ಪುತ್ತೂರು: ನ್ಯಾಯಾಲಯದಲ್ಲಿ ದಾಖಲಾಗಿರುವ ಮತ್ತು ನ್ಯಾಯಾಲಯಕ್ಕೆ ದಾಖಲಾಗದೇ ಇರುವ ಪ್ರಕರಣಗಳನ್ನು (ವ್ಯಾಜ್ಯ ಪೂರ್ವ ಪ್ರಕರಣಗಳು) ಮಾ.8ರಂದು ಪುತ್ತೂರಿನ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಆದೇಶಿಸಲಾಯಿತು. ಒಟ್ಟು 1177 ಪ್ರಕರಣಗಳ ಪೈಕಿ 603 ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿ ಫಲಾನುಭವಿಗಳಿಗೆ ರೂ. 3,77,62,275 ಪರಿಹಾರ ಮೊತ್ತವನ್ನು ವಿತರಿಸಲು ಆದೇಶಿಸಲಾಗಿದೆ.

ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವ, ಜನನ ಮರಣ ನೋಂದಾವಣೆ ಸಹಿತ ಚೆಕ್ ಬೌನ್ಸ್, ವಿಮಾ ಹಣದ ಪ್ರಕರಣ, ಬ್ಯಾಂಕ್ ಹಾಗೂ ಇತರ ಕಂಪನಿಗಳೊಂದಿಗೆ ಇರುವ ವ್ಯಾಜ್ಯಗಳಲ್ಲಿ ಕಕ್ಷಿದಾರರು ಒಪ್ಪಿಕೊಳ್ಳುವ ರೀತಿಯಲ್ಲಿ ಇತ್ಯರ್ಥ ಮಾಡುವ ಪ್ರಯತ್ನ ನಡೆಯಿತು. ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಸರಿತಾ ಡಿ. ಅವರು ನಡೆಸಿದ ಅದಾಲತ್ನಲ್ಲಿ 36 ಪ್ರಕರಣಗಳ ಪೈಕಿ 13 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದು ರೂ.50,71,000 ಪರಿಹಾರ ವಿತರಣೆಗೆ ಆದೇಶ ಆಗಿದೆ.
ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶೆ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಪ್ರಿಯ ರವಿ ಜೋಗಲೇಕರ್ ಅವರಿದ್ದ ನ್ಯಾಯಾಲಯದಲ್ಲಿ 257 ಪ್ರಕರಣಗಳಲ್ಲಿ 202 ಇತ್ಯರ್ಥಗೊಂಡಿದ್ದು ರೂ.79,15,600 ಪರಿಹಾರ ವಿತರಣೆಗೆ ಆದೇಶ ಆಗಿದೆ. ಅಪರ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಮತ್ತು ಜೆಎಮ್ಎಫ್ ಸಿಯೂ ಆಗಿರುವ ದೇವರಾಜ್ ವೈ ಹೆಚ್. ಅವರಿದ್ದ ನ್ಯಾಯಾಲಯದಲ್ಲಿ 150 ಪ್ರಕರಣಗಳಲ್ಲಿ 129 ಪ್ರಕರಣ ಇತ್ಯರ್ಥಗೊಂಡಿದ್ದು, ರೂ.66,96,600 ವಿತರಣೆಗೆ ಆದೇಶ ಆಗಿದೆ. ಪ್ರಧಾನ ಸಿವಿಲ್ ನ್ಯಾಯಾಲಯ, ಜೆಎಮ್ಎಫ್ ಸಿ ನ್ಯಾಯಾಧೀಶೆ ಅರ್ಚನಾ ಕೆ. ಉನ್ನಿತಾನ್ ಅವರಿದ್ದ ನ್ಯಾಯಾಲಯದಲ್ಲಿ 287 ಪ್ರಕರಣಗಳಲ್ಲಿ 52 ಪ್ರಕರಣಗಳು ಇತ್ಯರ್ಥಗೊಂಡಿದ್ದು ರೂ.1,77,10,425 ವಿತರಣೆಗೆ ಆದೇಶ ಆಗಿದೆ.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮತ್ತು ಜೆಎಮ್ಎಫ್ ಸಿ ಶಿವಣ್ಣ ಹೆಚ್.ಆರ್ ಅವರಿದ್ದ ನ್ಯಾಯಾಲಯದಲ್ಲಿ 271 ಪ್ರಕರಣಗಳಲ್ಲಿ 108 ಇತ್ಯರ್ಥಗೊಂಡಿದ್ದು, ರೂ.6,350 ವಿತರಣೆಗೆ ಆದೇಶ ಆಗಿದೆ. 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮತ್ತು ಜೆಎಮ್ಎಫ್ ಸಿ ಯೋಗೇಂದ್ರ ಶೆಟ್ಟಿ ಅವರಿದ್ದ ನ್ಯಾಯಾಲಯದಲ್ಲಿ 176 ಪ್ರಕರಣಗಳಲ್ಲಿ 99 ಪ್ರಕರಣ ಇತ್ಯರ್ಥಗೊಂಡಿದ್ದು, ರೂ.3,62,300ವಿತರಣೆಗೆ ಆದೇಶ ಆಗಿದೆ.
ಪ್ರಕರಣಗಳ ಇತ್ಯರ್ಥಕ್ಕೆ ಸಂಧಾನಕಾರರಾಗಿ ನ್ಯಾಯವಾದಿಗಳಾದ ಕೃಷ್ಣಪ್ರಸಾದ್ ಎನ್. ಅಶ್ವಿತ್ ಕೆ., ವೆಂಕಟೇಶ್ ಸಿ.ಎಸ್, ಭವ್ಯ ರೈ, ಹರಿಣಿ, ಶ್ರುತಿ ಸಹಕರಿಸಿದರು. ಸದ್ರಿ ವ್ಯಾಜ್ಯಗಳಲ್ಲಿ ಸಂಧಾನಕಾರ ವಕೀಲರನ್ನು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಅವರು ನೇಮಕ ಮಾಡಿದ್ದರು.