ಪಕ್ಷ ಕಟ್ಟುವ ಕೆಲಸದಲ್ಲಿ ಸಕ್ರೀಯರಾಗಿರಬೇಕು -ಶಾಸಕ ಅಶೋಕ್ ರೈ
ಪುತ್ತೂರು: ಪ್ರತೀ ಗ್ರಾಮದಲ್ಲಿ ತಳಮಟ್ಟದಲ್ಲಿ ಜನರನ್ನು ಸಂಪರ್ಕಿಸಿ ಅವರಿಗೆ ಸಹಾಯ ಮಾಡುವ ಮೂಲಕ ಪಕ್ಷವನ್ನು ಕಟ್ಟುವ ಕೆಲಸ ಮಾಡುವಲ್ಲಿ ನಾವು ಸಕ್ರೀಯರಾಗಿರಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಮುಂಡೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೊಂದವರ ಸೇವೆ ಮಾಡುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. ಗ್ರಾಮದ ಮೂಲೆ ಮೂಲೆಗೆ ತೆರಳಿ ಜನರ ಕಷ್ಟ ಸುಖವನ್ನು ತಿಳಿದು ಕಷ್ಟದಲ್ಲಿರುವವರಿಗೆ ನೆರವಾಗಬೇಕು. ಗ್ರಾಮದಲ್ಲಿ ನಿವೇಶನ ಇಲ್ಲದ, ಮನೆಗೆ ಕರೆಂಟ್ ಇಲ್ಲದವರು, ಕುಡಿಯುವ ನೀರು ಇಲ್ಲದೇ ಇದ್ದವರನ್ನು ನಾವು ಸಂಪರ್ಕಿಸಿ ಅವರಿಗೆ ನೆರವು ನೀಡಬೇಕು. ನೊಂದವರ ಸೇವೆ ಮಾಡಿದರೆ ಅದು ನಮಗೆ ಪುಣ್ಯದ ಜೊತೆಗೆ ಪಕ್ಷದ ಬೆಳವಣಿಗೆಗೂ ಕಾರಣವಾಗುತ್ತದೆ ಎಂದು ಹೇಳಿದರು.
ನಿವೇಶನವಿಲ್ಲದವರು ಈ ಗ್ರಾಮದಲ್ಲಿ ಅರ್ಜಿ ಸಲ್ಲಿಸಿ:
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ ಇಲ್ಲದೆ , ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಯಾವುದೇ ಕುಟುಂಬ ಬಡಗನ್ನೂರು, ಕೊಳ್ತಿಗೆ,ಅರಿಯಡ್ಕ ಬನ್ನೂರು, ಆರ್ಯಾಪು,ಕೆಯ್ಯೂರು,ಬೆಟ್ಟಂಪಾಡಿ ,ಕೆದಂಬಾಡಿ,ನಿಡ್ಪಳ್ಳಿ, ನರಿಮೊಗರು ಗ್ರಾಮದ ನಾಗರೀಕರು ಅರ್ಜಿ ಹಾಕಬಹುದು ಎಂದು ಶಾಸಕರು ತಿಳಿಸಿದರು.
ಪಿಡಿಒಗಳು ಅರ್ಜಿ ಸ್ವೀಕರಿಸಬೇಕು
ಈ ಎಲ್ಲಾ ಗ್ರಾಪಂ ಗಳ ಪಿಡಿಒಗಳು ನಿವೇಶನಕ್ಕೆ ಯಾರೇ ಅರ್ಜಿ ಸಲ್ಲಿಸಿದರೂ ಅದನ್ನು ಸ್ವೀಕರಿಸಬೇಕು. ಬೇರೆ ಗ್ರಾಮದವರು ಅರ್ಜಿ ಸಲ್ಲಿಸಿದರೂ ಅದನ್ನು ಸ್ವೀಕರಿಸಲೇಬೇಕು,ಸ್ವೀಕರಿಸದೇ ಇದ್ದಲ್ಲಿ ಅರ್ಜಿದಾರರು ನನ್ನ ಗಮನಕ್ಕೆ ತರಬೇಕು ಎಂದುಶಾಸಕರು ಸಭೆಯಲ್ಲಿ ತಿಳಿಸಿದರು.
