ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ

0

ಗ್ರಾ.ಪಂ. ಜಾಗ ಹಸ್ತಾಂತರಿಸಿದರೆ ಸುವ್ಯವಸ್ಥಿತ ಬಸ್ ನಿಲ್ದಾಣ: ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: ಇಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ 4.0 ಎಕ್ರೆ ಭೂಮಿಯನ್ನು ಗುರುತಿಸಿದ್ದು, ಅದರ ಭೂ ಸ್ವಾಧೀನ ಪ್ರಕ್ರಿಯೆ ಚಾಲನೆಗೊಂಡಿದೆ. ಆದರೆ ಪ್ರಸಕ್ತ ಇರುವ ಗ್ರಾಮ ಪಂಚಾಯತ್ ಒಡೆತನದ ಬಸ್ ನಿಲ್ದಾಣವನ್ನೇ ಕೆಎಸ್ಸಾರ್ಟಿಸಿಗೆ ಹಸ್ತಾಂತರಿಸಿದರೆ ಅಲ್ಲಿ ಸುವ್ಯವಸ್ಥಿತ ಬಸ್ ನಿಲ್ದಾಣವನ್ನು ನಿರ್ಮಿಸಲು ರಾಜ್ಯ ರಸ್ತೆ ಸಾರಿಗೆ ನಿಗಮವು ಆಸಕ್ತಿ ತಾಳಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.


ಗುರುವಾರದಂದು ಉಪ್ಪಿನಂಗಡಿಯಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಇರುವ ಗ್ರಾಮ ಪಂಚಾಯತ್ ಅಧೀನದ ಬಸ್ ನಿಲ್ದಾಣದ ಸುತ್ತಮತ್ತಲಿನ ಕಟ್ಟಡಗಳನ್ನು ತೆರವುಗೊಳಿಸಿ, ಸನಿಹದ ಕಂದಾಯ ಇಲಾಖಾ ಭೂಮಿಯನ್ನು ಒಳಗೊಂಡು ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಹಸ್ತಾಂತರಿಸಿದರೆ, ಅವರು ಇಲ್ಲಿ ಯೋಜನಾಬದ್ದವಾಗಿ ಬಸ್ ನಿಲ್ದಾಣವನ್ನು ನಿರ್ಮಿಸಲು ಸಿದ್ಧರಿದ್ದಾರೆ. ಈ ಸಂಬಂಧ ಪಂಚಾಯತ್ ಅಧೀನದ ಭೂಮಿ ಹಾಗೂ ಕಂದಾಯ ಇಲಾಖಾ ಅಧೀನದ ಭೂಮಿಯ ಅನುಪಾತದನ್ವಯ ಬಸ್ ನಿಲ್ದಾಣ ಕಟ್ಟಡದಲ್ಲಿ ಪಂಚಾಯತ್ ಹಾಗೂ ಕಂದಾಯ ಇಲಾಖೆಗೆ ಕಟ್ಟಡಗಳನ್ನು ಸಾರಿಗೆ ನಿಗಮವು ಒದಗಿಸುವುದು. ಮಾತ್ರವಲ್ಲದೆ ಇಲ್ಲಿ ಬೇರೆ ಬಸ್ ನಿಲ್ದಾಣಗಳಿಲ್ಲದ ಕಾರಣ ಇದೇ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಸುಗಳಿಗೂ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು ಎಂದರಲ್ಲದೆ, ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಸಾಧಿಸಬೇಕಾದರೂ ಮೊತ್ತ ಮೊದಲಾಗಿ ಪಂಚಾಯತ್ ಆಡಳಿತ ತನ್ನ ಅಧೀನದ ಬಸ್ ನಿಲ್ದಾಣವನ್ನು ಕೆಎಸ್ಸಾರ್ಟಿಸಿಗೆ ಹಸ್ತಾಂತರಿಸಲು ಮೊದಲ ಹೆಜ್ಜೆ ಇಡಬೇಕಾಗಿದೆ ಎಂದರು.


ಪ್ರವಾಸಿ ಬಂಗ್ಲೆಯ ಸ್ಥಳದಲ್ಲಿ ಪಾರ್ಕ್ ನಿರ್ಮಿಸಬೇಕೆಂಬ ಸ್ಥಳೀಯ ಪಂಚಾಯತ್ ಸದಸ್ಯರ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ ಶಾಸಕರು, ಸಾರ್ವಜನಿಕ ಹಣದಲ್ಲಿ ನಡೆಯುವ ಪ್ರತಿಯೊಂದು ಕಾಮಗಾರಿಯು ಪ್ರಯೋಜನಕ್ಕೆ ಬರಬೇಕು. ಪಾರ್ಕ್ ಹೆಸರಿನಲ್ಲಿ ಹಣ ಖರ್ಚು ಮಾಡಿ ಬಳಿಕ ನಿರ್ವಹಣೆ ಇಲ್ಲದೆ ಪೊದೆಗಳ ಪಾರ್ಕ್ ಆಗಿ ಅಡ್ಡ ಕೆಲಸಗಳಿಗೆ ಬಳಕೆಯಾಗುವುದನ್ನು ಒಪ್ಪಲಾರೆ. ಅದಕ್ಕಾಗಿ ಅಲ್ಲಿ ಹೊಸ ಪ್ರವಾಸಿ ಬಂಗ್ಲೆ ನಿರ್ಮಾಣಕ್ಕೆ ಗಮನ ಹರಿಸಲಾಗಿದೆ ಎಂದರು.


