ಪುತ್ತೂರು: ಅನಾದಿ ಕಾಲದಿಂದಲೂ ಸಂಟ್ಯಾರ್ನ ಕಲ್ಲಕಟ್ಟ ಎಂಬ ಜಾಗದಲ್ಲಿ ನೆಲೆನಿಂತು, ಹತ್ತು ಹಲವು ಕಾರಣಿಕತೆಗಳ ಮೂಲಕ ನಂಬಿದ ಭಕ್ತರಿಗೆ ತನ್ನ ಅಭಯದ ನುಡಿಯ ಮೂಲಕ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮಹಾ ಕಾರಣಿಕ ದೈವವಾಗಿರುವ ಶ್ರೀ ರಾಜ ಗುಳಿಗ ದೈವದ ಕೋಲವು ಫೆ.23 ರಂದು ಸಂಟ್ಯಾರು ಕಲ್ಲಕಟ್ಟದಲ್ಲಿರುವ ಶ್ರೀ ರಾಜಗುಳಿಗ ದೈವದ ಸಾನಿಧ್ಯದಲ್ಲಿ ಜರಗಲಿದೆ.
ಬೆಳಿಗ್ಗೆ ಗಂಟೆ 8 ರಿಂದ ವೈಧಿಕ ಕಾರ್ಯಕ್ರಮಗಳು ನಡೆಯಲಿದ್ದು ಮೊದಲಿಗೆ ಗಣಹೋಮ, ಶುದ್ಧಕಲಶ, ತಂಬಿಲ ಸೇವೆ ಬಳಿಕ ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1.30 ಕ್ಕೆ ಸರಿಯಾಗಿ ಶ್ರೀ ರಾಜ ಗುಳಿಗ ದೈವದ ಕೋಲ ಆರಂಭವಾಗಲಿದೆ. ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿಯ ಅಧ್ಯಕ್ಷ ಕೆ.ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು, ಕಾರ್ಯದರ್ಶಿ ನವೀನ ಸಾಲ್ಯಾನ್ ಕಿನ್ನಿಮಜಲು ಹಾಗೂ ಸರ್ವ ಸದಸ್ಯರು ಹಾಗೂ ಊರಿನ ಹತ್ತು ಸಮಸ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರಣಿಕತೆ ಮೆರೆದ ದೈವ
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರಿನಿಂದ 7 ಕಿ.ಮೀ ದೂರದಲ್ಲಿದೆ ಸಂಟ್ಯಾರು. ಇಲ್ಲೇ ಪಕ್ಕದಲ್ಲೇ ಇದೆ ಈ ಕಲ್ಲಕಟ್ಟ ಪ್ರದೇಶ. ಆರ್ಯಾಪು, ಕುರಿಯ ಗ್ರಾಮಕ್ಕೆ ಸೇರಿದ ಈ ಪ್ರದೇಶದಲ್ಲಿ ನೆಲೆನಿಂತಿರುವ ಶ್ರೀ ರಾಜಗುಳಿಗ ದೈವವು ವಿಶೇಷ ಕಾರಣಿಕತೆಯನ್ನು ಮೆರೆದ ದೈವವಾಗಿದೆ. ಇಲ್ಲಿ ಬಂದು ಭಕ್ತಿಯಿಂದ ಬೇಡಿಕೊಂಡರೆ ತಮ್ಮ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ.