ಪ್ರತಿಭಾನ್ವಿತರನ್ನು ಗುರುತಿಸುವುದು ಅತ್ಯಂತ ಶ್ಲಾಘನೀಯ: ಶ್ರೀ ಮಹಾಬಲೇಶ್ವರ ಸ್ವಾಮೀಜಿ
ಕನ್ಯಾನ: ಗ್ರಾಮೀಣ ಭಾಗದ ಪ್ರತಿಭಾನ್ವಿತರನ್ನು, ಹಿರಿಯ ಕಲಾವಿದರನ್ನು ಗುರುತಿಸುವಂತಹ ಕಾರ್ಯ ಅತ್ಯಂತ ಶ್ಲಾಘನೀಯ. ಇದರಿಂದಾಗಿ ಅನೇಕ ಯುವಕರಿಗೆ ಕಲೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪ್ರೇರಣೆ ದೊರೆತಂತಾಗುತ್ತದೆ. ಅವರೊಳಗಿನ ಪ್ರತಿಭೆ ಅನಾವರಣಗೊಂಡು ವ್ಯಕ್ತಿತ್ವ ಅರಳುವುದಕ್ಕೆ ಕಾರಣವಾಗುತ್ತದೆ ಎಂದು ಶ್ರೀಕ್ಷೇತ್ರ ಕಣಿಯೂರಿನ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹೇಳಿದರು.
ಅವರು ಕನ್ಯಾನದ ಶ್ರೀ ಮಲರಾಯ ದೈವದ ಜಾತ್ರೋತ್ಸವದ ಸಂದರ್ಭದಲ್ಲಿ ನಂದಾದೀಪ ಪ್ರಕಾಶನ ಕುಟ್ಟಿತ್ತಡ್ಕದ ಆಶ್ರಯದಲ್ಲಿ ದಿ.ಸುಬ್ಬ ಬೆಳ್ಚಾಡ ಮಕ್ಕೂರಿ ಅವರ ಸ್ಮರಣಾರ್ಥ ಮಂಗಳವಾರ ನಡೆದ ಸನ್ಮಾನ – ಬಿರುದು ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ನಮ್ಮ ಹಿರಿಯರನ್ನು ನೆನಪಿಸಿಕೊಳ್ಳುವುದು, ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ನಡೆಸುವುದು ಒಂದು ಅತ್ಯುತ್ತಮ ಮಾದರಿ. ಸಮಾಜಕ್ಕೊಂದು ಆದರ್ಶವಾಗಿ ಇಂತಹ ಕಾರ್ಯಕ್ರಮಗಳು ಮೂಡಿಬರುವುದಕ್ಕೆ ಸಾಧ್ಯ. ಹಿಂದಿನ ತಲೆಮಾರಿನವರ ತ್ಯಾಗ, ಸಾಧನೆಗಳು ಮುಂದಿನ ತಲೆಮಾರಿಗೆ ಪಸರಿಸುವಲ್ಲಿ ಸ್ಮರಣೆ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ರಂಗಭೂಮಿ ನಿರ್ದೇಶಕ ರಾಜಶೇಖರ ಶೆಟ್ಟಿ ಕುಡ್ತಮುಗೇರು, ರಂಗಭೂಮಿ ಕಲಾವಿದ ರಾಧಾಕೃಷ್ಣ ಕನ್ಯಾನ ಹಾಗೂ ಕಲಾ ಪೋಷಕ ನವೀನ್ ಕೋಟ್ಯಾನ್ ಕನ್ಯಾನ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಉಳ್ಳಾಲದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣ ಕುಮಾರ ಕಮ್ಮಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಖಾ ರಮೇಶ್, ಮಾಜಿ ಅಧ್ಯಕ್ಷ ರಘುರಾಮ ಶೆಟ್ಟಿ, ಶ್ರೀ ಮಲರಾಯಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ಅರ್ಪಿಣಿಗುತ್ತು, ಕರ್ನಾಟಕ ರಾಜ್ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಹಾಗೂ ಮುಖ್ಯೋಪಾಧ್ಯಾಯರ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ದೇವರಾಜ್ ಎಸ್.ಕೆ., ಹಿರಿಯ ರಂಗಭೂಮಿ ಕಲಾವಿದ ಆನಂದ ಬನಾರಿ, ನಂದಾದೀಪ ಪ್ರಕಾಶನದ ಗೌರವಾಧ್ಯಕ್ಷ ಆನಂದ ಬೆಳ್ಚಾಡ ಕುಟ್ಟಿತ್ತಡ್ಕ, ನಾಟಕ ರಚನಾಕಾರ ಶಶಿಧರ್ ಕೆ.ಬಂಡಿತ್ತಡ್ಕ ಉಪಸ್ಥಿತರಿದ್ದರು. ನಂದಾದೀಪ ಪ್ರಕಾಶನದ ಸದಾಶಿವ ಅಳಿಕೆ ಸ್ವಾಗತಿಸಿ, ವಂದಿಸಿದರು.