ಯೂಸುಫ್ ಹಾಜಿ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ-ಗಣ್ಯರ ಅಭಿಮತ
ಪುತ್ತೂರು: ಇತ್ತೀಚೆಗೆ ನಿಧನ ಹೊಂದಿದ ಕಾಂಗ್ರೆಸ್ ಹಿರಿಯ ಮುಖಂಡ, ಉದ್ಯಮಿ ಯೂಸುಫ್ ಹಾಜಿ ಕಣ್ಣೂರು(ತಿಂಗಳಾಡಿ) ಅವರ ಶ್ರದ್ಧಾಂಜಲಿ ಸಭೆ ಎ.15ರಂದು ಕೆದಂಬಾಡಿ ವಲಯ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಮನೋಹರ್ ರೈ ಎಂಡೆಸಾಗು ನಿವಾಸದಲ್ಲಿ ನಡೆಯಿತು.
ಹಿರಿಯ ಕಾಂಗ್ರೆಸ್ ಮುಖಂಡ ಬೋಳೋಡಿ ಚಂದ್ರಹಾಸ ರೈ ಮಾತನಾಡಿ ಯೂಸುಫ್ ಹಾಜಿ ಕಣ್ಣೂರು ಅವರು ಒಳ್ಳೆಯ ವ್ಯಕ್ತಿತ್ವ ಹೊಂದಿದವರಾಗಿದ್ದು ಕಾಂಗ್ರೆಸ್ ಪಕ್ಷದ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದ್ದರು. ಹಿಂದೆ ಸಹಕಾರಿ ಸಂಘದ ಚುನಾವಣೆಗೆ ನಿಲ್ಲಲು ಜನ ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿ ಯೂಸುಫ್ ಹಾಜಿ ಮತ್ತು ನಾನು ಪ್ರಥಮವಾಗಿ ನಾಮಿನೇಷನ್ ಸಲ್ಲಿಸಿದ್ದು ನಮ್ಮ ತಂಡಕ್ಕೆ ಭರ್ಜರಿ ಬಹುಮತ ಬಂದಿತ್ತು. ಆ ಸಂದರ್ಭದಲ್ಲಿ ಯೂಸುಫ್ ಹಾಜಿ ಕಣ್ಣೂರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು ಎಂದು ಹೇಳಿದರು. ಎಲ್ಲರೊಂದಿಗೆ ಉತ್ತಮವಾಗಿ ಬೆರೆಯುತ್ತಿದ್ದ ಯೂಸುಫ್ ಹಾಜಿಯವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು.

ಕೆದಂಬಾಡಿ ವಲಯ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಮನೋಹರ್ ರೈ ಎಂಡೆಸಾಗು ಮಾತನಾಡಿ ನಾನು ಕಳೆದ 15 ವರ್ಷಗಳಿಂದ ಪಕ್ಷದ ಅಧ್ಯಕ್ಷ ಆಗಿದ್ದಾಗ ನನಗೆ ನಿಕಟ ಸಂಪರ್ಕದಲ್ಲಿದ್ದ ಯೂಸುಫ್ ಹಾಜಿಯವರು ಎಲ್ಲ ವಿಧದಲ್ಲೂ ಸಹಕಾರ ನೀಡುತ್ತಿದ್ದರು. ಪಕ್ಷಕ್ಕಾಗಿ ಹಲವು ವರ್ಷ ದುಡಿದಿದ್ದ ಅವರು ಕೆಯ್ಯೂರು-ಕೆದಂಬಾಡಿ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಎಂದು ಹೇಳಿದರು. ಯೂಸುಫ್ ಹಾಜಿಯವರ ಪುತ್ರ ಹಬೀಬ್ ನನ್ನ ಗರಡಿಯಲ್ಲಿ ಬೆಳೆದವನಾಗಿದ್ದು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ತಂದೆಯ ಹೆಸರನ್ನು ಉಳಿಸುವ ಕೆಲಸ ಇವರು ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಾತನಾಡಿ ನಾನು ಬ್ಲಾಕ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಯೂಸುಫ್ ಹಾಜಿಯವರ ಮಗ ಬ್ಲಾಕ್ ಕಾರ್ಯದರ್ಶಿಯಾಗಿದ್ದರು. ನಾನು ಕೆದಂಬಾಡಿಗೆ ಹೋದಾಗ ಮಾತನಾಡುತ್ತಿದ್ದೆ, ಅವರ ಮಾತಿನ ಶೈಲಿ, ಗುಣ ನಡತೆ ನನಗೆ ಇಷ್ಟ ಆಗಿತ್ತು. ಕಣ್ಣೂರು ಅಂದರೆ ಪ್ರತಿಷ್ಠಿತ ಕುಟುಂಬದವರು, ಒಟ್ಟಿನಲ್ಲಿ ಸರಳ ಸಜ್ಜನಿಕೆಯ, ಧಾರ್ಮಿಕ ರಾಜಕೀಯ ಸಾಮಾಜಿಕ ಮುಖಂಡನನ್ನು ನಾವು ಕಳೆದುಕೊಂಡಿದ್ದೇವೆ, ಇದು ನಮಗೆ ನಷ್ಟ ಎಂದು ಹೇಳಿದರು.