ಉಪ್ಪಿನಂಗಡಿಯ ಕಜೆಕ್ಕಾರ್ ಎಂಬಲ್ಲಿ ಕ್ರೀಡಾಂಗಣ, ಈಜುಕೊಳ, ಪಾರ್ಕ್ ನಿರ್ಮಾಣಕ್ಕಾಗಿ ಐದಾರು ಎಕ್ರೆ ಭೂಮಿಯನ್ನು ಗುರುತಿಸಲಾಗಿದ್ದು, ಯುವ ಜನ ಸಬಲೀಕರಣ ಯೋಜನೆಯಡಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದಿಂದ ಯಥೇಚ್ಚ ಅನುದಾನ ಲಭಿಸಲಿದೆ. ಅಲ್ಲಿ ಮುಂದಿನ ಪೀಳಿಗೆ ನೆನೆಪಿಸುವ ರೀತಿಯಲ್ಲಿ ಉತ್ತಮವಾದ ಯೋಜನಾಬದ್ದವಾದ ಕ್ರೀಡಾಂಗಣ ,ಈಜುಕೊಳ, ವಾಕಿಂಗ್ ಟ್ರಾಕ್, ಪಾರ್ಕ್‌ಗಳನ್ನು ನಿರ್ಮಿಸಲು ಕಾರ್ಯಪ್ರವೃತ್ತರಾಗಿ ಎಂದರಲ್ಲದೆ, ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಜನವಸತಿ ಇಲ್ಲದ, ಕಾಡಿನ ಸನಿಹದ ಕಂದಾಯ ಇಲಾಖಾ ಭೂಮಿಯಲ್ಲಿ ನಿರ್ಮಿಸಲು ಸಲಹೆ ನೀಡಿದ ಅವರು, ಈ ನಿಟ್ಟಿನಲ್ಲಿ ಸನಿಹದ ಕೆಲವೊಂದು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಒಂದೆಡೆ ಘಟಕ ತೆರೆಯಲು ಮುಂದಾಗಬೇಕೆಂದರು.


ಈ ಸಂಧರ್ಭದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ತಾಂತ್ರಿಕ ಅಭಿಯಂತರರಾದ ಕೆ.ಎಚ್. ಶ್ರೀನಿವಾಸ್, ಮುಖ್ಯ ಅಭಿಯಂತರ ಕೆ.ಎಚ್. ಹವಾಲ್ದಾರ್ , ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್ , ಪಿಡಿಒ ಲಾರೆನ್ಸ್ ವಿಲ್ಪ್ರೆಡ್ ರೋಡ್ರಿಗಸ್ , ಸ್ಥಳೀಯ ಪಂಚಾಯತ್ ಸದಸ್ಯರಾದ ಯು.ಟಿ. ಮುಹಮ್ಮದ್ ತೌಸೀಫ್, ಧನಂಜಯ ನಟ್ಟಿಬೈಲ್, ರಶೀದ್ ಮಠ, ಪ್ರಮುಖರಾದ ಅಜೀಜ್ ಬಸ್ತಿಕಾರ್, ಆದಂ ಕೊಪ್ಪಳ, ನಜೀರ್ ಮಠ, ಸುಂದರ ಗೌಡ ಮೊದಲಾದವರು ಉಪಸ್ಥಿತರಿದ್ದರು.


ಲಾಲಿ ಮಾರಾಟಗಾರನನ್ನು ಕಂಡು ಮರುಳಾದ ಶಾಸಕರು:
ಬಸ್ ನಿಲ್ದಾಣ ಪರಿಸರದಲ್ಲಿ ಪ್ಲಾಸ್ಟಿಕ್ ಪಾತ್ರೆಯಲ್ಲಿ ಲಾಲಿ ತುಂಬಿಸಿ ಮಾರಾಟ ಮಾಡುತ್ತಿದ್ದ ಕಡವಿನ ಬಾಗಿಲು ನಿವಾಸಿ ರಫೀಕ್ ಎಂಬಾತನ ದುಡಿಮೆಯನ್ನು ಕಂಡು ಆತನ ಜೊತೆ ಮಾತಿಗಿಳಿದ ಶಾಸಕರು, ಈ ದುಡಿಮೆ ಜೀವನ ನಿರ್ವಹಣೆಗೆ ಸಾಕಾಗುವುದೇ ? ಎಂದು ಪ್ರಶ್ನಿಸಿದರು. ಅದಕ್ಕೆ ರಫೀಕ್ , ನಾನು ಕಳೆದ ನಲ್ವತ್ತು ವರ್ಷಗಳಿಂದ ಇದೇ ಕಾಯಕವನ್ನು ನಡೆಸುತ್ತಾ ನನ್ನ ಕುಟುಂಬದ ಜೀವನ ನಿರ್ವಹಣೆಯನ್ನು ಮಾಡುತ್ತಿದ್ದೇನೆ. ಕಾಲಕಾಲಕ್ಕೆ ಲಾಲಿ, ಹಣ್ಣುಗಳನ್ನು ತುಂಬಿ ಪ್ರಯಾಣಿಕರ ಬಳಿಗೆ ಹೋಗಿ ಮಾರಾಟ ಮಾಡುತ್ತಾ ತೃಪ್ತಿದಾಯಕ ಸಂಪಾದನೆ ಮಾಡುತ್ತಿದ್ದೇನೆ ಎಂದು ತಿಳಿಸಿದಾಗ , ಆತನ ಮೇಲೆ ಅಭಿಮಾನಗೊಂಡ ಶಾಸಕರು ಆತನಿಗೆ 500 ರೂಪಾಯಿ ನೀಡಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here