ಪುತ್ತೂರು: ದಕ್ಷಿಣ ಕಾಶಿ ಎಂದೇ ಪ್ರಸಿದ್ದಿಪಡೆದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಭೂಮಿ ಖರೀದಿ ಪ್ರಕ್ರಿಯೆಗೆ ಕಂದಾಯ ಇಲಾಖೆಯಿಂದ ಶೀಘ್ರ ಅನುಮತಿ ಮಂಜೂರಾಗಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ತಿಳಿಸಿದರು.
ಇಂದು ಬೆಂಗಳೂರಿನಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದ ದ.ಕ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕೇಂದ್ರವಾಗಿರುವ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ನೀಲಿ ನಕಾಶೆ ಸಿದ್ದಪಡಿಸಲಾಗಿದ್ದು ಸರಕಾರದಿಂದ ಅನುದಾನದ ಭರವಸೆ ದೊರೆತಿದೆ. ಈ ಕ್ಷೇತ್ರವನ್ನು ಪವಾಸೋಧ್ಯಮ ಕೇಂದ್ರವನ್ನಾಗಿ ರೂಪಿಸುವುದರ ಜೊತೆಗೆ ದೇವಳಕ್ಕೆ ಭೇಟಿ ನೀಡುವ ಯಾತ್ರಿಕರಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸುವ ಹೊಸ ಯೋಜನೆ ಇಲ್ಲಿ ವ್ಯವಸ್ಥಿತವಾಗಿ ರೂಪುಗೊಳ್ಳಲಿದೆ. ಕೂಡಲ ಸಂಗಮ ಮಾದರಿಯಲ್ಲಿ ಕ್ಷೇತ್ರ ಅಭಿವೃದ್ದಿಯಾಗಲಿದೆ. ಸಂಗಮ ಪ್ರದೇಶದಲ್ಲಿ ವೆಂಟಡ್ ಡ್ಯಾಂ ಕೂಡಾ ನಿರ್ಮಾಣವಾಗಲಿದೆ. ಇದಕ್ಕಾಗಿ ಕ್ಷೇತ್ರಕ್ಕೆ ಜಾಗವನ್ನು ಖರೀದಿ ಮಾಡಬೇಕಾದ ಅವಶ್ಯಕತೆ ಇದ್ದು ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾತಿ ದೊರಕಿದ್ದು ಇನ್ನು ಕಂದಾಯ ಇಲಾಖೆಯಿಂದ ಅನುಮತಿ ದೊರಕಿದರೆ ಜಾಗವನ್ನು ಖರೀದಿ ಮಾಡುವ ಪ್ರಕ್ರಿಯೆ ಪೂರ್ಣಗೊಂಡಂತಾಗುತ್ತದೆ ಎಂದು ಶಾಸಕರು ತಿಳಿಸಿದರು.

ಕಂದಾಯ ಇಲಾಖೆಯ ಕಮಿಷನರ್ ಭೇಟಿ:
ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆಯ ಕಮಿಷನರ್ ಪೊಮ್ಮಲ ಸುನಿಲ್ ಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಅಕ್ರಮ ಸಕ್ರಮ, 94ಸಿ,94 ಸಿಸಿ ಹಕ್ಕು ಪತ್ರ ಮಂಜೂರಾತಿಯಲ್ಲಿ ಇರುವ ಲೋಪದೋಷಗಳ ಬಗ್ಗೆ ಚರ್ಚೆ ನಡೆಸಿದರು. ಕಳೆದ ವಿಧಾನ ಸಭಾ ಅಧಿವೇಶನದಲ್ಲಿ ಅಕ್ರಮ ಸಕ್ರಮ ದಲ್ಲಿ ವಿಲೇವಾರಿಯಾಗಿರುವ ಕಡತಗಳು ಮಂಜೂರಾತಿಗೊಂಡಿದ್ದರೂ ಇನ್ನೂ ಹಕ್ಕು ಪತ್ರ ವಿತರಣೆಯಾಗದೇ ಇರುವುದನ್ನು ಸರಕಾರದ ಗಮನಕ್ಕೆ ತಂದಿದ್ದರು. ಈ ವಿಚಾರದ ಬಗ್ಗೆ ಚರ್ಚಿಸಿ ತಕ್ಷಣ ಇದರಲ್ಲಿನ ಲೋಪದೋಷಗಳನ್ನು ನಿವಾರಣೆ ಮಾಡಲು ಸೂಚಿಸಿದರು. ಶಾಸಕರ ಮನವಿಗೆ ಇಲಾಖೆಯ ಅಧಿಕಾರಿಗಳು ಸ್ಪಂದನೆ ನೀಡಿದ್ದಾರೆ.