ಉಪ್ಪಿನಂಗಡಿ: ಕೋವಿಡ್ -19 ಸೋಂಕು ಪ್ರಕರಣ ಹರಡುವಿಕೆಯ ಕಾಯ್ದೆಯನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಪ್ರಕಾಶ್ ಭಟ್ ಮತ್ತು ಪ್ರೀತಂ ಭಟ್ ಅವರನ್ನು ದೋಷಮುಕ್ತಗೊಳಿಸಿ ಪುತ್ತೂರಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಆದೇಶ ನೀಡಿದೆ.
2021ರ ಮೇ 1ರಂದು ಉಪ್ಪಿನಂಗಡಿಯ ಹಳೆ ಬಸ್ ನಿಲ್ದಾಣದ ಬಳಿಯ ಪ್ರಭಾತ್ ಎಂಟರ್ಪ್ರೈಸಸ್ನಲ್ಲಿ ‘ತಂಬಾಕು ಸೇವನೆ ಅಪಾಯಕಾರಿ’ ಎಂದು ನಾಮಫಲಕ ಅಳವಡಿಸದೇ ಸಾರ್ವಜನಿಕ ವ್ಯಾಪಾರ ಮಾಡಿ ಸಾಂಕ್ರಾಮಿಕ ರೋಗವಾದ ಕೋವಿಡ್-19 ಸೋಂಕು ಹರಡಲು ಕಾರಣವಾಗುತ್ತಿದ್ದಾರೆ ಎಂದು ಪ್ರಕಾಶ್ ಭಟ್ ಮತ್ತು ಪ್ರೀತಂ ಭಟ್ ಅವರ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅಂದಿನ ಉಪನಿರೀಕ್ಷಕ ಕುಮಾರ್ ಸಿ. ಕಾಂಬ್ಳೆ ಪ್ರಕರಣ ದಾಖಲಿಸಿದ್ದರು.
ಇದರ ವಿಚಾರಣೆ ನಡೆದು, 8 ಜನ ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿದ ಪುತ್ತೂರಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಣ್ಣ ಎಚ್.ಆರ್. ಅವರು ಈ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯ ಇಲ್ಲದ್ದರಿಂದ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ದೇವಾನಂದ ಕೆ. ಮತ್ತು ಹರಿಣಿ ವಾದಿಸಿದರು.