ಡಾ|ಎಂ.ಎನ್.ರಾಜೇಂದ್ರ ಕುಮಾರ್, ಸದಾಶಿವ ಶೆಟ್ಟಿ ಕನ್ಯಾನ, ರೋಹನ್ ಮೊಂತೆರೋರವರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್

0

ಮಂಗಳೂರು:ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಎಸ್‌ಸಿಆರ್ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ‘ಸಹಕಾರ ರತ್ನ’ ಡಾ|ಎಂ.ಎನ್.ರಾಜೇಂದ್ರಕುಮಾರ್, ಉದ್ಯಮಿ ಹೇರಂಭ ಇಂಡಸ್ಟ್ರೀಸ್‌ನ ಸ್ಥಾಪಕ ಸದಾಶಿವ ಶೆಟ್ಟಿ ಕನ್ಯಾನ ಹಾಗೂ ರೋಹನ್ ಮೊಂತೆರೋ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆಯಾಗಿದ್ದಾರೆ.ಸಾಧಕತ್ರಯರನ್ನು ಸಮಾಜ ಸೇವಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.‌


ಮಾ.29ರಂದು ಬೆಳಿಗ್ಗೆ 11 ಗಂಟೆಗೆ ವಿವಿ ಆವರಣದ ಮಂಗಳ ಸಭಾಂಗಣದಲ್ಲಿ ನಡೆಯುವ ಮಂಗಳೂರು ವಿವಿ 43ನೇ ಘಟಿಕೋತ್ಸವದಲ್ಲಿ ಕುಲಾಧಿಪತಿಯಾಗಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.ಮುಂಬೈ ಸೋಮಿಯಾ ವಿದ್ಯಾವಿಹಾರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ|ವಿ.ಎನ್.ರಾಜಶೇಖರನ್ ಪಿಳ್ಳೈ ಘಟಿಕೋತ್ಸವ ಭಾಷಣ ಮಾಡುವರು.ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಉಪಸ್ಥಿತರಿರುವರು ಎಂದು ವಿವಿ ಕುಲಪತಿ ಪ್ರೊ|ಪಿ.ಎಲ್.ಧರ್ಮ ಹೇಳಿದರು.


ಡಾ|ಎಂ.ಎನ್.ಆರ್.ಅವರಿಗೆ 2ನೇ ಗೌರವ ಡಾಕ್ಟರೇಟ್:
ಸಹಕಾರರತ್ನ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ದೊರೆಯುತ್ತಿರುವುದು ಎರಡನೇ ಗೌರವ ಡಾಕ್ಟರೇಟ್ ಪದವಿಯಿದು.ಈ ಹಿಂದೆ 2013ರಲ್ಲಿ ಶ್ರೀಲಂಕಾದ ಕೊಲಂಬೋ ಮುಕ್ತ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು.


ಸಹಕಾರ,ಸಾಮಾಜಿಕ,ಬ್ಯಾಂಕಿಂಗ್,ಧಾರ್ಮಿಕ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧಕರಾಗಿ, ನವೋದಯ ಸ್ವ ಸಹಾಯ ಸಂಘಗಳ ಹರಿಕಾರರಾಗಿ ಅಪೂರ್ವ ಪರಂಪರೆಯನ್ನು ರೂಪಿಸಿದ ರಾಜೇಂದ್ರ ಕುಮಾರ್ ರಾಜ್ಯದ ಧಿಮಂತ ಸಹಕಾರಿ ನಾಯಕರಲ್ಲಿ ಒಬ್ಬರು.ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರೂ ಆಗಿರುವ ಅವರು ಸಹಕಾರಿ ಬ್ಯಾಂಕಿಂಗ್ ಹಾಗೂ ಸಾಮಾಜಿಕ ರಂಗದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದ್ದಾರೆ.ಅವರ ಸಾಮಾಜಿಕ ಸ್ಪಂದನೆಯ ಕಾರ್ಯಗಳನ್ನು ಪರಿಗಣಿಸಿ ಇವರಿಗೆ ಹಲವಾರು ರಾಷ್ಟ್ರೀಯ – ಅಂತರರಾಷ್ಟೀಯ ಪ್ರಶಸ್ತಿಗಳು ಲಭಿಸಿವೆ.


ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಳೆದ 31 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರು ಈ ಬ್ಯಾಂಕ್‌ನ್ನು ಅತ್ಯುನ್ನತ ಮಟ್ಟಕ್ಕೇರಿಸಿದ್ದಾರೆ.ಕೋರ್ ಬ್ಯಾಂಕಿಂಗ್‌ನಂತಹ ಉತ್ಕೃಷ್ಟ ತಂತ್ರಜ್ಞಾನವನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿದ ಶ್ರೇಯಸ್ಸು ರಾಜೇಂದ್ರ ಕುಮಾರ್ ಅವರದ್ದು.ಸುಸಜ್ಜಿತ ವಾಹನದಲ್ಲಿ ಮೊಬೈಲ್ ಬ್ಯಾಂಕ್ ಸೇವೆಯನ್ನು ರಾಜ್ಯದ ಸಹಕಾರಿ ರಂಗದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಹೆಗ್ಗಳಿಕೆಯೂ ಇವರದ್ದು.ನವೋದಯ ಸ್ವ ಸಹಾಯ ಸಂಘಗಳ ಹರಿಕಾರರಾಗಿ ಅಪೂರ್ವ ಪರಂಪರೆಯನ್ನು ರೂಪಿಸಿದ ಅವರು ಮುಖ್ಯವಾಗಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಆರ್ಥಿಕ ಚೈತನ್ಯವನ್ನು ತುಂಬಿದ್ದಾರೆ.


ಕರ್ನಾಟಕ ಸರಕಾರದಿಂದ ‘ಸಹಕಾರ ರತ್ನ’,‘ಸಹಕಾರ ವಿಶ್ವ ಬಂಧು ಶ್ರೀ’,‘ಮದರ್ ತೆರೆಸಾ ಸದ್ಭಾವನಾ ಪ್ರಶಸ್ತಿ’,‘ಮಹಾತ್ಮಾ ಗಾಂಧಿ ಸಮ್ಮಾನ್ ಪ್ರಶಸ್ತಿ’,‘ಬೆಸ್ಟ್ ಚೇರ್‌ಮೆನ್ ನ್ಯಾಷನಲ್ ಎವಾರ್ಡ್’,‘ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್’,‘ಔಟ್‌ಸ್ಟೆಂಡಿಂಗ್ ಗ್ಲೋಬಲ್ ಲೀಡರ್‌ಶಿಪ್ ಅವಾರ್ಡ್’,ಬಹು ಪ್ರಭಾವಶಾಲಿ ಸಹಕಾರ ನಾಯಕ ಪ್ರಶಸ್ತಿ, ಅಂತರ್ರಾಷ್ಟ್ರೀಯ ಶ್ರೇಷ್ಠ ನಾಯಕತ್ವ ಅವಾರ್ಡ್, ಅಂತರ್ರಾಷ್ಟ್ರೀಯ ಸಾಧಕ ಪ್ರಶಸ್ತಿ, ಮದರ್ ತೆರೆಸಾ ಮೆಮೋರಿಯಲ್ ನ್ಯಾಶನಲ್ ಅವಾರ್ಡ್ ಹಾಗೂ ಏಶ್ಯಾನೆಟ್ ಸುವರ್ಣ ನ್ಯೂಸ್ ಚಾನೆಲ್‌ನಿಂದ ‘ಉಜ್ವಲ ಉದ್ಯಮಿ’ ಪ್ರಶಸ್ತಿ ಹೀಗೆ ಹಲವಾರು ರಾಷ್ಟೀಯ, ಅಂತರ್ರಾಷ್ಟ್ರೀಯ ಪ್ರಶಸ್ತಿಗಳು ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಸಂದಿವೆ.ಇವರು ಬ್ಯಾಂಕಿನ ಅಧ್ಯಕ್ಷರಾದ ಬಳಿಕ ಎಸ್‌ಸಿಡಿಸಿಸಿ ಬ್ಯಾಂಕಿಗೆ 22 ಬಾರಿ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಹಾಗೂ 19 ಬಾರಿ ನಬಾರ್ಡ್ ಪ್ರಶಸ್ತಿ, 3 ಬಾರಿ ಬ್ಯಾಂಕಿಂಗ್ ಪ್ರೊಂಟಿಯರ್ಸ್ ಪ್ರಶಸ್ತಿ ಹಾಗೂ 4 ಬಾರಿ ಎಪಿವೈ ರಾಷ್ಟೀಯ ಪ್ರಶಸ್ತಿಯೂ ಲಭಿಸಿದೆ.

LEAVE A REPLY

Please enter your comment!
Please enter your name here