ಪುತ್ತೂರು: ನೆಟ್ಟಣಿಗೆಮುಡ್ನೂರು ಗ್ರಾಮದ ಸರ್ವೆ ನಂಬ್ರ 313/2ರಲ್ಲಿನ ಕೃಷಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಸೊತ್ತುಗಳನ್ನು ಕಳವು ಮಾಡಿದ್ದಲ್ಲದೆ ಕೃಷಿ ಹಾನಿ ಮಾಡಿರುವ ಪ್ರಕರಣದಲ್ಲಿ ೯ ಮಂದಿ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನೆಟ್ಟಣಿಗೆಮುಡ್ನೂರು ಕುಕ್ಕುಡೆಲು ನಿವಾಸಿ ತೇಜಸ್ವಿನಿ ಅವರು ಈ ಕುರಿತು ದೂರು ನೀಡಿದ್ದರು.‘ನೆಟ್ಟಣಿಗೆಮುಡ್ನೂರಿನಲ್ಲಿ ನಮಗೆ ೩.೬೦ ಎಕ್ರೆ ಅಡಿಕೆ ತೋಟವಿದ್ದು, ಮಾ.೧೨ರಂದು ಆರೋಪಿಗಳಾದ ಶಶಿಧರ ಪೂಜಾರಿ, ಅಶೋಕ್ ಪೂಜಾರಿ, ಕೃಷ್ಣಪ್ಪ ಪೂಜಾರಿ, ಪ್ರವೀಣ್ ಪೂಜಾರಿ, ಪುಷ್ಪರಾಜ್, ಸಾವಿತ್ರಿ, ಉಷಾ, ಚಂದ್ರಾವತಿ, ಬಾಬು ಪೂಜಾರಿ, ಕೆ.ರಾಧಾಕೃಷ್ಣ ಭಂಡಾರಿ ಮತ್ತು ಇತರರು ಸೇರಿಕೊಂಡು ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ, ಜಮೀನಿಗೆ ಅಳವಡಿಸಿದ್ದ ಗೇಟ್ ಬದಿಯ ಪಿಲ್ಲರ್ಗಳನ್ನು ಧ್ವಂಸಗೊಳಿಸಿ, ಗೇಟನ್ನು ಕಳವು ಮಾಡಿದ್ದಾರೆ. ಕೃಷಿಯನ್ನು ನಾಶ ಮಾಡಿದ್ದಾರೆ.ಶೆಡ್ನಲ್ಲಿದ್ದ ಪಂಪ್, ಕಳೆಕೊಚ್ಚುವ ಯಂತ್ರ, ಪಿವಿಸಿ ಪೈಪ್, ಡ್ರಿಪ್ ಪೈಪ್, ಹಾರೆ, ಪಿಕ್ಕಾಸು, ಕತ್ತಿ, ಮದ್ದು ಸಿಂಪಡಿಸುವ ಯಂತ್ರ ಮತ್ತು ೧೦೦ ಮೀಟರ್ ಪೈಪ್ ಹಾಗು ೨೫ ಕೆ.ಜಿ ಸಿಮೆಂಟ್, ನೀರಿನ ಸ್ಟೀಲ್ ಕ್ಯಾನ್ ಕಳವು ಮಾಡಿದ್ದಾರೆ.ವಿಷಯ ತಿಳಿದು ನಾನು ಗಂಡನೊಂದಿಗೆ ಅಲ್ಲಿಗೆ ಜೀಪಿನಲ್ಲಿ ಬಂದಾಗ ಆರೋಪಿಗಳು ಎರಡು ಆಟೋ ರಿಕ್ಷಾ, ಮೂರು ಬೈಕ್ ಮತ್ತು ಇತರ ವಾಹನಗಳಲ್ಲಿ ಪರಾರಿಯಾಗಿದ್ದಾರೆ. ಆರೋಪಿಗಳ ಪೈಕಿ ಶಶಿಧರ ಪೂಜಾರಿ ನಮಗೆ ಜೀವ ಬೆದರಿಕೆಯೊಡ್ಡಿರುವುದಾಗಿ ಮತ್ತು ಒಟ್ಟು ಘಟನೆಯಿಂದಾಗಿ ನಮಗೆ ಸುಮಾರು ರೂ.೧ ಲಕ್ಷ ನಷ್ಟವಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದರು.
ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಶಶಿಧರ ಪೂಜಾರಿ, ಅಶೋಕ್, ಕೃಷ್ಣಪ್ಪ,ಪ್ರವೀಣ್, ಪುಷ್ಪರಾಜ್, ಸಾವಿತ್ರಿ, ಉಷಾಲತಾ, ಚಂದ್ರಾವತಿ ಮತ್ತು ಬಾಬು ಪೂಜಾರಿಯವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ವಕೀಲ ಮಹೇಶ್ ಕಜೆ ಅವರು ವಾದಿಸಿದ್ದರು.