ಪುತ್ತೂರು : ವಿದ್ಯಾರ್ಥಿಗಳನ್ನು ತಿದ್ದುವುದರಲ್ಲಿ ಮತ್ತು ಬೆಳೆಸುವುದರಲ್ಲಿ ಶಿಕ್ಷಕರು ಮತ್ತು ಪೋಷಕರು ಎಡವುತ್ತಿದ್ದಾರೆ. ಮಕ್ಕಳನ್ನು ಸರಿದಾರಿಗೆ ತರುವ ವಿಚಾರ ಮತ್ತು ಮಕ್ಕಳಿಗೆ ಒಳ್ಳೆಯ ಮಾರ್ಗದಲ್ಲಿ ನಡೆಯಲು ಶಿಕ್ಷಕರ ಜೊತೆ ಪೋಷಕರು ಕೂಡ ಕೈಜೋಡಿಸಬೇಕು. ಪೋಷಕರು ಮತ್ತು ಶಿಕ್ಷಕರು ಪ್ರತಿದಿನ, ಪ್ರಸ್ತುತ ವಿಷಯದ ಪ್ರಸ್ತುತ ವಿಷಯಗಳ ಬಗ್ಗೆ ಅಪ್ಡೇಟ್ ಆಗಬೇಕು ಎಂದು ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಮುರಳಿಧರ ನುಡಿದರು.

ಪುತ್ತೂರಿನ ನೆಹರುನಗರದ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಮಾಜ ವಿಜ್ಞಾನ ಶಿಕ್ಷಕರ ಪುನಶ್ಚೇತನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಸಮಿತಿಯ ಸದಸ್ಯ ಚಂದ್ರಶೇಖರ ಎಸ್ ಮಾತನಾಡಿ, ಜೀವನದಲ್ಲಿ ಯಾರೂ ಪರಿಪೂರ್ಣರಲ್ಲ. ಪರಿಸ್ಥಿತಿಗೆ ತಕ್ಕಂತೆ ಬದಲಾವಣೆ ಜಗದ ನಿಯಮ. ಅದಕ್ಕೆ ತಕ್ಕಂತೆ ಹೊಂದಿಕೊಂಡು ಬಾಳಬೇಕಾದ್ದು ಅನಿವಾರ್ಯ. ಕಲಿಯುವ ಮಕ್ಕಳ ಹಾಗೂ ಕಲಿಸುವ ಶಿಕ್ಷಕರ ಜೀವನ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿ ಸರಕಾರಿ ಪ್ರೌಢಶಾಲೆ ಕಾಯರ್ತಡ್ಕದ ಸಹಶಿಕ್ಷಕ ಆನಂದ ಆಪ್ಟೆ ಹಾಗೂ ಸಮಾಜ ವಿಜ್ಞಾನ ವಿಷಯ ವರ್ತುಲ ಸಂಯೋಜಕಿ ಸೌಮ್ಯಾಕುಮಾರಿ ಉಪಸ್ಥಿತರಿದ್ದರು.
ಶ್ರೀರಾಮ ವಿದ್ಯಾ ಸಂಸ್ಥೆ ಕಲ್ಲಡ್ಕ ಮತ್ತು ಉಪ್ಪಿನಂಗಡಿಯ ಶಿಕ್ಷಕರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ವಿಷಯ ವರ್ತುಲ ಸಂಯೋಜಕಿ ಸೌಮ್ಯಾಕುಮಾರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ನುಡಿದರು. ಇಂದ್ರಪ್ರಸ್ಥ ವಿದ್ಯಾಸಂಸ್ಥೆಯ ಶಿಕ್ಷಕಿ ಶಶಿಕಲಾ ವಂದಿಸಿ, ಶ್ವೇತಾ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

ದಿನಪತ್ರಿಕೆ ಸಮಾಜದ ಪ್ರತಿಬಿಂಬವಿದ್ದಂತೆ. ದಿನಪತ್ರಿಕೆಯನ್ನು ಓದುವುದು ಮತ್ತು ವಿದ್ಯಾರ್ಥಿಗಳಿಗೆ ಓದಲು ಪ್ರೇರೇಪಿಸುವ ಮೂಲಕ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿಸುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಶಿಕ್ಷಕರ ಜೊತೆ ಮಕ್ಕಳು ಕೂಡ ಕಲಿಕೋಪಕರಣ ತಯಾರಿಯಲ್ಲಿ ತೊಡಗಿಕೊಳ್ಳುವಂತಾಗಬೇಕು. ಡಿಜಿಟಲ್ ನಕ್ಷೆಯ ಮೂಲಕ ಭಾರತ ಭೂಪಟ ಪರಿಚಯ ಪ್ರಚಲಿತ.
ಆನಂದ ಆಪ್ಟೆ
ಸಹ ಶಿಕ್ಷಕರು, ಸ. ಪ್ರೌ. ಶಾಲೆ, ಕಾಯರ್ತಡ್ಕ