ನಿವೇಶನ ಇಲ್ಲದವರು ಯಾರೂ ಇರಬಾರದು:
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಕುಟುಂಬಗಳಿಗೂ ಸ್ವಂತ ನಿವೇಶನ ಬೇಕು ಮತ್ತು ಒಂದು ಚಿಕ್ಕ ಮನೆಯಾದರೂ ಇರಬೇಕು ಎಂಬುದು ನನ್ನ ಕನಸು. ಚುನಾವಣೆಯ ಸಮಯದಲ್ಲಿ ನಾನು ಕೊಟ್ಟ ಮಾತನ್ನು ಪಾಲನೆ ಮಾಡಿಯೇ ಸಿದ್ದ ಇದಕ್ಕಾಗಿ ಪ್ರತೀ ಗ್ರಾಮದಲ್ಲಿರುವ ಸರಕಾರಿ ಜಾಗವನ್ನು ಗುರುತಿಸಿ ಅದನ್ನು ಸೈಟ್ ಮಾಡಿ ವಿತರಣೆ ಮಾಡಲಿದ್ದೇನೆ ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು.
ನಿಮ್ಮ ಭೂಮಿ ಸಕ್ರಮವಾಗಿದ್ದಲ್ಲಿ ಅಕ್ರಮ ಸಕ್ರಮದಲ್ಲಿ ಸಕ್ರಮ :
ನಿಮ್ಮ ಸ್ವಾಧೀನದಲ್ಲಿರುವ ಸರಕಾರಿ ಜಾಗ ನಿಮ್ಮದೇ ಸ್ವಾಧೀನದಲ್ಲಿ ಸಕ್ರಮವಾಗಿಯೇ ಇದ್ದಲ್ಲಿ ಅದನ್ನು ಅಕ್ರಮ ಸಕ್ರಮದಲ್ಲಿ ಸಕ್ರಮ ಮಾಡಿಕೊಡಲಾಗುವುದು ಎಂದು ಶಾಸಕರು ತಿಳಿಸಿದರು. ನಿಮ್ಮ ಭೂಮಿ ನಿಮಗೇ ಕೊಡಿಸ್ತೇನೆ, ಯಾರಿಗೂ ದುಡ್ಡು ಕೊಟ್ಟು ಅಕ್ರಮ ಸಕ್ರಮ ಮಾಡಿಸಿಕೊಳ್ಳಬೇಡಿ ,ಲಂಚಕ್ಕೆ ನಾನು ಬದ್ದ ವಿರೋಧಿಯಾಗಿದ್ದೇನೆ. ಎಲ್ಲರ 94 ಸಿ ,ಅಕ್ರಮ ಸಕ್ರಮವನ್ನು ಮಾಡಿಯೇ ಮಾಡುತ್ತೇನೆ ಯಾರೂ ಗಡಿಬಿಡಿ ಮಾಡುವುದು ಬೇಡ ಇನ್ನೂ ಕಾಲಮಿತಿ ಇದೆ. ಮುಂದಿನ ಚುನಾವಣೆಗೆ ಮೊದಲು ನಿಮ್ಮ ಕೆಲಸ ಮಾಡಿಯೇ ಮಾಡುತ್ತೇನೆ ಎಂದು ಶಾಸಕರು ಹೇಳಿದರು.
ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರ ಅಕ್ರಮ ಸಕ್ರಮ ಕೂಡಾ ಮಂಜೂರು ಮಾಡಿದ್ದು ನಾನು
ಈ ಹಿಂದೆ ಇಲ್ಲಿ ಬಿಜೆಪಿ ಶಾಸಕರುಗಳೇ ಹೆಚ್ಚು ಅಧಿಕಾರದಲ್ಲಿದ್ದರು ಆದರೆ ನಾನು ಶಾಸಕನಾದ ಮೇಲೆ ಅನೇಕ ಮಂದಿ ಬಿಜೆಪಿ ಕಾರ್ಯಕರ್ತರು, ಶಕ್ತಿ ಕೇಂದ್ರದ ಅಧ್ಯಕ್ಷರೂ, ಗ್ರಾಪಂ ಸದಸ್ಯರುಗಳು ನನ್ನ ಬಳಿ ಬಂದು ಅಕ್ರಮ ಸಕ್ರಮ ಮಂಜೂರು ಮಾಡಿಸಿಕೊಂಡು ಹೋಗಿದ್ದಾರೆ. ಅಭಿವೃದ್ದಿಯಲ್ಲಿ, ಸವಲತ್ತು ವಿತರಣೆಯಲ್ಲಿ ನಾನು ಯಾವುದೇ ರಾಜಕೀಯ ಮಾಡದೆ ರಾಜ ಧರ್ಮ ಪಾಲನೆ ಮಾಡಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಮುಂಡೂರು ಗ್ರಾಮದ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಶಾಸಕರಿದ್ದಾಗಲೂ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರ ಅಕ್ರಮ ಸಕ್ರಮ ಅರ್ಜಿಯನ್ನು ಯಾಕೆ ವಿಲೇವಾರಿ ಮಾಡಿಲ್ಲ ಎಂಬುದು ನನಗೆ ಗೊತ್ತಿಲ್ಲ, ನನ್ನ ಬಳಿ ಬಂದಾಗ ನಾನು ಅವರು ಬಿಜೆಪಿ ಎಂದು ನೋಡದೆ ಮಂಜೂರು ಮಾಡಿಸಿದ್ದೇನೆ. ಅನೇಕ ಮಂದಿ ಬಿಜೆಪಿ ಕಾರ್ಯಕರ್ತರು ಕೂಡಾ ಬಂದಿದ್ದಾರೆ ಯಾರನ್ನೂ ಹಿಂದಕ್ಕೆ ಕಳಿಸಿಲ್ಲ. 94 ಸಿ, 94 ಸಿ ಸಿ ಮಾಡಿಕೊಟ್ಟಿದ್ದೇನೆ. ಶಾಸಕನಾದ ಬಳಿಕ ನಾನು ಎಲ್ಲರಿಗೂ ಶಾಸಕ ಎಂಬುದನ್ನು ತೋರಿಸಿಕೊಟ್ಟ ತೃಪ್ತಿ ನನಗಿದೆ. ಅವರದ್ದೇ ಪಕ್ಷದ ಶಾಸಕರಿರುವ ಇತರೆ ಕ್ಷೇತ್ರದಲ್ಲಿ ಒಂದೇ ಒಂದು ಅಕ್ರಮ ಸಕ್ರಮ ಆಗಿಲ್ಲ. ಇತರೆ ಕ್ಷೇತ್ರದ ಜನರೂ ನನ್ನ ಕಚೇರಿಗೆ ಬಂದು ನೋವು ಹೇಳುತ್ತಿದ್ದಾರೆ ಎಂದು ಶಾಸಕರು ಹೇಳಿದರು.

ವೇದಿಕೆಯಲ್ಲಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಮುಂಡೂರು ವಲಯ ಅಧ್ಯಕ್ಷ ಪ್ರವೀಣ್ ಆಚಾರ್ಯ,ಬ್ಲಾಕ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಬ್ಲಾಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಎಸ್ ಟಿ ಬ್ಲಾಕ್ ಅಧ್ಯಕ್ಷ ಮಹಾಲಿಂಗ ನಾಯ್ಕ್,ಬ್ಲಾಕ್ ವಕ್ತಾರ ರವೀಂದ್ರ ನೆಕ್ಕಿಲು,ಬ್ಲಾಕ್ ಪ್ರ.ಕಾರ್ಯದರ್ಶಿ ಶರೂನ್ ಸಿಕ್ವೆರಾ ಸಾಮೆತ್ತಡ್ಕ ಉಪಸ್ಥಿತರಿದ್ದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ ಪ್ರ.ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ ವಂದಿಸಿದರು.