ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಹುಮುಖ ಪ್ರತಿಭೆ ಜ್ಞಾನ ರೈ ಕುರಿಯ ಅವರನ್ನು ವಿವಿಧೆಡೆ ಸನ್ಮಾನಿಸಿ ಗೌರವಿಸಲಾಗಿದೆ. ಪುತ್ತೂರು ತಾಲೂಕಿನ ಕುರಿಯ ಗ್ರಾಮದ ನಿವಾಸಿಯಾಗಿರುವ ಉದ್ಯಮಿ ಜಯರಾಮ ರೈ ಹಾಗೂ ಸುದ್ದಿ ನ್ಯೂಸ್ ಚಾನೆಲ್ ಪ್ರಧಾನ ನಿರೂಪಕಿ ಹೇಮಾ ಜಯರಾಮ್ ರೈ ದಂಪತಿಯ ಪುತ್ರಿಯಾಗಿರುವ ಜ್ಞಾನ ರೈ
ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಗೀತ, ನೃತ್ಯ, ಯೋಗ, ಕರಾಟೆ, ಅಭಿನಯ, ಚಿತ್ರಕಲೆ, ನಿರೂಪಣೆ ಮುಂತಾದ ವಿವಿಧ ಕಲಾ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ.

ಸಾಮಾಜಿಕ ಕಳಕಳಿ ಸಾರುವ ನಿಸ್ವಾರ್ಥ, ನಿರಾಕರಣ, ಗೇನದಾಂತಿ ಉಡಲ್ ಕಿರುಚಿತ್ರಗಳಲಿ ನಟಿಸಿ ಉತ್ತಮ ಬಾಲನಟಿ ಎಂದು ಹೆಗ್ಗಳಿಕೆಗೆ ಪಾತ್ರರಾಗಿರುವ ಇವರು ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಿರ್ದುದ ಕಂಬಳ ಹಾಗೂ ತೆಲುಗಿನ ಒಕ್ಕಟ್ಟೆ ಆಶಾ ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ಜಾಹೀರಾತಿನಲ್ಲಿ ರೂಪದರ್ಶಿಯಾಗಿಯೂ ಮಿಂಚಿರುವ ಇವರು ಹಲವಾರು ಆಲ್ಬಮ್ ಸಾಂಗ್ ಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
ರಾಜ್ಯ ಹಾಗೂ ಅಂತರ್ ರಾಜ್ಯ ಮಟ್ಟದ 500ಕ್ಕೂ ಅಧಿಕ ಧಾರ್ಮಿಕ, ಸಾಂಸ್ಕೃತಿಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವ ಇವರು ಶಿತೋರಿಯ ಸ್ಟೈಲ್ ಕರಾಟೆಯಲ್ಲಿ ಬ್ರೌನ್ ಬೆಲ್ಟ್ ಪಡೆದಿದ್ದಾರೆ. ಜೂನಿಯರ್ ಗ್ರೇಡ್ ಚಿತ್ರಕಲಾ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುವ ಜ್ಞಾನ ರೈ ಅವರು ಬುಲ್ ಬುಲ್ ನ ಗೋಲ್ಡನ್ ಆರೋ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಸ್ವೀಕರಿಸಲು ಕರ್ನಾಟಕದಿಂದ ಆಯ್ಕೆಯಾದ 50 ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಹಲವು ರಾಜ್ಯಮಟ್ಟದ ಭಾಷಣ ಸ್ಪರ್ಧೆಗಳಲ್ಲಿ ವಿಜೇತೆಯಾಗಿರುವ ಇವರು ದೈಜಿವಲ್ಡ್ ವಾಹಿನಿ ಆಯೋಜಿಸಿದ್ದ ಜೂನಿಯರ್ ಸೆಲೆಬ್ರಿಟಿ ರಿಯಾಲಿಟಿ ಶೋನಲ್ಲಿ ಸೆಮಿಫೈನಲ್ ಹಂತ ತಲುಪಿದ್ದರು. ಮಕ್ಕಳ ದಿನಾಚರಣೆಯ ಪ್ರಯುಕ್ತ ಸುದ್ದಿ ವಾಹಿನಿಯಲ್ಲಿ ನಿರರ್ಗಳವಾಗಿ ಸುದ್ದಿ ಓದುವ ಮೂಲಕ ಉತ್ತಮ ಸುದ್ದಿ ವಾಚಕಿಯಾಗಿ ಪ್ರಶಂಸೆಗೆ ಪಾತ್ರರಾಗಿದ್ದರು. ಕರೋನಾ ಸಮಯದಲ್ಲಿ ಹಲವಾರು ಸಂಘ ಸಂಸ್ಥೆಗಳು ಆನ್ಲೈನ್ ಮೂಲಕ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದ ಇವರು ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಫೋಟೋ ಸ್ಪರ್ಧೆಗಳಲ್ಲಿ ವಿಜೇತೆಯಾಗಿದ್ದಾರೆ. ಇವರು ವಿವಿಧ ಕಲಾ ಪ್ರಕಾರಗಳಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ಕೂಡ್ಲಿಗಿಯ ಶಶಿಧರ್ ಗುರೂಜಿ ಇವರಿಂದ ಧಾರ್ಮಿಕ ಪಠಣ, ನಿತ್ಯ ಶ್ಲೋಕಗಳು, ಭಗವದ್ಗೀತಾ ಪಠಣ, ಸಂಸ್ಕಾರ, ಗಾಂಧಾರಿ ವಿದ್ಯೆ, ಅಬಾಕಸ್ ಮುಂತಾದ ಶಿಕ್ಷಣ ಪಡೆದುಕೊಂಡಿದ್ದಾರೆ. ಭಗವದ್ಗೀತಾ ಪಠಣ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟವನ್ನು ಪ್ರತಿನಿಧಿಸಿದ್ದಾರೆ
