*ಆರ್ಎಸ್ಎಸ್ಗೆ ನೂರು ವರ್ಷದ ಶಾಶ್ವತ ನೆನಪಿಗೆ ಸಾಮೂಹಿಕ ವಿವಾಹ
*ಶ್ರೀನಿವಾಸ ದೇವರ ಸಮ್ಮುಖದಲ್ಲೇ ಸಾಮೂಹಿಕ ವಿವಾಹ
*ವಿವಾಹ ನೋಂದಾವಣೆ ವಿಭಾಗ ಕಾರ್ಯಾರಂಭ
*ವಿವಾಹ ಆಗುಲಿಚ್ಚಿಸುವವರಿಗೆ ಪಂಚಾಯತ್ನಿಂದ ದೃಢೀಕರಣ ಪತ್ರ ಅಗತ್ಯ
*ವಾಸ್ತವ್ಯ ದೃಢೀಕರಣಕ್ಕೆ ಆಧಾರ್ ಕಾರ್ಡ್ ದಾಖಲೆ ಅಗತ್ಯ
*ವಧು ವರರ ಎರಡೂ ಕಡೆಯ ಮನೆಯವರಿಂದ ಒಪ್ಪಿಗೆ ಅಗತ್ಯ
*ವಧು ವರರ ಮದುವೆ ಬೇಕಾದ ಎಲ್ಲಾ ಸಾಹಿತ್ಯ ಉಚಿತ
*ಚಿನ್ನದ ಮಾಂಗಲ್ಯ, ಬೆಳ್ಳಿಯ ಉಂಗುರ, ವಸ್ತ್ರಗಳು ಉಚಿತ
*ಎಷ್ಟು ಜನರು ಬಂದರೂ ಔತಣ ಕೂಟದ ವ್ಯವಸ್ಥೆ
*3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವದ ಬಳಿಕ ಗಿರಿಜಾಕಲ್ಯಾಣ, ಸೀತಾಕಲ್ಯಾಣ
ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ಆಗುವ ಸಂದರ್ಭ ಇದು ಶಾಶ್ವತವಾಗಿರಬೇಕೆಂಬ ನಿಟ್ಟಿನಲ್ಲಿ ನೂರು ಜೋಡಿಗಳಿಗೆ ಸಾಮೂಹಿಕ ವಿವಾಹವನ್ನು ಮಾಡಬೇಕೆಂಬ ಯೋಚನೆಗೆ ಸಿದ್ಧತೆ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಈ ಬಾರಿ ಡಿ.27, 28 ಮತ್ತು 29ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲೀಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದೆ. ಡಿ.27ಕ್ಕೆ ಶ್ರೀ ದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರ ಪುರಪ್ರವೇಶ ನಡೆಯಲಿದೆ. 28ಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.29ಕ್ಕೆ ಶ್ರೀನಿವಾಸ ದೇವರ ಸಮ್ಮುಖದಲ್ಲೇ ನೂರು ಜೋಡಿಗಳಿಗೆ ಉಚಿತವಾಗಿ ಸಾಮೂಹಿಕ ವಿವಾಹ ನಡೆಯಲಿದೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ವಿವಾಹ ಸಮಾರಂಭ ಮಾಡುವ ಸಂದರ್ಭ ಯಾವುದೇ ರೀತಿಯ ಗೊಂದಲಗಳು ಇರಬಾರದು ಎಂಬ ನೆಲೆಯಲ್ಲಿ ದೃಢೀಕರಣ ಪತ್ರದ ಜೊತೆಗೆ ವಿವಾಹ ನಡೆಸಲು ನೊಂದಾವಣೆ ಕಚೇರಿಯನ್ನುತೆರೆದಿದ್ದೇವೆ. ಯಾರು ವಿವಾಹ ಆಗುತ್ತಾರೋ ಅವರು ಸ್ಥಳೀಯ ಪಂಚಾಯತ್ನಿಂದ ವಿವಾಹ ಆಗಿಲ್ಲ ಎಂಬುದಕ್ಕೆ ದೃಢೀಕರಣ ಪತ್ರ ಮತ್ತು ಅವರು ವಾಸ್ತವ್ಯ ಇರುವುದಕ್ಕೆ ಆಧಾರ್ ಕಾರ್ಡ್ ಪ್ರತಿಗಳನ್ನು ತಂದು ನೀಡಬೇಕು. ಎರಡು ಮನೆಯವರ ಕಡೆಯಿಂದ ಒಪ್ಪಿಗೆ ಪತ್ರವನ್ನು ಕಚೇರಿಗೆ ನೀಡಬೇಕು ಎಂದ ಅವರು ವಧು ವರರ ಎರಡು ಕಡೆಯವರಿಗೆ ಮದುವೆಗೆ ಬೇಕಾದ ಎಲ್ಲಾ ಸಾಹಿತ್ಯದ ಜೊತೆಗೆ ಚಿನ್ನದ ಮಾಂಗಲ್ಯ, ಬೆಳ್ಳಿಯ ಕಾಲುಂಗುರ, ವಸ್ತ್ರಗಳನ್ನು ಟ್ರಸ್ಟ್ಮೂಲಕ ನೀಡಲಾಗುವುದು. ವಧು ವರರ ಕಡೆಗಳಿಂದ ಎಷ್ಟು ಜನರು ಬಂದರೂ ಕೂಡಾ ಔತಣ ಕೂಟವನ್ನು ಮಾಡಲು ಎಲ್ಲಾ ವ್ಯವಸ್ಥೆ ಮಾಡುತ್ತೇವೆ ಎಂದರು. ಮುಂದಿನ ದಿನ ವಿವಾಹ ವೇದಿಕೆಯ ಕುರಿತು ಸಮಿತಿಗಳನ್ನು ರಚನೆ ಮಾಡಿ ಇನ್ನೂ ಹೆಚ್ಚಿನ ಸಿದ್ದತೆಯ ಕುರಿತು ಮಾಹಿತಿ ನೀಡುತ್ತೇವೆ ಎಂದರು.
