ಪುತ್ತೂರು: ಬಸ್ ಹಾಗೂ ಬೈಕ್ ನ ನಡುವೆ ನಡೆದ ಅಪಘಾತದಲ್ಲಿ ತಂದೆ-ಮಗ ಮೃತಪಟ್ಟ ಘಟನೆ ಕಬಕ ಸಮೀಪದ ಕೂವೆತ್ತಿಲ ಎಂಬಲ್ಲಿ ಭಾನುವಾರ(ಮೇ.11) ನಡೆದಿದೆ.
ನರಿಕೊಂಬು ನಿವಾಸಿ ಅರುಣ್ ಕುಲಾಲ್(45.ವ) ಮತ್ತು ಅವರ ಪುತ್ರ ಧ್ಯಾನ್ ಮೃತ ದುರ್ದೈವಿಗಳಾಗಿದ್ದಾರೆ.
ಮಾಣಿ – ಮೈಸೂರು ಹೆದ್ದಾರಿಯ ಕಬಕ ಕುವೆತ್ತಿಲ ಸಮೀಪ ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಸರ್ಕಾರಿ ಬಸ್ ಹಾಗೂ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ನ ನಡುವೆ ಈ ಅಪಘಾತ ಸಂಭವಿಸಿತ್ತು.ಈ ಘಟನೆಯಲ್ಲಿ ಅರುಣ್ ಕುಲಾಲ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅವರ ಪುತ್ರ ಧ್ಯಾನ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.

ಸುಳ್ಯಕ್ಕೆ ತನ್ನ ಸಂಬಂಧಿಕರೊಬ್ಬರ ಮಗಳ ಮದುವೆಗೆ ಪಾಲ್ಗೊಳ್ಳಲು ತಂದೆ ಮತ್ತು ಮಗ ಇಬ್ಬರೂ ಬೈಕ್ ನಲ್ಲಿ ಹೊರಟಿದ್ದ ಸಂದರ್ಭದಲ್ಲಿ ಕಬಕದ ಕುವೆತ್ತಿಲ ತಿರುವಿನಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಸರ್ಕಾರಿ ಬಸ್ಸಿನ ಚಾಲಕನ ನಿರ್ಲಕ್ಷತೆಗೆ ಬೈಕ್ ಡಿಕ್ಕಿಯಾಗಿ ಇವರಿಬ್ಬರೂ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕೆಎಸ್ಸಾರ್ಟಿಸಿ ಚಾಲಕನ ಮೇಲೆ ಪ್ರಕರಣ ದಾಖಲಿಸಲಾಗಿದೆ.