ವಿಟ್ಲ: ಪ್ರಬುದ್ಧ ರಂಗ ಕಲಾವಿದ ವಿಟ್ಲ ಸಮೀಪದ ಕೂಡೂರು ಸೇರಾಜೆ ನಿವಾಸಿ ಸುರೇಶ ವಿಟ್ಲ(45 ವ.) ರವರು ಎ.6ರಂದು ನಿಧನರಾದರು.
ಅವರು ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು ಎಂದು ತಿಳಿದು ಬಂದಿದೆ.
ಸುರೇಶ್ ವಿಟ್ಲರವರು ಕಳೆದ ಸುಮಾರು ಎರಡು ದಶಕಗಳಿಂದ ತುಳು ರಂಗಭೂಮಿಯಲ್ಲಿ ಯಶಸ್ವೀ ಕಲಾವಿದನಾಗಿ ಗುರುತಿಸಿಕೊಂಡಿದ್ದರು. ಜಿಲ್ಲೆಯಾದ್ಯಂತ ಸಾವಿರಾರು ತುಳು ನಾಟಕಗಳಲ್ಲಿ ಪ್ರಮುಖ ಪಾತ್ರಗಳಿಗೆ ಜೀವ ನೀಡಿದ್ದರು. ಐವತ್ತಕ್ಕೂ ಹೆಚ್ಚು ಪ್ರಶಸ್ತಿಗಳನ್ನೂ ಪಡೆದಿದ್ದ ಸುರೇಶ್ ವಿಟ್ಲ ಓರ್ವ ಪ್ರಬುದ್ಧ ರಂಗ ಕಲಾವಿದರಾಗಿದ್ದರು. ಪ್ರಸ್ತುತ ಅವರು ಶಾರದಾ ಕಲಾ ಆರ್ಟ್ಸ್ ತಂಡದಲ್ಲಿ ಕಲಾವಿದರಾಗಿದ್ದರು. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.