ಹಾಸನ ಮೂಲದ ಮೂವರ ಬಂಧನ -ವಾಹನ, ಜಾನುವಾರು ವಶ
ಪುತ್ತೂರು: ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವೊಂದರಲ್ಲಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ, ಈ ಸಂಬಂಧ ಹಾಸನ ಮೂಲದ ಮೂವರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸುತ್ತಿದ್ದ ವಾಹನ ಹಾಗೂ ಜಾನುವಾರು ವಶಪಡಿಸಿಕೊಂಡಿರುವ ಘಟನೆ 34ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ನಲ್ಲಿ ನಡೆದಿದೆ.
ಹಾಸನ ತಾಲೂಕು ಸಾಲಗಾಮೆ ಹೋಬಳಿ ನಿವಾಸಿಗಳಾದ ಪ್ರತಾಪ್ ಎಸ್.ಎಂ.(28ವ.), ಪವನ್ ಸಿ.(24ವ.), ಶ್ರೇಯಸ್ ಹೆಚ್.ವಿ.(24ವ.) ಆರೋಪಿಗಳಾಗಿದ್ದಾರೆ. ಮಾ.25ರಂದು ಸಂಜೆ ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಮನಿಶಾ ಎಂ., ಅವಿನಾಶ್ ಹೆಚ್. ಹಾಗೂ ಸಿಬ್ಬಂದಿಗಳು ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯ ನಿರ್ವಹಿಸಿದ ಬಳಿಕ 34ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ನೆಲ್ಯಾಡಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಹೋಗುತ್ತಿದ್ದ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ(ಕೆಎ18, ಬಿ4928)ವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಸದ್ರಿ ವಾಹನದಲ್ಲಿ ಎರಡು ಎಮ್ಮೆ ಹಾಗೂ ಒಂದು ಹಸುವನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಾಹನದಲ್ಲಿ ಮೂವರು ಆರೋಪಿಗಳನ್ನು, ಮೂರು ಜಾನುವಾರು ಹಾಗೂ ವಾಹನ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಜಾನುವಾರುಗಳ ಮೌಲ್ಯ ಒಟ್ಟು 42 ಸಾವಿರ ರೂ.,ಹಾಗೂ ವಾಹನದ ಮೌಲ್ಯ 1.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.