ಪುತ್ತೂರು: ಬಂಟ್ವಾಳ ತಾಲೂಕು ಪುಣಚ ಗ್ರಾಮದ ತೋಟದಮೂಲೆ ಹಾಗೂ ಪುತ್ತೂರು ತಾಲೂಕು ಇರ್ದೆ ಗ್ರಾಮದ ದರ್ಬೆಯ ನಡುವೆ ಹರಿಯುವ ಸೀರೆ ಹೊಳೆಯ ಮಧ್ಯಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ ವಿಶೇಷವಾಗಿ ಮಳೆಗಾಗಿಯೇ ನಡೆಸುವ ಶ್ರೀ ಸತ್ಯನಾರಾಯಣ ಪೂಜೆಯನ್ನು ಈ ವರ್ಷವೂ ಬಹಳ ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು. ಸತ್ಯಶಂಕರ ಉಪಾಧ್ಯಾಯ ಮಣಿಮುಂಡ ಅವರ ಕೈಂಕರ್ಯದಲ್ಲಿ ಪೂಜಾ ವಿಧಾನ ಕಾರ್ಯ ಎ.26 ರಂದು ನಡೆಯಿತು.

ವಿವಿಧ ಅಲಂಕಾರವನ್ನು ಒಳಗೊಂಡ ಪೂಜೆಯೂ ಸಂಜೆ.6.00ರಿಂದ ನಡೆದು ಮಂಗಳಾರತಿ ,ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಊರ ಪರವೂರಿನ ಭಕ್ತರು ಸೇರಿದಂತೆ ಸುಮಾರು ನೂರರಷ್ಟು ಭಕ್ತರು ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡರು. ಪೂಜೆ ನಡೆದ ಬಳಿಕ ಕೆಲವೆಡೆ ಮಳೆ ಹನಿದ ಘಟನೆಯೂ ನಡೆದಿದೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ,ಜತೆ ಕಾರ್ಯದರ್ಶಿಗಳು,ಕಾರ್ಯಕಾರಿ ಸಮಿತಿ ಮತ್ತು ಸರ್ವಸದಸ್ಯರು ಹಾಗೂ ಹತ್ತು ಊರ ಸಮಸ್ತರು ಉಪಸ್ಥಿತರಿದ್ದರು.
ವರುಣನ ಕೃಪೆಗಾಗಿಯೇ ನಡೆಸುವಂತಹ ಪೂಜೆ
ಸಾಧಾರಣವಾಗಿ ಸತ್ಯನಾರಾಯಣ ಪೂಜೆ ದೇವಸ್ಥಾನದ ಪ್ರಾಂಗಣಗಳಲ್ಲಿ ಅಥವಾ ಮನೆಗಳಲ್ಲಿ ನಡೆಯುವುದನ್ನು ನೋಡಿರುತ್ತೇವೆ ಆದರೆ ಇಲ್ಲಿ ನಡೆಯುವ ಸತ್ಯನಾರಾಯಣ ಪೂಜೆ ಅವೆಲ್ಲಕ್ಕಿಂತ ಭಿನ್ನವಾಗಿದೆ. ಎರಡು ಗ್ರಾಮಗಳಾದ ಪುಣಚ ಮತ್ತು ಇರ್ದೆ ಗ್ರಾಮಗಳ ನದಿಯ ಮಧ್ಯ ಕೇಂದ್ರದಲ್ಲಿ ಮಳೆಗಾಗಿಯೇ ಪೂಜಾ ಕೈಂಕರ್ಯ ಸುಮಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವುದು ಇಲ್ಲಿನ ವಿಶೇಷ.