಿ ಗುರುದೇವ ಸೇವಾ ಬಳಗದ ಅಧ್ಯಕ್ಷ ದಾಮೋದರ ಎಸ್.ಶೆಟ್ಟಿ, ಮಂಗಳೂರು ಲೋಟಸ್ ಪ್ರಾಪರ್ಟೀಸ್ ನ ಮಾಲಕರಾದ ಸಂಪತ್ ಕುಮಾರ್ ಶೆಟ್ಟಿ, ಮುಲ್ಕಿ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಹೆಗ್ಡೆ, ಉದ್ಯಮಿ ದಯಾನಂದ ಹೆಗ್ಡೆ ಮುಲುಂಡ್ ಮುಂಬೈ, ಮುಂಬೈನ ವೈದ್ಯರು, ಒಡಿಯೂರು ಶ್ರೀ ಯುವಸೇವಾ ಬಳಗ ಮುಂಬೈ ಇದರ ಅಧ್ಯಕ್ಷರಾದ ಡಾ.ಅದಿಪ್ ಕೆ. ಶೆಟ್ಟಿ, ಉದ್ಯಮಿ ಭರತ್ ಭೂಷಣ್, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ‘ಸಹಕಾರ ರತ್ನ’ ಎ. ಸುರೇಶ್ ರೈ, ಒಡಿಯೂರು
ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷರಾದ ಸರ್ವಾಣಿ ಪಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಥೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಸ್ವಾಗತಿಸಿದರು. ನವನೀತ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸಮಿತಿ ಸಂಚಾಲಕ ಲಿಂಗಪ್ಪ ಗೌಡ ಪನೆಯಡ್ಕರವರು ವಂದಿಸಿದರು.

ಇಂದು ಶ್ರೀ ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ
ಫೆ.7ರಂದು ಶ್ರೀ ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ ನಡೆಯಲಿದ್ದು, ಬೆಳಗ್ಗೆ 9ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 10.30ಕ್ಕೆ ಮಹಾಮಂಗಳಾರತಿ, 11 ರಿಂದ ಧರ್ಮ ಸಭೆ ನಡೆಯಲಿದ್ದು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಾಧ್ವಿ ಶ್ರೀ ಮಾತಾನಂದಮಯೀ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ 7ಗಂಟೆಯಿಂದ ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥಯಾತ್ರೆ ಶ್ರೀ ಸಂಸ್ಥಾನದಿಂದ ಹೊರಟು ಗ್ರಾಮ ದೈವಸ್ಥಾನ( ಮಿತ್ತನಡ್ಕ) ಕ್ಕೆ ತೆರಳಿ, ಕನ್ಯಾನ ಪೇಟೆಸವಾರಿ, ನಂತರ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆಯ ಬಳಿಕ ರಥವು ಶ್ರೀ ಸಂಸ್ಥಾನಕ್ಕೆ ಹಿಂದಿರುಗಲಿದೆ. ಇದೇ ಸಂದರ್ಭದಲ್ಲಿ ವಿವಿಧ ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here