ಪುತ್ತೂರಿನ ವೈಷ್ಣವಿ ನಾಟ್ಯಾಲಯದಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿರುವ ಇವರು ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಇವರ ಶಿಷ್ಯೆಯಾಗಿದ್ದು ಭರತನಾಟ್ಯ ಜೂನಿಯರ್ ಪರೀಕ್ಷೆ ಮುಗಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. 2024ರ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ಪಡೆದಿರುವ ಇವರ ಪ್ರತಿಭೆಯನ್ನು ಗುರುತಿಸಿ ಈಗಾಗಲೇ ವಿವಿಧ ಸಂಘ-ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಸ್ವಾಮಿ ವಿವೇಕಾನಂದ ಸದ್ಭಾವನ ಪ್ರಶಸ್ತಿ, ಸಿದ್ಧಗಂಗಾ ಶ್ರೀ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ, ವಿಶ್ವಧರ್ಮಿ ಬಸವಣ್ಣ ಪ್ರಶಸ್ತಿ, ಖಗೋಳ ವಿಜ್ಞಾನಿ ಆರ್ಯಭಟ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಅಕ್ಕಮಹಾದೇವಿ ಪ್ರಶಸ್ತಿ, ಗಮಕ ಗಾಯಕ ಗಾರುಡಿಗ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ, ವಿಜಯ ಸಂಕಲ್ಪ ಪ್ರಶಸ್ತಿ, ನಾಟ್ಯ ಮಯೂರಿ ಪ್ರಶಸ್ತಿ, ಪ್ರತಿಭಾ ರತ್ನ ಪ್ರಶಸ್ತಿ, ಪ್ರತಿಭಾ ಸಿರಿ ಪ್ರಶಸ್ತಿ, ಪ್ರತಿಭಾ ದೀಪ ಪ್ರಶಸ್ತಿ, ಕರುನಾಡ ತಾರೆ ಪ್ರಶಸ್ತಿ, ಕಲಾ ಚೈತನ್ಯ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ ಪ್ರಶಸ್ತಿ, ಗಡಿನಾಡ ರತ್ನ ಪ್ರಶಸ್ತಿ, ಕರುನಾಡ ಸಿರಿ ಪ್ರಶಸ್ತಿ, ರಾಜ್ಯ ವಿಭೂಷಣ ಪ್ರಶಸ್ತಿ, ವಿಜಯ ಸಂಕಲ್ಪ ಪ್ರಶಸ್ತಿ, ಕರ್ನಾಟಕ ನೃತ್ಯ ಶ್ರೀ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿರುವ ಜ್ಞಾನ ರೈ ಅವರು 2024ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನೀಡಲಾದ ದ.ಕ. ಜಿಲ್ಲಾ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ವಿವಿಧೆಡೆ ಸನ್ಮಾನಿಸಿ ಗೌರವಿಸಲಾಗಿದೆ.
ರುಡ್ ಸೆಟ್ ತರಬೇತುದಾರೆ ಮಾಧವಿ ಮತ್ತು ಉದ್ಯಮಿ ಮನೋಹರ್ ರೈ ಮೇಲ್ಮಜಲು ದಂಪತಿಯ ಮನೆಯಲ್ಲಿ ಆಸರೆ ಕುಟುಂಬದಿಂದ ನಡೆದ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ವತಿಯಿಂದ ಜರಗಿದ ಆರ್ಯಾಪು ಗ್ರಾಮ ಸಾಹಿತ್ಯ ಸರಣಿ ಕಾರ್ಯಕ್ರಮದಲ್ಲಿ, ಆರ್ಯಾಪು ಗ್ರಾಮ ಪಂಚಾಯತ್ ವತಿಯಿಂದ ಏರ್ಪಡಿಸಿದ ಮಹಿಳೆಯರ ವಿಶೇಷ ಗ್ರಾಮ ಸಭೆಯಲ್ಲಿ, ರೋಟರಿ ಕ್ಲಬ್ ಪುತ್ತೂರು ಇದರ ಸಭೆಯಲ್ಲಿ, ಬನ್ನೂರಿನ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಾರ್ಯಕ್ರಮದಲ್ಲಿ ಜ್ಞಾನ ರೈ ಅವರನ್ನು ಗಣ್ಯರ ಸಮುಖದಲ್ಲಿ ಸನ್ಮಾನಿಸಲಾಯಿತಲ್ಲದೆ ಪುತ್ತೂರು ತಾಲೂಕು ಮಟ್ಟದ ಸ್ಕೌಟ್ಸ್ ಮತ್ತು ಗೈಡ್ ಸಮಾವೇಶದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್. ಸಿಂಧ್ಯಾ ಸನ್ಮಾನಿಸಿದರು.