ಆರ್.ಐ.ಸಿ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ದಿ.ಯೂಸುಫ್ ಹಾಜಿಯವರು ಬಹಳ ಬೇಗನೇ ನಮ್ಮನ್ನಗಲಿರುವುದು ನಮಗೆಲ್ಲಾ ಅತೀವ ನಷ್ಟವಾಗಿದೆ, ಅಗಲಿದ ಅವರನ್ನು ನೆನಪಿಸುವ ಕಾರ್ಯ ಮಾಡಲು ನೇತೃತ್ವ ವಹಿಸಿರುವ ಮನೋಹರ್ ರೈ ನಿಜಕ್ಕೂ ಮಾದರಿಯಾಗಿದ್ದಾರೆ ಎಂದು ಹೇಳಿದರು. ಯೂಸುಫ್ ಹಾಜಿಯವರ ಮಕ್ಕಳು ಸಮಾಜದಲ್ಲಿ ಗುರುತಿಸಿಕೊಳ್ಳುವ ಮೂಲಕ ತಂದೆಯ ಮಾರ್ಗದರ್ಶನವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ಅವರು ಹೇಳಿದರು. ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಕುಮಾರ್, ಮೌರಿಸ್ ಮಸ್ಕರೇನ್ಹಸ್, ತಿಂಗಳಾಡಿ ಮಸೀದಿ ಅಧ್ಯಕ್ಷ ಸಿದ್ದಿಕ್ ತಿಂಗಳಾಡಿ ಸಮಯೋಚಿತವಾಗಿ ಮಾತನಾಡಿದರು.
ದಿ.ಯೂಸುಫ್ ಹಾಜಿ ಕಣ್ಣೂರು ಅವರ ಪುತ್ರ ಹಬೀಬ್ ಕಣ್ಣೂರು ಮಾತನಾಡಿ, ನಮ್ಮ ತಂದೆ ನಮ್ಮನ್ನಗಲಿದ್ದು ಅವರು ನಮಗೆ ಎಲ್ಲವನ್ನೂ ಕೊಟ್ಟು ಹೋಗಿದ್ದಾರೆ, ತಂದೆ ತೋರಿಸಿಕೊಟ್ಟ ಹಾದಿಯಲ್ಲಿ ಮಕ್ಕಳಾದ ನಾವು ಮುನ್ನಡೆಯುತ್ತೇವೆ, ಎಲ್ಲರ ಪ್ರೀತಿ ಸಂಪಾದಿಸಿದ್ದ ತಂದೆಯವರು ನಮಗೆ ಧೈರ್ಯ ಮತ್ತು ಸ್ಪೂರ್ತಿಯಾಗಿದ್ದರು, ಅವರ ಅಕಾಲಿಕ ಅಗಲುವಿಕೆ ನಮ್ಮನ್ನು ದುಖದಲ್ಲಿ ಮುಳುಗಿಸಿದೆ ಎಂದರು. ತಂದೆಯ ಮೇಲಿನ ಪ್ರೀತಿಯಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಿದ ಮನೋಹರ್ ರೈ ಮತ್ತು ಸಹಕರಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು.
ಉಸ್ಮಾನ್ ಹಾಜಿ ಅಂಙತ್ತಡ್ಕ, ದಿ.ಯೂಸುಫ್ ಹಾಜಿ ಕಣ್ಣೂರು ಅವರ ಪುತ್ರರಾದ ಹಿದಾಯತ್ ಕಣ್ಣೂರ್ ಹಾಗೂ ಅಮಾನುಲ್ಲ ಕಣ್ಣೂರು, ಕಾಂಗ್ರೆಸ್ ಕೆದಂಬಾಡಿ 185, 186, 187, 188 ಅಧ್ಯಕ್ಷರುಗಳಾದ ಭಾಸ್ಕರ್ ಕೆ ಆರ್, ಅಬ್ದುಲ್ಲ ಹಾಜಿ ಗಟ್ಟಮನೆ, ಸೀತಾರಾಮ್ ರೈ ಬಾಳಾಯ, ರಘನಾಥ್ ರೈ ಚಾವಡಿ, ರಾಕೇಶ್ ರೈ ಬೋಳೋಡಿ, ಬಶೀರ್ ಬಲ್ಕಾಡ್, ಬಶೀರ್ ಕೆ, ಚಿರಂಜಿತ ರೈ, ಮೊಹಮ್ಮದ್ ಕುಂಞಿ ಕೆ, ಗೋಪಾಲ ರೈ ಚಾವಡಿ ಸೇರಿದಂತೆ ಹಲವರು ಮತ್ತಿತರರು ಉಪಸ್ಥಿತರಿದ್ದರು.