ಮುಂದೆ ಗಿರಿಜಾ ಕಲ್ಯಾಣ, ಸೀತಾ ಕಲ್ಯಾಣಕ್ಕೂ ಚಿಂತನೆ:
ಎರಡು ವರ್ಷದಿಂದ ಅತ್ಯಂತ ಯಶಸ್ವಿಯಾಗಿ ಶ್ರದ್ದೆ ಭಕ್ತಿಯ ಜೊತೆಗೆ ಶ್ರೀನಿವಾಸ ಕಲ್ಯಾಣೋತ್ಸವ ನಡೆದಿದೆ. 3ನೇ ವರ್ಷವೂ ಯಶಸ್ವಿಯಾಗಿ ನಡೆಸಲಿದ್ದೇವೆ. ಅದಾದ ಬಳಿಕ ಭಕ್ತರ ಆಶಯದಂತೆ ಮುಂದಿನ ದಿನ ಗಿರಿಜಾ ಕಲ್ಯಾಣ, ಸೀತಾ ಕಲ್ಯಾಣವನ್ನೂ ಮಾಡಲಿದ್ದೇವೆ. ಧಾರ್ಮಿಕ ಕಾರ್ಯಕ್ರಮವನ್ನು ಮಾಡುತ್ತಾ ಧರ್ಮ ಶ್ರದ್ದೆಯ ಜೊತೆಗೆ ಹಿಂದೂ ಸಮಾಜ ಇರಬೇಕೆಂದು ನಮ್ಮ ಟ್ರಸ್ಟ್ನ ಮೂಲಕ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಕ್ರೀಡಾ ಚಟುವಟಿಕೆಗಳನ್ನು ನಮ್ಮಿಂದಾದ ಕೆಲಸ ಕಾರ್ಯ ನಿರಂತರ ನಡೆಯಲಿದೆ. ವರ್ಷಪೂರ್ತಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಧರ್ಮ ಜಾಗೃತಿಯ ಕೆಲಸ ಕಾರ್ಯ ಮಾಡಬೇಕೆಂಬ ಸಂಕಲ್ಪವಿದೆ. ಗ್ರಾಮ ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಿದ್ದೇವೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಟ್ರಸ್ಟ್ನಿಂದ 2 ಮನೆಗಳ ನಿರ್ಮಾಣ:
ಟ್ರಸ್ಟ್ನ ವತಿಯಿಂದ 2 ಮನೆಗಳನ್ನು ನಿರ್ಮಾಣ ಮಾಡುವ ಅಪೇಕ್ಷೆ ಸಮಾಜದಿಂದ ಬಂದಿದೆ. ಅವರ ಮನೆಗೆ ಸಂಬಂಧಿಸಿದ ಜಾಗದ ದಾಖಲೆ ಸಲ್ಲಿಕೆಯಾದ ಬಳಿಕ ಮನೆ ನಿರ್ಮಾಣ ಮಾಡಿ ಹಸ್ತಾಂತರ ಮಾಡಲಿದ್ದೇವೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಅಧ್ಯಕ್ಷ ಮಹೇಂದ್ರ ವರ್ಮ, ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ರೈ ಮಠ, ಜೊತೆ ಕಾರ್ಯದರ್ಶಿ ರಾಜು ಶೆಟ್ಟಿ, ಸದಸ್ಯ ಪ್ರಜ್ವಲ್ ಘಾಟೆ, ಮಾದ್ಯಮ ವಕ್ತಾರ ನವೀನ್ ರೈ ಪಂಜಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪೇಜಾವರ ಶ್ರೀಗಳ ಅಪೇಕ್ಷೆಯಂತೆ ಗೋ ಶಾಲೆಯ ಯೋಚನೆ
ಕಳೆದ ಬಾರಿಯ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಪೇಜಾವರ ಶ್ರೀಗಳು ಪುತ್ತೂರಿನಲ್ಲಿ ದೊಡ್ಡದಾದ ಗೋ ಶಾಲೆ ನಿರ್ಮಾಣ ಮಾಡಬೇಕೆಂದು ಅಪೇಕ್ಷೆ ಪಟ್ಟರು. ಅವರ ಅಪೇಕ್ಷೆಯಂತೆ ಗೋ ಶಾಲೆ ನಿರ್ಮಾಣಕ್ಕೆ ಟ್ರಸ್ಟ್ ಸಿದ್ಧತೆ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ತಹಶೀಲ್ದಾರ್ ಮತ್ತು ಸಹಾಯಕ ಕಮೀಷನರ್ ಅವರಲ್ಲಿ ಮಾತನಾಡಿ ಗೋಮಾಳದ ಜಾಗ ನೋಡಿದ್ದೇವೆ. ಮುಂಡೂರು ಬದಿಯಡ್ಕದಲ್ಲಿ ಗೋಮಾಳದ ಜಾಗ ಇರುವ ಸರ್ವೆ ನಂಬರ್ ಅನ್ನು ಇಲಾಖೆಗೆ ನೀಡಿ ಗೋ ಶಾಲೆ ನಡೆಸಲು ಜಾಗ ನೀಡುವಂತೆ ಮನವಿ ಮಾಡಿದ್ದೇವೆ. ಸರಕಾರ ಜಾಗ ಕೊಟ್ಟರೆ ಖಂಡಿತವಾಗಿಯೂ ಟ್ರಸ್ಟ್ ಮೂಲಕ ಗೋ ಶಾಲೆ ನಡೆಸುತ್ತೇವೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.